ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಪ್ರತಿ ವರ್ಷದಂತೆ ಭಾನುವಾರ 2026-27ನೇ ಸಾಲಿನ ಮೊದಲ ಹಂತದ ಗುರುಕುಲ ಗೋಲ್ಡನ್ ಸ್ಕಾಲರಶಿಪ್ ಪ್ರವೇಶ ಪರೀಕ್ಷೆ ಸುಸೂತ್ರವಾಗಿ ನಡೆದವು.
2026ರ ಜನವರಿ ಅಂತ್ಯದ ವರೆಗೂ ಐದು ಹಂತದಲ್ಲಿ ಪರೀಕ್ಷೆ ನಡೆಯಲಿದ್ದು ಮೊದಲ ಹಂತದ ಪರೀಕ್ಷೆಗೆ ರಾಜ್ಯ ಸೇರಿ ನೆರೆಯ ಮಹಾರಾಷ್ಟ್ರ ತೆಲಂಗಾಣ ರಾಜ್ಯದ ನಾನಾ ಕಡೆಗಳಿಂದ 1,900 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಅದರಲ್ಲಿ ವಿವಿಧೆಡೆ ಪ್ರಸ್ತುತ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 1,207 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಸುಮಾರು 25 ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ತೆಲಂಗಾಣ ರಾಜ್ಯದ ಜಹೀರಾಬಾದ್, ಹೈದರಾಬಾದ್ ಮತ್ತು ಮಹಾರಾಷ್ಟ್ರದ ನಾಂದೇಡ, ಲಾತೂರು, ಉದಗೀರ, ಸೋಲಾಪುರ ಸೇರಿದಂತೆ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು.
100 ಮಕ್ಕಳಿಗೆ ಉಚಿತ ಶಿಕ್ಷಣ :
ಗುರುಕುಲ ಗೋಲ್ಡನ್ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ 100 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಎರಡು ವರ್ಷ ಪಿಯುಸಿ ಶಿಕ್ಷಣ, ವಸತಿ, ಕೋಚಿಂಗ್ ಮತ್ತು ರಿಯಾಯಿತಿ ಫೀನಲ್ಲಿ ಶಿಕ್ಷಣ ಸಿಗಲಿದೆ. ಮೊದಲ 25 ರ್ಯಾಂಕ್
ಪಡೆಯುವ ವಿದ್ಯಾರ್ಥಿಗಳು ಉಚಿತ ಶಿಕ್ಷಣ, ವಸತಿ ಮತ್ತು ಕೋಚಿಂಗ್ ಸೌಲಭ್ಯ ಪಡೆಯಲಿದ್ದಾರೆ. 75 ವಿದ್ಯಾರ್ಥಿಗಳು ಶೇ.50ರಷ್ಟು ರಿಯಾಯಿತಿಯಲ್ಲಿ ಶಿಕ್ಷಣ, ವಸತಿ, ಕೋಚಿಂಗ್ ಸೌಲಭ್ಯ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : ಬೀದರ್ | ಮುಗಿಯದ ಸಮುದಾಯ ಮಹಿಳಾ ಶೌಚಾಲಯ ಕಾಮಗಾರಿ : ತೆರೆಯದ ಬಾಗಿಲು!
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಗಡಿ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಮತ್ತು ರಿಯಾಯಿತಿ ಫೀ ನಲ್ಲಿ ಶಿಕ್ಷಣ, ವಸತಿ ಮತ್ತು ಕೋಚಿಂಗ್ ನೀಡುವ ಸದಾಶಯದೊಂದಿಗೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ರೂಪಿಸಿರುವ ಗುರುಕುಲ ಗೋಲ್ಡನ್ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದು ಸಂತಸ ತರಿಸಿದೆʼ ಎಂದರು.





