ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ಬೀದರ್ ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ 8 ದಿನಗಳ ಧಮ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಾಸಭೆಯ ಭಾರತೀಯ ಬೌದ್ಧ ಮಹಾಸಭೆಯ ಜಿಲ್ಲಾಧ್ಯಕ್ಷ ರಾಜಪ್ಪ ಗುನಳ್ಳಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಬೀದರ ಜಿಲ್ಲಾ ಮತ್ತು ತಾಲೂಕು ಶಾಖೆಗಳ ಸಹಯೋಗದಲ್ಲಿ ಪ್ರತಿದಿನ ಸಂಜೆ 6:30ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಗೌತಮ ಬುದ್ಧ ಅವರ ಶಾಂತಿ, ಸಮಾನತೆ, ನೈತಿಕತೆ ಹಾಗೂ ಕರುಣೆ ತತ್ವಗಳ ಕುರಿತು ಪ್ರವಚನಗಳು ನಡೆಯಲಿವೆʼ ಎಂದರು.
ಇಂದಿನ ಸಮಾಜದಲ್ಲಿ ನೆಮ್ಮದಿಯ ಬದುಕಿಗೆ ಶೀಲ ಹಾಗೂ ಸನ್ನಡತೆಗಳ ಅಗತ್ಯತೆಯನ್ನು ಮನಗಾಣಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬುದ್ಧರ ನಂತರ ಧಮ್ಮ ಮಾರ್ಗವನ್ನು ಅನುಸರಿಸಿದ ಪ್ರಮುಖ ಶಿಷ್ಯರು ಹಾಗೂ ಚಕ್ರವರ್ತಿ ಸಾಮ್ರಾಟ ಅಶೋಕ ಸೇರಿದಂತೆ ಅನೇಕ ರಾಜರು ಬೌದ್ಧ ಧರ್ಮವನ್ನು ವಿಶ್ವದಾದ್ಯಂತ ಪಸರಿಸಿದ ಇತಿಹಾಸವನ್ನು ಅವರು ಸ್ಮರಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು 1956ರ ಅಕ್ಟೋಬರ್ 14ರಂದು ಬೌದ್ಧ ಧರ್ಮ ಸ್ವೀಕರಿಸಿ 22 ಪ್ರತಿಜ್ಞೆಗಳ ಮೂಲಕ ಭಾರತದಲ್ಲಿ ಬೌದ್ಧ ಧರ್ಮ ಪುನರುಜ್ಜೀವನಕ್ಕೆ ಮುನ್ನಡಿ ಬರೆದರು’ ಎಂದು ವಿವರಿಸಿದರು.
ʼಪ್ರಸ್ತುತ ಜಗತ್ತಿನಲ್ಲಿ ಮೂಢನಂಬಿಕೆ, ಹಿಂಸಾಚಾರ ಮತ್ತು ಕೋಮುವಾದ ಹೆಚ್ಚುತ್ತಿರುವ ಸಂದರ್ಭದಲ್ಲಿ ಬುದ್ಧರ ಶಾಂತಿ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಉತ್ತಮ ಸಮಾಜ ನಿರ್ಮಾಣದ ಮೂಲಕ ಉತ್ತಮ ರಾಷ್ಟ್ರ ಕಟ್ಟಲು ಸಾಧ್ಯವೆಂಬ ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಧಮ್ಮ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆʼ ಎಂದರು.
ಧಮ್ಮ ಪ್ರವಚನದಲ್ಲಿ ಭಂತೆ ಧಮ್ಯಾನಂದ ಮಹಾಥೇರೊ, ಭಂತೆ ವರಜ್ಯೋತಿ, ಭಂತೆ ಮನೋರಜ್ಜಿತ, ಭಂತೆ ಭೋಧಿರತ್ನ, ಭಂತೆ ಜ್ಞಾನಸಾಗರ ಥೇರೊ, ಭಂತೆ ರೇವತ ಥೇರೊ, ಭಂತೆ ಧರ್ಮಪಾಲ ಸೇರಿದಂತೆ ಅನೇಕ ಭಂತೆಗಳು ಧಮ್ಮ ಪ್ರವಚನ ನೀಡಲಿದ್ದಾರೆʼ ಎಂದು ಹೇಳಿದರು.
ಇದನ್ನೂ ಓದಿ : ಸರ್ವಜ್ಞ ಕಾವ್ಯದಲ್ಲಿ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ
ಪತ್ರಿಕಾಗೋಷ್ಠಿಯಲ್ಲಿ ಅಣದೂರ ವೈಶಾಲಿನಗರದ ಭಂತೆ ಸಂಘರಶ್ಚಿತ, ನಿವೃತ್ತ ಪ್ರಾಚಾರ್ಯ ಪ್ರೊ.ವಿಠಲದಾಸ ಪ್ಯಾಗೆ, ಶಿಕ್ಷಕ ಶಾಮಸುಂದರ ಖಾನಾಪುರೆ, ಮಹಾಸಭೆಯ ಖಜಾಂಚಿ ನರಸಪ್ಪ ಮೇಟಿ ಹಾಗು ಬಾಬು ಅಣದೂರ, ಜಗನ್ನಾಥ ಕಾಂಬಳೆ ಮತ್ತಿತರರಿದ್ದರು.





