ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಭಯವಿಲ್ಲದೆ, ಹಬ್ಬದಂತೆ ಸಂಭ್ರಮದಿಂದ ಆತ್ಮವಿಶ್ವಾಸದೊಂದಿಗೆ ಎದುರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಹೇಳಿದರು.
ಭಾಲ್ಕಿ ಪಟ್ಟಣದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 90+ ಶೇಕಡಾ ಫಲಿತಾಂಶ ಸಾಧಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ’ ಎಂದರು.
‘ಕಳೆದ ಸಾಲಿನಲ್ಲಿ ಜಿಲ್ಲೆಗೆ ಭಾಲ್ಕಿ ಪ್ರಥಮ ಸ್ಥಾನ ಪಡೆದರೂ 72 ಶೇಕಡಾ ಫಲಿತಾಂಶ ಮಾತ್ರ ಲಭಿಸಿತ್ತು. ಈ ವರ್ಷ ಶೇ90ಕ್ಕೂ ಹೆಚ್ಚು ಫಲಿತಾಂಶಕ್ಕಾಗಿ ಎಲ್ಲರೂ ಶ್ರಮಿಸಬೇಕು ‘ಎಂದು ಕರೆ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ಜಯರಾಜ್ ಧಾಬಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ಓದು, ಬರವಣಿಗೆ, ಆಲಿಕೆ ಹಾಗೂ ಮಾತನಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಮೊಬೈಲ್ ಮತ್ತು ಟಿವಿಯಿಂದ ದೂರವಿಡಬೇಕು’ ಎಂದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ದತ್ತು ಕಾಟಕರ ಮಾತನಾಡಿ, ‘ಎಸ್.ಎಸ್.ಎಲ್.ಸಿ ಜೀವನದ ಮಹತ್ವದ ಘಟ್ಟವಾಗಿದ್ದು ಸಮಯ ಪಾಲನೆ ಅತಿ ಮುಖ್ಯ’ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಮಲ್ಲಿಕಾರ್ಜುನ್ ಕನ್ನಾಳೆ, ವಿಷಯ ಸಂಪನ್ಮೂಲ ವ್ಯಕ್ತಿ ಶಾಂತಿ ದೇಸಾಯಿ ಅವರು ಪರೀಕ್ಷೆ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ್, ಶಿಕ್ಷಕ ವಿಜಯಕುಮಾರ್ ಗೌಡಗಾಂವೆ, ಸಿ.ಆರ್.ಪಿ. ಚನ್ನಪ್ಪ ಸೇರಿದಂತೆ ಭಾಲ್ಕಿ ವಲಯದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು





