ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಉತ್ತಮ ಸಾಧನೆ ಮಾಡಬಹುದು. ಸಾಧನೆಗೆ ಮಹೋನ್ನತ ಗುರಿ ಹೊಂದಿರಬೇಕು. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಭಾಲ್ಕಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಹೇಳಿದರು.
ಭಾಲ್ಕಿ ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢ ಶಾಲೆಯಲ್ಲಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ 42ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾ.18ರಿಂದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಡೆಯಲಿವೆ. ಪರೀಕ್ಷೆಗಳಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೇ ಆತ್ಮವಿಶ್ವಾಸ, ಧೈರ್ಯದಿಂದ ಎದುರಿಸಬೇಕು. ಬದುಕಿನಲ್ಲಿ ಸತತ ಪ್ರಯತ್ನ, ಉನ್ನತ ಸಾಧನೆಯ ಗುರಿ ಹೊಂದಿರಬೇಕು. ಪರೀಕ್ಷಾ ಸಮಯದಲ್ಲಿ ಯಾವುದೇ ಅನಗತ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೆ, ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕುʼ ಎಂದು ಹೇಳಿದರು.
ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ದತ್ತಾತ್ರಿ ಕಾಟಕರ ಮಾತನಾಡಿ, ʼಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಪಾಠ ಮಾಡಬೇಕು. ಗುಣಮಟ್ಟ ಹಾಗೂ ಸಂಸ್ಕಾರ ಶಿಕ್ಷಣದೊಂದಿಗೆ ಫಲಿತಾಂಶ ಹೆಚ್ಚಿಸುವಲ್ಲಿ ಗಮನ ಹರಿಸಬೇಕುʼ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಂದಾದೀಪ ಬೊರಾಳೆ ಮಾತನಾಡಿ, ʼವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾದದು, ಕಠಿಣ ಪರಿಶ್ರಮ, ನಿರಂತರ ಅಧ್ಯಯನದೊಂದಿಗೆ ಮುನ್ನಡೆದಾಗ ಅಮೋಘ ಸಾಧನೆ ಸಾಧ್ಯʼ ಎಂದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕಿ ಕ್ರಾಂತಿ ಬಸಪ್ಪಾ ಕಲವಾಡಿಕರ್ ಅವರು ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಕೆಎಲ್ಇ ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಮಹಿಳಾ ದಿನಾಚರಣೆ : ಕ್ಯಾನ್ಸರ್ ಗೆದ್ದ ಮಹಿಳೆಗೆ ಸನ್ಮಾನ
ಮುಖ್ಯಶಿಕ್ಷಕ ಶಿವಕುಮಾರ ವಾಡಿಕರ, ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ ಧಬಾಲೆ, ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ರಾಜ್ಯ ಉಪಾಧ್ಯಕ್ಷ ಸುಧಾಕರ ಗಾಯಕವಾಡ, ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ, ಮುಖಂಡ ಸಿದ್ದಾ, ವಿದ್ಯಾಭಾರತಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ತೇಗಂಪೂರೆ, ಪಂಡಿತರಾಯ ಬಿರಾದಾರ, ವಿಜಯಕುಮಾರ ಗುತ್ತೆದಾರ, ಆನಂದ ಖಂಡಗೊಂಡ, ವಿಜಯಲಕ್ಷ್ಮಿ ರಾಠೋಡ, ಪ್ರದೀಪ ಜೊಳದಪಕೆ, ಓಂಝಡ್ ಬಿರಾದಾರ, ಪ್ರವೀಣ ಸಿಂಧೆ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿವಕುಮಾರ ಸ್ವಾಗತಿಸಿದರು. ವಿಜಯಕುಮಾರ ನಿರೂಪಿಸಿದರು. ಪ್ರದೀಪ ವಂದಿಸಿದರು.





