ಬೀದರ್ ಜಿಲ್ಲೆಯ ವಿವಿಧೆಡೆ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಿಸಲಾಯಿತು.
ಔರಾದ್ ತಾಲೂಕಿನ ನಾಗೂರ(ಎಂ) ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂತಪುರ ಪೊಲೀಸ್ ಠಾಣೆಯ ಅಕ್ಕಪಡೆ ಸಹಯೋಗದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನ ಮತ್ತು ಅಕ್ಕಪಡೆಯಿಂದ ಮಹಿಳಾ ಸುರಕ್ಷತೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಶಾಲೆಯ ಮುಖ್ಯಗುರು ಶ್ರೀದೇವಿ ಹೂಗಾರ ಮಾತನಾಡಿ, ʼಮಹಿಳಾ ಸಬಲೀಕರಣ ಮತ್ತು ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ ಅಕ್ಷರದ ಅವ್ವ ಎಂದೇ ಖ್ಯಾತಿ ಪಡೆದ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳಾ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಫುಲೆ ದಂಪತಿ ಸೇವೆ ಅನನ್ಯವಾಗಿದೆʼ ಎಂದರು.
ಸಂತಪುರ ಪೊಲೀಸ್ ಠಾಣೆ ಅಕ್ಕಪಡೆಯ ಮೀನಾಕ್ಷಿ ನಾಗೂರಕರ್ ಮಾತನಾಡಿ, ʼಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಅಕ್ಕಪಡೆ ನಿಮ್ಮ ಸೇವೆಗಾಗಿ ಸದಾ ಸಿದ್ದವಿದೆ. ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಉಚಿತ ಸಹಾಯವಾಣಿ 112 ಮತ್ತು ಮಕ್ಕಳ ಸಹಾಯವಾಣ 1098ಗೆ ಕರೆ ಮಾಡಿದರೇ ಅಕ್ಕಪಡೆ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಬರಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್, ಬಾಲ್ಯವಿವಾಹ, ಪೋಕ್ಸೊ ಕಾಯ್ದೆ, ಮಹಿಳಾ ಸುರಕ್ಷತೆ, ಬಗ್ಗೆ ಮಾಹಿತಿ ನೀಡಿದರು.
ಅಕ್ಕಪಡೆಯಿಂದ ಜೋಜನಾ, ನಾಗುರ(ಎನ್) ಸೇರಿದಂತೆ ಇನ್ನಿತರ ಶಾಲೆಗಲಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.
ಸಂತಪುರ ದೀಪಾಲಯ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಸಿಸ್ಟರ್ ಲಿನೇಟ್, ನಾಗೇಶ ಪಟ್ನೆ, ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ಗೌಡಾ, ಅನಿತಾ ಜೂಕಾಲೆ, ಸುರೇಖಾ, ಜ್ಯೋತಿ ಹಾಗೂ ವಿದ್ಯಾರ್ಥಿಗಳಿದ್ದರು.
ಔರಾದ್ : ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಫುಲೆ ಜಯಂತಿ ಆಚರಣೆ
ಔರಾದ್ ಪಟ್ಟಣದ ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.
ಪಿಎಸ್ಐ ವಸೀಮ್ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಪರಿಶ್ರಮ ಅಗಾಧವಾಗಿದೆ. ಫುಲೆ ದಂಪತಿಯ ಸಾಮಾಜಿಕ ಪರಿವರ್ತನೆ ಇಂದಿನ ಸಮಾಜಕ್ಕೆ ಆದರ್ಶʼ ಎಂದರು.

ಸಾಮಾಜಿಕ ಚಿಂತಕ ರಾಹುಲ್ ಖಂದಾರೆ ಮಾತನಾಡಿ, ʼದಲಿತರು, ಶೂದ್ರರು ಹಾಗೂ ಮಹಿಳೆಯರಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಾವಿತ್ರಿಬಾಯಿ ಫುಲೆ ಅವರು ಅನೇಕ ಅವಮಾನಗಳು ಎದುರಿಸಿ ಶಾಲೆಗಳನ್ನು ತೆರೆದರು. ಆದರೆ, ಇಂದಿನ ಶಿಕ್ಷಣ ಬಂಡವಾಳಶಾಹಿಗಳ ಕಪಿಮುಷ್ಠಿಯಿಂದಾಗಿ ದುಬಾರಿಯಾಗುತ್ತಿದೆʼ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ ಶಿಂಧೆ, ಸುಭಾಷ್ ಲಾಧಾ, ಸಿದ್ಧಾರ್ಥ್ ಬೋಸ್ಲೆ, ಪ್ರವೀಣ್ ಕಾರಂಜೆ, ದಿನೇಶ ಶಿಂಧೆ, ಸಂತೋಷ ಸೂರ್ಯವಂಶಿ, ಸುಂದರ ಮೇತ್ರೆ, ರಾಮ ಗುಡ್ಬೋಲೆ, ಅನಿಲ ಬುಜಂಗೆ, ಭೀಮರಾವ ಮುಂಗನಾಳ, ಬಸವರಾಜ ಕಾಂಬ್ಳೆ, ನಾಗನಾಥ ವಾಕೊಡೆ, ಪಂಡರಿ ಕಸ್ತೂರೆ ಸೇರಿ ಅನೇಕರಿದ್ದರು.
ಬೀದರ್ : ಮಹಿಳೆಯರ ಪಾಲಿನ ವಿದ್ಯಾ ದೇವತೆ ಸಾವಿತ್ರಿಬಾಯಿ ಫುಲೆ : ಉಷಾಬಾಯಿ ಬನ್ಸುಡೆ
ಬೀದರ ನಗರದ ಖಾಸಗಿ ಹೋಟೆಲನಲ್ಲಿ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ ವತಿಯಿಂದ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಅವರ 195 ನೇ ಜಯಂತಿ ಆಚರಣೆ ನಡೆಯಿತು.

ಮಾಜಿ ಜಿ.ಪಂ ಉಪಾಧ್ಯಕ್ಷೆ ಉಷಾಬಾಯಿ ಬನ್ಸುಡೆ ಅವರು ಸಾವಿತ್ರಿಬಾಯಿ ಫುಲೆ ರವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿ, ʼಭಾರತದ ಶೋಷಿತರು, ಹಿಂದುಳಿದವರು ಮತ್ತು ದಲಿತ ಮಹಿಳೆಯರ ಪಾಲಿನ ವಿದ್ಯಾ ದೇವತೆ ಸಾವಿತ್ರಿಬಾಯಿ ಫುಲೆ ಆಗಿದ್ದಾರೆ. ಇಂದು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವ ಪ್ರತಿ ಹೆಣ್ಣುಮಕ್ಕಳು ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸಬೇಕು. ಅವರ ಶಿಕ್ಷಣದ ಕ್ರಾಂತಿ ಮುನ್ನಡೆಸಬೇಕಾಗಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಮುಗಿಯದ ಸಮುದಾಯ ಮಹಿಳಾ ಶೌಚಾಲಯ ಕಾಮಗಾರಿ : ತೆರೆಯದ ಬಾಗಿಲು!
ಮನೆ-ಮನೆಗೆ ಅಂಬೇಡ್ಕರ್ ಅಭಿಯಾನದ ಮಹಿಳಾ ಸಮಿತಿ ಮುಖ್ಯಸ್ಥರಾದ ನಂದಮ್ಮಾ ಕುಂದೆ, ಸೊನ್ನಮ್ಮಾ ಕಸ್ತೂರೆ, ಶೆಶಿಕಲಾ ಕಾಂಬಳೆ, ಅಭಿಯಾನದ ಜಿಲ್ಲಾ ಯುವ ಅಧ್ಯಕ್ಷ ಪ್ರಕಾಶ ರಾವಣ ಮತ್ತಿತರರಿದ್ದರು.





