ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ (10+1) ಕುರಿ, ಮೇಕೆ ಘಟಕ ಸ್ಥಾಪನೆ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಬೀದರ್ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆಗೆ ಒಟ್ಟು 24 ಪರಿಶಿಷ್ಟ ಜಾತಿ (ಎಸ್ಸಿಎಸ್ಪಿ) ಮತ್ತು 14 ಪರಿಶಿಷ್ಟ ಪಂಗಡ (ಟಿಎಸ್ಪಿ) ಗುರಿಯನ್ನು ನಿಗದಿಪಡಿಸಲಾಗಿದೆ. ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ಪಶುಸಂಗೋಪನೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗುತ್ತದೆ.
ಅರ್ಹತಾ ಮಾನದಂಡಗಳು:
- ಅರ್ಜಿದಾರರ ವಯಸ್ಸು 18 ರಿಂದ 60 ವರ್ಷಗಳೊಳಗೆ ಇರಬೇಕು
- ಆರ್ಡಿ ನಂಬರ ಇರುವ ಜಾತಿ ಪ್ರಮಾಣಪತ್ರ ಕಡ್ಡಾಯ
- ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರಬೇಕು
ಅರ್ಜಿಗಳನ್ನು ತಮ್ಮ ತಮ್ಮ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿಯಿಂದ ಪಡೆದು ಮಾರ್ಚ್ 12, 2026ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
ಇದನ್ನೂ ಓದಿ : ಬೀದರ್ | ʼಮನರೇಗಾʼ ಬಲ : ವಿಧಾನಸೌಧದಂತೆ ಕಂಗೊಳಿಸುತ್ತಿರುವ ʼಗ್ರಾಮ ಸೌಧʼ!
ಬೀದರ ತಾಲ್ಲೂಕಿನ ಅಭ್ಯರ್ಥಿಗಳು ನಿಗಮದ ಬೀದರ ಕಚೇರಿಯಿಂದಲೂ ಅರ್ಜಿ ನಮೂನೆಗಳನ್ನು ಪಡೆದು ಅದೇ ದಿನಾಂಕದೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲ್ಲೂಕಿನ ಪಶುವೈದ್ಯಾಧಿಕಾರಿಗಳ ಕಚೇರಿ ಅಥವಾ ನಿಗಮದ ಬೀದರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.





