ವಿದ್ಯಾರ್ಥಿಗಳಿಗೆ ಬೋಧನೆಯೊಂದಿಗೆ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಅರಿವು ಮೂಡಿಸಿ ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸಿರುವ ಶಿಕ್ಷಕ ಪ್ರಕಾಶ ಗೋದಮಗಾವೆ ಅವರ ಕಾರ್ಯ ಶ್ಲಾಘನೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.
ಔರಾದ್ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವ ಕೇಂದ್ರ ಸಹಯೋಗದೊಂದಿಗೆ ಶಿಕ್ಷಕ ಪ್ರಕಾಶ ಗೋದಮಗಾವೆ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼಗಡಿ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳಾಗಿ ರೂಪಿಸಿರುವ ಪ್ರಕಾಶ ಅವರು, ಮೌಲ್ಯ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಎಲ್ಲರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆʼ ಎಂದರು.
ಹಿರೇಮಠ ಸಂಸ್ಥಾನ ಭಾಲ್ಕಿಯ ಮಹಾಲಿಂಗ ದೇವರು ಮಾತನಾಡಿ, ʼಮಕ್ಕಳಿಗೆ ಕಷ್ಟದ ಜೀವನ ಕುರಿತು ತಿಳಿ ಹೇಳಿದಾಗ ಭವಿಷ್ಯ ರೂಪಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರದ ಕೊರತೆ ಎದುರಾಗಿದ್ದು, ಅದನ್ನು ಸರಿಪಡಿಸುವುದು ಪೋಷಕರ ಜವಾಬ್ದಾರಿಯಾಗಿದೆʼ ಎಂದರು.
ನಿವೃತ್ತ ಶಿಕ್ಷಕ ಪ್ರಕಾಶ ಗೋದಮಗಾವೆ ಮಾತನಾಡಿ, ʼಅಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿತ್ತು. ಕನ್ನಡಕ್ಕೆ ಪೂರಕ ವಾತಾವರಣ ಇದ್ದಿರಲಿಲ್ಲ. ಮರಾಠಿ ಪ್ರಭಾವದ ನಡುವೆಯೂ ಛಲದಿಂದ ಸೇವೆ ಮಾಡಿರುವ ಹಿನ್ನೆಲೆ ಇಂದು ಅನೇಕ ವಿದ್ಯಾರ್ಥಿಗಳ ಬಾಳು ಬೆಳಗಿದ್ದು ನನಗೆ ಅತ್ಯಂತ ತೃಪ್ತಿ ತಂದಿದೆʼ ಎಂದರು.
ತಹಸೀಲ್ದಾರ್ ಮಹೇಶ ಪಾಟೀಲ್, 7ನೇ ಕನ್ನಡ ಸಮ್ಮೇಳನ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ.ಮನ್ಮತ ಡೋಳೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಸೇರಿದಂತೆ ಪ್ರಮುಖರಾದ ಶಿವರಾಜ ಬಿರಾದಾರ, ರಘುನಾಥ ರೊಟ್ಟೆ, ಉಮೇಶ ಸಲಗರ್ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ ತಾಲೂಕು ಘಟಕ, ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಸರ್ಕಾರಿ ನೌಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಕುರುಬರವಾಡಿ ಗ್ರಾಮಸ್ಥರು, ಸಾರ್ವಜನಿಕರು ನಿವೃತ ಶಿಕ್ಷಕ ಪ್ರಕಾಶ ಗೋದಮಗಾವೆ ದಂಪತಿಗೆ ಸನ್ಮಾನಿಸಿದರು.
ಇದನ್ನೂ ಓದಿ : ಕಲಬುರಗಿ | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಸಮಾರಂಭದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ರೇಣುಕಾ ಭಾಲೇಕರ್, ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಪಂಡರಿ ಆಡೆ, ಶಿಕ್ಷಕ ಜಗನ್ನಾಥ ಮೂಲಗೆ, ಪತ್ರಕರ್ತರಾದ ಅನೀಲ ಕುಮಾರ್ ದೇಶಮುಖ, ರವೀಂದ್ರ ಮುಕ್ತೆದಾರ, ಅಮರಸ್ವಾಮಿ ಹಾಗೂ ಸಂಜೀವ ಶಟಕಾರ್, ಸಂಜೀವ ಕಂಠಾಳೆ, ಜಗನ್ನಾಥ ದೇಶಮುಖ, ಮನ್ಮತಪ್ಪ ಹುಗ್ಗೆ, ಲಿಂಗೇಶ್ವರಿ ಗೋದಮಗಾವೆ, ಅವಿನಾಶ ಗೋದಮಗಾವೆ ಮತ್ತಿತರರಿದ್ದರು. ಸಾನ್ವಿ ಡಿಗ್ಗಿ ಅವರ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು.





