ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ, ಮಾಜಿ ಸಚಿವ, ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಯಥಾಸ್ಥಿತಿ ಕಂಡು ಬಂದಿದೆ.
ಕಳೆದ 18-20 ದಿನಗಳಿಂದ ಭೀಮಣ್ಣ ಖಂಡ್ರೆ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಂಗಳವಾರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದ್ದು, ಅದೇ ಸ್ಥಿತಿ ಬುಧವಾರ ಮುಂದುವರೆದಿದೆ. ವ್ಯತ್ಯಾಸ ಕಂಡು ಬಂದಿದ್ದು, ರಕ್ತದೊತ್ತಡ (ಬಿಪಿ) ಸಧ್ಯ ನಿಯಂತ್ರಣದಲ್ಲಿದೆ. ಉಸಿರಾಟದ ತೊಂದರೆ ಇರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಮುಂದುವರೆಸಲಾಗುತ್ತಿದೆ.
ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದು, ವೈದ್ಯರು ದಿನದ 24 ಗಂಟೆ ನಿಗಾವಹಿಸಿದ್ದಾರೆ.
ಭೀಮಣ್ಣ ಖಂಡ್ರೆ ಅವರು ಬುಧವಾರ ಬಿಳಿ ಜೋಳದ ಗಂಜಿ ಮತ್ತು ಸೇಬು ಹಣ್ಣಿನ ಜ್ಯೂಸ್ ಸೇವಿಸಿದ್ದಾರೆ. ಅವರ ಆರೋಗ್ಯ ಯಥಾಸ್ಥಿತಿ ಮುಂದುವರೆದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇಳಕಲ್ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಬಸವಕಲ್ಯಾಣ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು ಸೇರಿದಂತೆ ವಿವಿಧ ಗಣ್ಯರು, ಹಿತೈಷಿಗಳು ಖಂಡ್ರೆ ನಿವಾಸಕ್ಕೆ ಭೇಟಿ ಭೀಮಣ್ಣ ಖಂಡ್ರೆ ಅವರ ಆರೋಗ್ಯ ವಿಚಾರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ, ಡಾ.ಗೀತಾ ಖಂಡ್ರೆ ಸೇರಿದ ಕುಟುಂಬದ ಎಲ್ಲ ಸದಸ್ಯರನ್ನು ಇಳಕಲ್ ಶ್ರೀಗಳು ಮಾತನಾಡಿಸಿ ಎಲ್ಲರಲ್ಲಿ ಧೈರ್ಯ ತುಂಬಿದರು. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತಾಧಿಕಾರಿ ಮೋಹನ ರೆಡ್ಡಿ ಮತ್ತಿತರರಿದ್ದರು.
ʼಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರು ಲಿಂಗಾಯತ ಸಮಾಜದ ದೊಡ್ಡ ಆಸ್ತಿ. ಡಾ.ಚನ್ನಬಸವ ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆ ಅವರ ಗುರುಶಿಷ್ಯರ ಸಂಬಂಧ ಎಲ್ಲರಿಗೂ ಮಾದರಿಯಾಗಿದೆ. ಖಂಡ್ರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಬಸವಣ್ಣನವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇಳಕಲ್ ಶ್ರೀ ಹೇಳಿದರು.
ಇದನ್ನೂ ಓದಿ : ಬೀದರ್ | ಸಮಾನತೆಯ ಸಂದೇಶ ಸಾರಿದ ಸಿದ್ದರಾಮೇಶ್ವರರು : ಗುರುಮಹಾಂತ ಸ್ವಾಮೀಜಿ
ʼತಮ್ಮ ತಂದೆ ಡಾ.ಭೀಮಣ್ಣ ಖಂಡ್ರೆ ಅವರ ಮೇಲಿನ ಪ್ರೀತಿ, ಕಾಳಜಿಯಿಂದ ಆರೋಗ್ಯ ವಿಚಾರಿಸಲು ರಾಜ್ಯದ ಮೂಲೆ ಮೂಲೆಯಿಂದ ಮಠಾಧೀಶರು, ಗಣ್ಯರು ಭೇಟಿ ನೀಡುತ್ತಿದ್ದಾರೆ. ತಂದೆಯವರ ಆರೋಗ್ಯ ಸುಧಾರಿಸುತ್ತಿದೆ. ಯಾರೂ ಆತಂಕ ಪಡಬೇಕಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.





