ಪುಸ್ತಕ ಸಂಸ್ಕೃತಿ ಹಾಗೂ ಓದುವಿಕೆ ನಮ್ಮ ಬದುಕಿನ ಭಾಗಗಳು. ಪುಸ್ತಕಗಳು ನಮ್ಮ ಪರಂಪರೆ, ಭಾರತೀಯ ಸಂಸ್ಕೃತಿ, ಇತಿಹಾಸ, ಬದುಕಿನ ಕಲೆ ಮತ್ತು ಮೌಲ್ಯಗಳನ್ನು ಪುಸ್ತಕ ತಿಳಿಸುತ್ತದೆ ಎಂದು ಹಿರಿಯ ಪತ್ರಕರ್ತ ಗಣಪತಿ ಬೋಚರೆ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಹಯೋಗದಲ್ಲಿ ಭಾಲ್ಕಿ ಪಟ್ಟಣದ ಸಾಹಿತಿ ಡಾ.ಮಕ್ತುಂಬಿ ಎಂ.ಅವರ ಮನೆಯಲ್ಲಿ ಆಯೋಜಿಸಿದ ʼಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭʼ ಉದ್ಘಾಟಿಸಿ ಅವರು ಮಾತನಾಡಿದರು.
ʼಎರಡು ದಶಕಗಳ ಹಿಂದೆ ಗ್ರಂಥಾಲಯಗಳು ಓದುಗರಿಂದ ತುಂಬಿ ತುಳುಕುತ್ತಿದ್ದವು. ಇತ್ತೀಚೆಗೆ ಅತಿಯಾದ ಮೊಬೈಲ್ ಬಳಕೆಯ ಗೀಳಿನಿಂದಾಗಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಜ್ಞಾನದ ನಿರಂತರ ಧಾರೆ ಪುಸ್ತಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಪುಸ್ತಕ ಓದುವ ಸಂಸ್ಕೃತಿ ಹೆಚ್ಚಾಗಬೇಕಿದೆʼ ಎಂದರು.
ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಮಾತನಾಡಿ, ʼಓದುಗರನ್ನು ಮತ್ತೆ ಪುಸ್ತಕಗಳತ್ತ ಕರೆತರಲು, ಓದುವ ಅಭ್ಯಾಸ ಉತ್ತೇಜಿಸಬೇಕೆಂಬ ಮಹತ್ವಕಾಂಕ್ಷಿ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯಾವುದೇ ಕಾಲದ ಸಂಸ್ಕತಿ, ಜನಜೀವನ ಅರ್ಥಮಾಡಿಕೊಳ್ಳಲು ನಮಗೆ ಅಧಿಕೃತವಾಗಿ ಸಿಗುವ ಆಕರಗಳೆಂದರೆ ಪುಸ್ತಕಗಳು. ಪುಸ್ತಕಗಳು ಆಯಾ ಕಾಲದ ಸಂಸ್ಕೃತಿಯ ಜೀವಂತ ಪ್ರತೀಕ. ಪುಸ್ತಕ ನಾಗರಿಕತೆಯ ತಳಹದಿ, ಜ್ಞಾನಾರ್ಜನೆಯ ಮಾಧ್ಯಮದ ಒಂದು ಪ್ರಮುಖ ಸಾಧನ. ಅನುಭವ, ಜ್ಞಾನದ ಅಭಿವ್ಯಕ್ತಿ ರೂಪವಾದ ಪುಸ್ತಕ ಸಂಸ್ಕತಿಯ ನಿರಂತರ ಪ್ರವಾಹಕ್ಕೆ ಸೇತುವೆಯಾಗಿವೆʼ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಬಿಆರ್ಪಿ ಚೇತನಾ ಚನ್ನಶೆಟ್ಟಿ ಅವರು ಮಾತನಾಡಿ, ʼಪುಸ್ತಕ ಓದುವುದೆಂದರೆ ಅರಿವನ್ನು ವಿಸ್ತರಿಸಿಕೊಳ್ಳುವುದು ಎಂದರ್ಥ. ಯುವ ಜನಾಂಗ ಸೇರಿ ಎಲ್ಲ ವಯೋಮಾನದವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದು , ಪುಸ್ತಕ ಓದುವ ಸಂಸ್ಕೃತಿಯನ್ನು ಮರೆತು ಸಮಾಜಮುಖಿ ಸಂವೇದನೆ ಕಳೆದುಕೊಳ್ಳುವಂತಾಗಿದೆ. ನಾವೆಲ್ಲರೂ ಮೊಬೈಲ್ ಬಿಟ್ಟು ಮತ್ತೆ ಕೈಯಲ್ಲಿ ಪುಸ್ತಕ ಹಿಡಿಯುವುದು ಅಗತ್ಯವಾಗಿದೆʼ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಡಾ.ಮಕ್ತುಂಬಿ ಎಂ ಅವರು ಮಾತನಾಡಿ, ʼಪುಸ್ತಕ ಓದುವ ಹವ್ಯಾಸ ಎಲ್ಲರೂ ಬೆಳಿಸಿಕೊಳ್ಳಬೇಕಾಗಿದೆ. ಓದು-ಬರಹದಿಂದ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಲು ಸಾಧ್ಯ. ಮನೆಗೊಂದು ಗ್ರಂಥಾಲಯ ಮೂಲಕ ಮನೆ-ಮನೆಗೆ ಪುಸ್ತಕ ಸಂಸ್ಕೃತಿ ಜಾಗೃತಿ ಮೂಡಿಸುವ ಪ್ರಾಧಿಕಾರದ ಕಾರ್ಯ ನಿಜಕ್ಕೂ ಶ್ಲಾಘನೀಯʼ ಎಂದರು.
ಭಾಲ್ಕಿ ಗ್ರಂಥಾಲಕ ಸಹಾಯಕ ನಿಂಗಪ್ಪ ಗಚ್ಚಿನಮನಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಗುಂಡಪ್ಪ ಸಂಗಮಕರ್, ವಕೀಲರಾದ ಅಮೂಲ ತಳವಾಡಕರ್ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ : ಅಂಗನವಾಡಿ ಕಾರ್ಯಕರ್ತೆ ಅಮಾನತು
ಕಾರ್ಯಕ್ರಮದಲ್ಲಿ ಪಿಡಿಒ ಯೋಗೇಶ ಹಿರೇಮಠ, ಯುವ ಚಿಂತಕರಾದ ಉಮಾಕಾಂತ ವಿಳಾಸಪುರೆ, ಸೋಹೇಲ್, ಪೃಥ್ವಿ ಮತ್ತಿತರರಿದ್ದರು.





