ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಭಾಲ್ಕಿ ತಾಲೂಕಿನ ಬಾಳೂರ ಗ್ರಾಮದಲ್ಲಿ ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ, ವಾರ್ಷಿಕೋತ್ಸವ ಹಾಗೂ ಗೌತಮ ಬುದ್ಧ ಪ್ರತಿಮೆ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣದಿಂದ ದೇಶದ ಭವಿಷ್ಯ ರೂಪುಗೊಳ್ಳಲು ಸಾಧ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನಂತೆ ದೇಶ ಸಾಮಾಜಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಪೂರಕವಾಗಿದೆ. ಶಿಕ್ಷಣ, ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ’ ಎಂದು ನುಡಿದರು.
‘ಗ್ರಾಮೀಣ ಭಾಗದ ಕಾರ್ಮಿಕರಿಗೆ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಮನರೇಗಾ ಹೆಸರು ಬದಲಾವಣೆಯ ಕೇಂದ್ರ ಸರ್ಕಾರದ ಹೊಸ ಮಸೂದೆ ಕಾರ್ಮಿಕರಿಗೆ ಮಾಡುವ ಮೋಸವಾಗಿದೆ. ದೇಶದ ಸಂವಿಧಾನ ಹಕ್ಕಿನಿಂದ ಆಯ್ಕೆಯಾದ ನಾನು ಸಂವಿಧಾನ ಉಳಿವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು.

ಬೀದರ್ ವಿವಿ ಸಿಂಡಿಕೇಟ್ ಸದಸ್ಯ ವಿಠಲದಾಸ ಪ್ಯಾಗೆ ಮಾತನಾಡಿ, ‘ಶಿಕ್ಷಣ ಎಂಬುದು ದೊಡ್ಡ ಅಸ್ತ್ರ. ಮೌಲ್ಯ ಶಿಕ್ಷಣದಿಂದ ಸಮಾಜದಲ್ಲಿ ಧನಾತ್ಮಕ ಚಿಂತನೆ ಬಿತ್ತಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಶಾಲೆ ತೆರೆದು ಶಿಕ್ಷಣ ನೀಡುವ ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಸಾಮಾಜಿಕ ಕಾರ್ಯ ನಿರಂತರವಾಗಿ ಸಾಗಲಿ’ ಎಂದು ಹಾರೈಸಿದರು.
ಸಂವಿಧಾನ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ಬೆಲ್ದಾರ್ ಮಾತನಾಡಿ, ‘ಶಿಕ್ಷಣದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿತವಾದ ಗೌತಮ ಬುದ್ಧ ಶಿಕ್ಷಣ ಸಂಸ್ಥೆ ಈ ಭಾಗದ ಅನೇಕ ವಿದ್ಯಾರ್ಥಿಗಳು, ಶಿಕ್ಷಕರ ಬದುಕಿಗೆ ಬೆಳಕು ನೀಡಿದೆ ‘ ಎಂದು ತಿಳಿಸಿದರು.
ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಕಾಶಿನಾಥ ಚೆಲ್ವಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ 1984ರ ಅವಧಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದೇನೆ. ಈ ಸಂಸ್ಥೆ ಪ್ರಾಥಮಿಕ ಹಂತದಿಂದ ಪದವಿವರೆಗೆ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರ ನೀಡಿ ಸೇವೆಗೈದಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಆಶಯಗಳೊಂದಿಗೆ ಮಕ್ಕಳನ್ನು ವೈಚಾರಿಕ, ವೈಜ್ಞಾನಿಕ ಮನೋಭಾವ ಬಿತ್ತುವುದು ನಮ್ಮ ಉದ್ದೇಶವಾಗಿದೆ’ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಭಂತೆ ಧಮ್ಮದೀಪ ಹಾಲಹಳ್ಳಿ, ಭಂತೆ ನೌಪಾಲ ಭಾಲ್ಕಿ ಹಾಗೂ ಭಿಕ್ಕು ಸಂಘ ಅವರು ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಿದ ಗೌತಮ ಬುದ್ಧ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಗೌತಮ ಬುದ್ಧರ ಭಾವಚಿತ್ರ ಮೆರವಣಿಗೆ ಭವ್ಯವಾಗಿ ನಡೆಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ : ಬೀದರ್ | VB-G RAM G ಮಸೂದೆ: ಡಿ.22ರಂದು ಸಂಸದರ ಕಚೇರಿ ಎದುರು ಪ್ರತಿಭಟನೆ
ಸಮಾರಂಭದಲ್ಲಿ ಪ್ರಮುಖರಾದ ಶಿವರಾಜ್ ಹಾಸನಕರ್, ಎಲ್.ಜಿ ಗುಪ್ತಾ, ಲಕ್ಷ್ಮಿಬಾಯಿ ನಾರಾಯಣರಾವ್ ಚೆಲ್ವಾ, ಬಾಪುರಾವ್ ದೇಶಮುಖ, ಪ್ರೇಮಸಾಗರ ದಾಂಡೇಕರ್, ಈಶ್ವರಪ್ಪಾ ಗಾಯಕವಾಡ, ಸಿದ್ರಾಮ ದೇಶಮುಖ, ದಶರಥ ಗುರು, ತಿಪ್ಪಣ್ಣಾ ಶಿವಪೂರೆ, ಮಹೇಶ್ ಗೊರನಾಳಕರ್, ಪ್ರಶಾಂತ್ ದೊಡ್ಡಿ, ವಿನಯಕುಮಾರ್ ಮಾಳಗೆ, ಬಾಲಾಜಿ ಕುಂಬಾರ, ಮನೋಹರ ಮೈಸೆ, ಸೂರ್ಯಕಾಂತ ಸಾದುರೆ, ರಾಜಪ್ಪಾ ಗೂನಳ್ಳಿಕರ್, ದೀಲಿಪ್ ಭೋಸ್ಲೆ, ವಿನೋದ ಅಪ್ಪೆ, ಮನೋಹರ ಮೈಸೆ, ವಿನೋದಕುಮಾರ್ ಬಂದಗೆ, ಸೂರ್ಯಕಾಂತ ಸಿಂಗೆ, ಶ್ಯಾಮಸುಂದರ್ ಖಾನಾಪುರ, ಮುಕೇಶ್ ಚೆಲ್ವಾ, ನಾಗೇಶ್ ಚೆಲ್ವಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ಪಾಲಕರು ಮತ್ತಿತರರು ಉಪಸ್ಥಿತರಿದ್ದರು.





