ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ ವಿಷಯ ಮನದಟ್ಟಾಗಿದೆ. ನ್ಯಾಯಾಲಯದ ತೀರ್ಪುಗಳನ್ನು ಮಾನದಂಡವನ್ನಾಗಿಸಿಕೊಂಡು ವೈಜ್ಞಾನಿಕ ಹಾಗೂ ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಬೇಕೆಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.
ಬೀದರ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿದಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಅವರು ಮಾತನಾಡಿ, ʼವಿಧಾನ ಪರಿಷತ್ತಿನಲ್ಲಿ ಕಾರಂಜಾ ಸಂತ್ರಸ್ತರ ಪ್ರಶ್ನೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ ಅವರ ಉತ್ತರ ಬೇಜವಾಬ್ದಾರಿಯುತವಾಗಿದ್ದು, ಇದು ಜಿಲ್ಲೆಯ ಜನತೆಗೆ ಅವಮಾನಕಾರಿಯಾಗಿದೆʼ ಎಂದು ಆರೋಪಿಸಿದರು.
ಹೇಮಾವತಿ ಯೋಜನೆ ಸಂತ್ರಸ್ತರಿಗೆ ನೀಡಿದಂತೆ ಕಾರಂಜಾ ಸಂತ್ರಸ್ತರಿಗೂ ಪರಿಹಾರ ಜೊತೆಗೆ ಬದುಕಲು ಭೂಮಿಯನ್ನು ಒದಗಿಸಬೇಕು. ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವ ವಿಚಾರದಲ್ಲಿ ಸಚಿವರಾದ ಶಿವರಾಜ್ ತಂಗಡಗಿ ನೀಡಿದ ಹೇಳಿಕೆಯನ್ನು ಖಂಡಿಸಿ, ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹುಚ್ಚಕ್ಕನಹಳ್ಳಿ ಮಾತನಾಡಿ, ʼಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಹಲವಾರು ಸಭೆಗಳಲ್ಲಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಸಭೆ ನಡೆಸಿ ಭರವಸೆ ನೀಡಿದರು. ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ತರಬೇಕುʼ ಎಂದು ಆಗ್ರಹಿಸಿದರು.
ಸಮಿತಿಯ ಮುಖಂಡ ವಿನಯ್ ಮಾಳಗೆ ಮಾತನಾಡಿ, ʼಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಈಗಾಗಲೇ ಈಶ್ವರ ಖಂಡ್ರೆ ಅವರು ಒತ್ತಡ ತಂದಿದ್ದು, ಮುಖ್ಯಮಂತ್ರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಹೋರಾಟಗಾರ ಮಹೇಶ್ ಗೋರನಾಳಕರ್ ಮಾತನಾಡಿ, ʼನನೆಗುದಿಗೆ ಬಿದ್ದಿರುವ ಸಂತ್ರಸ್ತರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಸರ್ಕಾರ ತಕ್ಷಣ ಸ್ಪಂದಿಸಬೇಕುʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ನಲ್ಲಿ ಮಾ.25ರಂದು ಉದ್ಯೋಗ ಮೇಳ
ಸಮಿತಿಯ ಪ್ರಮುಖರಾದ ರಾಜಪ್ಪ ಕೋಸಂ, ರಾಜಪ್ಪ ಬುಸ್ಸಾ, ವೀರೇಂದ್ರ ಭತಮುರಗೆ, ರೇವಣಪ್ಪ ಕಾಂಜೋಳ, ಸಂಗಾರೆಡ್ಡಿ ಅವರಾದ, ಹರ್ಷವರ್ಧನ್ ರಾಥೋಡ್, ಶ್ರೀಧರ ಸೋಮನೋರ್, ಮಾರಪ್ಪ ಕೌದೆ, ಇಸೂಫ್ ರೇಕುಳಗಿ, ಮಹ್ಮದ್ ಸೋಲಾಪೂರೆ, ಲಕ್ಷ್ಮೀ ಕೌದೆ ಸೇರಿದಂತೆ ಸಂತ್ರಸ್ತ ರೈತರು ಭಾಗವಹಿಸಿದ್ದರು.





