ಜಿಲ್ಲೆಯ ಭಾವೈಕ್ಯತೆಯ ಮಹಾ ಸಂಗಮ ಎಂದೇ ಹೆಸರಾದ ಅಷ್ಟೂರ್ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ (ಮಾ.10) ಮುಂದಿನ ಐದು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ನಾನಾ ಭಾಗಗಳಿಂದ ಸಾವಿರಾರು ಜನರು ಸಾಕ್ಷಿಯಾಗಲಿದ್ದಾರೆ.
ಜಾತ್ರೆ ಹಜರತ್ ಸುಲ್ತಾನ್ ಅಹ್ಮದ್ ಶಾ ವಲಿ ಬಹಮನಿ ದರ್ಗಾ ಪರಿಸರದಲ್ಲಿ ಅಷ್ಟೂರ್ ಗ್ರಾಮ ಪಂಚಾಯತ್ ವತಿಯಿಂದ ಸಿದ್ಧತೆ ನಡೆಯಿತು. ದರ್ಗಾ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಭಕ್ತರ ಆಗಮನಕ್ಕೆ ಸಜ್ಜುಗೊಳಿಸಲಾಗಿದೆ.
ಜಾತ್ರೆಗೆ ಬರುವ ಸಾವಿರಾರು ಭಕ್ತರ ದಾಹ ತಣಿಸಲು ವಿಶೇಷ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಗುಂಬಜ್ ಎದುರುಗಡೆ ಇರುವ ಐತಿಹಾಸಿಕ ಪುಷ್ಕರಣಿಯನ್ನು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛಗೊಳಿಸಿ, ಅದಕ್ಕೆ ಶುದ್ಧ ನೀರನ್ನು ತುಂಬಿಸುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ.
ಅಷ್ಟೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಗಶೆಟ್ಟಿ ಬಸವರಾಜ್, ಉಪಾಧ್ಯಕ್ಷ ರೇಣುಕಾ ರಾಹುಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಅವರು ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.
ಪಿಡಿಒ ಗಾಯತ್ರಿದೇವಿ ಅವರು ಮಾತನಾಡಿ, ʼಬೀದರ್ ಜಿಲ್ಲೆಯ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅಷ್ಟೂರ್ ಜಾತ್ರೆ ಸಾಕ್ಷಿಯಾಗಿದೆ. ರಾಜ್ಯ, ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿದ್ದೇವೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಅಗತ್ಯ: ಬಿ.ಎಚ್.ನಿರಗುಡಿ
ಪಂಚಾಯತ ಸಿಬ್ಬಂದಿಗಳಾದ ಗೀತಾ ದೇವೇಂದ್ರ, ನೈನಿತಾಲ್ ಉಪಸ್ಥಿತರಿದ್ದರು.





