ಬೀದರ್ ನಗರದ ಕುಂಬಾರವಾಡ ಸಮೀಪದ ಬ್ಯಾಂಕ್ ಕಾಲೋನಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಕಾಲೊನಿ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳವಾರ ನಿಯೋಗದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ.
ಕಾಲೊನಿ ವಾರ್ಡ್ ಸಂಖ್ಯೆ 29-30 ರ ವ್ಯಾಪ್ತಿಯಲ್ಲಿದೆ. ನಗರಸಭೆಗೆ ಸೇರಿ 40 ವರ್ಷಗಳಾದರೂ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳು ಇಲ್ಲ. ಹೀಗಾಗಿ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕುಂಬಾರವಾಡದಿಂದ ಬೌದ್ಧ ಮಂದಿರ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ದೂಳು ಮನೆಗಳಿಗೆ ಸೇರುತ್ತಿದೆ. ಇದರಿಂದ ಹಿರಿಯರು, ಮಕ್ಕಳ ಆರೋಗ್ಯದ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಕಾಲೊನಿ ಸಮಸ್ಯೆಯನ್ನು ಹಿಂದೆ ಸಚಿವರು, ಪೌರಾಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಕುಂಬಾರವಾಡ ಮುಖ್ಯರಸ್ತೆಯಿಂದ ಬೌದ್ಧ ಮಂದಿರದ ವರೆಗಿನ ರಸ್ತೆ ನಿರ್ಮಿಸಬೇಕು ಹಾಗೂ ಕಾಲೊನಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಪ್ರಮುಖರಾದ ನಾಗಸೇನ್ ಗಾಯಕವಾಡ್, ಸಂಗಮೇಶ ಮೂಲಗೆ, ದತ್ತಾತ್ರೇಯ ಕುಲಕರ್ಣಿ, ಸಿದ್ಧಾರ್ಥ ಕಾಂಬಳೆ, ನರೇಶ್ ಧನ್ನೂರ ಮತ್ತಿತರರು ಇದ್ದರು.





