ಬೀದರ್ ಜಿಲ್ಲಾ ಪಂಚಾಯತಿಯಲ್ಲಿ ಸಭಾಂಗಣದಲ್ಲಿ ಜನವರಿ 5ರಂದು ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರು ಪರಸ್ಪರ ಕೈಕೈ ಮಿಲಾಯಿಸಿ, ಏಕವಚನದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿರುವ ಜಟಾಪಟಿ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಒಳಗಾಗಿದೆ.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಅರಣ್ಯ ಇಲಾಖೆಗೆ ಸಂಬಂಧಿಸಿ ಬೀದರ್ನ ಚಿಕ್ಕಪೇಟ್ ಸಮೀಪದ ಲೇಔಟ್ ಒತ್ತುವರಿ ಕುರಿತು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಡಿಸಿ ಶಿಲ್ಪಾ ಶರ್ಮಾ ಅವರೊಂದಿಗೆ ಚರ್ಚೆ ನಡೆಸಿದರು. ಬಳಿಕ ಎಂಎಲ್ಸಿ ಭೀಮರಾವ್ ಪಾಟೀಲ್ ಅದೇ ವಿಷಯ ಮಾತನಾಡಿದರು. ಮಾತಿಗೆ ಮಾತು ಬೆಳೆದು ಭೀಮರಾವ್ ಪಾಟೀಲ್ ಅವರು ಕುರ್ಚಿ ಮೇಲಿಂದ ಎದ್ದು ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಅವರ ಬಳಿ ತೆರೆಳಿ ಕೈಕೈ ಮಿಲಾಯಿಸಿದರು.
ಕೂಡಲೇ ಅಲ್ಲೇ ಇದ್ದ ಎಎಸ್ಪಿ ಚಂದ್ರಕಾಂತ ಪೂಜಾರಿ ಮಧ್ಯೆ ಪ್ರವೇಶಿಸಿ ತಡೆದರು. ಬಳಿಕ ಸಚಿವ ಈಶ್ವರ ಖಂಡ್ರೆ, ಡಿಸಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ ಗುಂಟಿ ಅವರು ವೇದಿಕೆ ಮೇಲಿಂದಿಳಿದು ಪರಿಸ್ಥಿತಿ ತಿಳಿಸಿಗೊಳಿಸಿದರು. ಎಂಎಲ್ಸಿ ಭೀಮರಾವ್ ಪಾಟೀಲ್ ಅವರಿಗೆ ಅವರ ಸಹೋದರರೂ ಆದ ಎಂಎಲ್ಸಿ ಚಂದ್ರಶೇಖರ ಪಾಟೀಲ್ ಬೆನ್ನಿಗೆ ನಿಂತರು.

ಈ ಘಟನೆ ನಡೆದ ಮರುಕ್ಷಣವೇ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಸಭೆ ಮುಂದೂಡಲಾಗಿದೆ. ಎಲ್ಲರ ಸಾಮರಸ್ಯದೊಂದಿಗೆ ವಾರದೊಳಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾದ್ಯಂತ ಈ ಘಟನೆಯ ಮಾಹಿತಿ ಕಾಡ್ಗಿಚ್ಚಿನಂತೆ ಹರಡಿದ್ದು, ಕಾಂಗ್ರೆಸ್-ಬಿಜೆಪಿ ಶಾಸಕರ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜಾಗದ ಅವ್ಯವಹಾರ ಬಗ್ಗೆ ಮಾತನಾಡುವುದೇ ತಪ್ಪೇ?
ʼಹುಮನಾಬಾದ್ ಪಟ್ಟಣದ ಸರ್ವೇ ನಂ. 204, 205ಯಲ್ಲಿ ಬರುವ ಅರಣ್ಯ ಇಲಾಖೆ ಜಾಗದಲ್ಲಿ ಒತ್ತುವರಿ ನಡೆಸಿ ಬೇರೆಯವರು ಕಬ್ಜಾ ಮಾಡಿದ್ದಾರೆ. ಹಾಗೂ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ಐದು ಎಕರೆ ಜಾಗ ಮಂಜೂರು ಮಾಡುವುದು. ಬೀದರ್ನ ಚಿಕಪೇಟ್ ಸಮೀಪದ ಸರ್ವೇ ನಂ-30, 31 ಹಾಗೂ 34ರಲ್ಲಿ ಲೇಔಟ್ನಲ್ಲಿರುವ ಜಾಗದ ಅವ್ಯವಹಾರ ಬಗ್ಗೆ ಕಳೆದ ಸಭೆಯಲ್ಲಿ ಸಚಿವರಿಗೆ ಪ್ರಶ್ನಿಸಿದ್ದೆ. ಅದಕ್ಕೆ ಜಿಲ್ಲಾಡಳಿತದಿಂದ ನೀಡಿದ ಉತ್ತರ ನನ್ನ ಸಮಂಜವಲ್ಲ. ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದ್ದೇನೆ. ಅದಕ್ಕೆ ಏಕವಚನದಲ್ಲಿ ಮಾತನಾಡಿ ಕುರ್ಚಿ ಮೇಲಿಂದ ಎದ್ದು ನನ್ನ ಹೊಡೆಯಲು ಬಂದಿದ್ದಾರೆʼ ಎಂದು ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದರು.

ʼತಮ್ಮ ಪರಿವಾರದವರೇ ಅಧಿಕಾರದಲ್ಲಿ ಇರಬೇಕು. ನಮ್ಮಂತಹ ಯುವಕರು ಬೆಳೆಯಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಚಿಕಪೇಟ್ ಸಮೀಪದ ನಾನಕ್ ಝೀರಾ ಸಾಹೇಬ್ ಟ್ರಸ್ಟ್ ಅಡಿಯಲ್ಲಿ 48 ಎಕರೆ ಜಾಗವಿದೆ. ಆ ಜಾಗ ಸಿಖ್ ಸಮುದಾಯಕ್ಕೆ ಅನುಕೂಲ ಆಗಬೇಕೇ ಹೊರತು ಅನ್ಯರ ಪಾಲಾಗಬಾರದು ಎಂದು ನಾನು ಕೇಳಿದ್ದೇನೆ. ಆದರೆ, ನೂರಾರು ಕೋಟಿ ಮೌಲ್ಯದ ಆ ಜಾಗವನ್ನು ಭೀಮರಾವ್ ಪಾಟೀಲ್ ಅವರ ಕುಟುಂಬದವರು ಲಪಟಾಯಿಸಬೇಕೆಂಬ ಹುನ್ನಾರವಿದೆ. ಅದನ್ನು ನಾನು ಪ್ರಶ್ನಿಸಿದಕ್ಕೆ ಈ ರೀತಿ ಮಾಡಿದ್ದಾರೆʼ ಎಂದು ದೂರಿದ್ದಾರೆ.
ಇದು ದುರಾದುಷ್ಟಕರ ಘಟನೆ :
ಇಂದು ಬೀದರ್ ಜಿಲ್ಲಾ ಪಂಚಾಯತ್ನಲ್ಲಿ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಎಂಎಲ್ಸಿ ಭೀಮರಾವ್ ಪಾಟೀಲ್ ಅವರು ಪರಸ್ಪರ ಕೈಕೈ ಮಿಲಾಯಿಸುವ ಮಟ್ಟಿಗೆ ತಲುಪಿರುವುದು ದುರಾದುಷ್ಟಕರ ಸಂಗತಿ. ಇದು ಯಾವ ವಿಚಾರಕ್ಕೆ ಈ ಜಟಾಪಟಿ ನಡೆದಿರುವುದು ಎಂಬುದು ನನಗೂ ಗೊತ್ತಿಲ್ಲʼ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಈ ಘಟನೆ ಕುರಿತು ಸಚಿವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ʼಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟು ಅತ್ಯವಶ್ಯಕ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು, ಜನಹಿತವನ್ನು ಕೇಂದ್ರ ಬಿಂದುವಾಗಿಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಮನವಿ. ಪರಸ್ಪರ ಸಹಕಾರ ಹಾಗೂ ಶಾಂತಿಯ ವಾತಾವರಣದ ಮೂಲಕ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯʼ ಎಂದು ಹೇಳಿದರು.
ಕೆಡಿಪಿ ಸಭೆಯಲ್ಲಿ ಅಸಭ್ಯ ವರ್ತಿಸಿದ ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯ :
ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯ ವೇಳೆ ಅಸಭ್ಯವಾಗಿ ಕೈಕೈ ಮಿಲಾಯಿಸಿಕೊಂಡು ಸಭೆಯ ಶಿಸ್ತು ಭಂಗಪಡಿಸಿದ ಆರೋಪದ ಮೇಲೆ, ಸಂಬಂಧಪಟ್ಟ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವಕ್ರಾಂತಿ ದಿವ್ಯ ಪೀಠ ಆಗ್ರಹಿಸಿದೆ.
ಈ ಸಂಬಂಧ ಸಂಘಟನೆಯ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಹಾಗೂ ಸಾಮಾಜಿಕ ಚಿಂತಕ ಜಗಧೀಶ್ವರ ಬಿರಾದಾರ ಅವರು ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ʼಹುಮನಾಬಾದ ಕ್ಷೇತ್ರದ ಶಾಸಕ ಸಿದ್ಧಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ ಮತ್ತು ಚಂದ್ರಶೇಖರ ಪಾಟೀಲ ಅವರು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲೇ ಪರಸ್ಪರ ಅವಮಾನಕಾರಿಯಾಗಿ ವರ್ತಿಸಿದ್ದಾರೆ. ಇದರಿಂದ ಸಭೆಯ ಗೌರವ ಹಾಳಾಗಿದ್ದು, ಸಾರ್ವಜನಿಕ ಸೇವಾ ವ್ಯವಸ್ಥೆಗೆ ಕೆಟ್ಟ ಮಾದರಿ ನಿರ್ಮಾಣವಾಗಿದೆʼ ಎಂದು ದೂರಿದ್ದಾರೆ.

ʼಈ ಘಟನೆ ಜನಸಾಮಾನ್ಯರಲ್ಲಿ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವಂತಹ ವರ್ತನೆಯಾಗಿದೆ. ಸಭಾಂಗಣದ ಸಿಸಿಟಿವಿ ದೃಶ್ಯಾವಳಿ ಅಥವಾ ವೀಡಿಯೊ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕುʼ ಎಂದು ಒತ್ತಾಯಿಸಿದ್ದಾರೆ.
ಉಸ್ತುವಾರಿ ಸಚಿವರ ವೈಫಲ್ಯದಿಂದ ಸಭೆಯಲ್ಲಿ ಜಗಳ : ಭಗವಂತ ಖೂಬಾ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿರುವುದು ತಲೆ ತಗ್ಗಿಸುವ ಘಟನೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಖಂಡಿಸಿದ್ದಾರೆ.
ʼಯಾವುದೇ ಕಾರಣಕ್ಕೂ ಸಭೆಗಳಲ್ಲಿ ತನ್ನ ವೈಯಕ್ತಿಕ ವಿಷಯಗಳು ತರಬಾರದು, ಆದರೆ, ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಈಶ್ವರ ಖಂಡ್ರೆಯವರು ತನ್ನ ವೈಫಲ್ಯಗಳು ಮುಚ್ಚಿಕೊಳ್ಳಲು ಈ ಜಗಳದ ಲಾಭ ಪಡೆದುಕೊಂಡಿದ್ದಾರೆ, ಸಭೆಯಲ್ಲಿ ಮೊದಲು ಯಾವ ಯಾವ ವಿಷಯಗಳನ್ನು ಆದ್ಯತೆಮೆರೆಗೆ ಚರ್ಚೆ ಮಾಡಬೇಕೆಂದು ನಿರ್ಧರಿಸುವ ಹಕ್ಕು ಸಭೆಯ ಅಧ್ಯಕ್ಷರದ್ದಾಗಿರುತ್ತದೆ. ಇಲ್ಲಿ ಈಶ್ವರ ಖಂಡ್ರೆಯವರು ಬೇರೆ ವಿಷಯಗಳು ಚರ್ಚೆ ಮಾಡಬೇಕಿತ್ತು, ಅದು ಬಿಟ್ಟು ಈಗಾಗಲೆ ಬದ್ದ ವೈರಿಗಳಂತೆ ಇರುವವರನ್ನು ಪ್ರಚೋದಿಸುವಂತಹ ಅವರ ವೈಯಕ್ತಿಕ ವಿಷಯಗಳಿಗೆ ಆದ್ಯತೆ ನೀಡಿರುವ ಕಾರಣ ಈ ಸಭೆಯಲ್ಲಿ ಜಗಳವಾಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಈಶ್ವರ ಖಂಡ್ರೆಯವರು ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಜಗಳದ ಸಂಪೂರ್ಣ ಹೊಣೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಹೊರಬೇಕು ಮತ್ತು ಈ ಘಟನೆ ಕೂಡ ಅವರ ಆಡಳಿತ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿಯೆಂದರೆ ತಪ್ಪಾಗಲಾರದುʼ ಎಂದು ಘಟನೆಯನ್ನು ಖಂಡಿಸಿದ್ದಾರೆ.
ಜಿಲ್ಲೆಯ ರೈತರಿಗೆ ಇನ್ನೂ ಸರಿಯಾದ ಬೆಳೆ ಹಾನಿ ಪರಿಹಾರ ಬಂದಿಲ್ಲ. ಕಬ್ಬು ಸಾಗಿಸಿದ ರೈತರಿಗೆ ಕಾರ್ಖಾನೆಗಳಿಂದ ಕಬ್ಬಿನ ಬಿಲ್ ಪಾವತಿಯಾಗಿಲ್ಲ. ಕಬ್ಬು ಹಾಕಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ಎಷ್ಟು ದರ ಕೊಡುತ್ತಾರೋ ಎನ್ನುವ ಆತಂಕದಲ್ಲಿ ರೈತರಿದ್ದಾರೆ. ಡಿ.ಸಿ.ಸಿ. ಬ್ಯಾಂಕಿನಿಂದ ರೈತರಿಗೆ ಸಾಲ ಸಿಗದೆ ಇರುವುದು ಇಂತಹ ಹಲವಾರು ವಿಷಯಗಳು ಕೆಡಿಪಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು, ಆದರೆ, ಈಶ್ವರ ಖಂಡ್ರೆಯವರು ಇಂತಹ ವಿಷಯಗಳು ಮೊದಲು ತೆಗೆದುಕೊಳ್ಳುಬೇಕಿತ್ತು, ಆದರೆ ಖಂಡ್ರೆ ಅವರು ಈ ಜಗಳದಿಂದ ತನ್ನ ಆಡಳಿತ ವೈಫಲ್ಯ ಮುಚ್ಚಿಕೊಂಡಿದ್ದಲ್ಲದೆ, ಹಲವಾರು ಅವಶ್ಯಕವಾದ ವಿಷಯಗಳ ಚರ್ಚೆ ಮಾಡಬಾರದೆನ್ನುವ ಹುನ್ನಾರ ಇದರ ಹಿಂದೆ ಅಡಗಿದೆʼ ಎಂದು ಖೂಬಾ ತಿಳಿಸಿದ್ದಾರೆ.
ʼಕಳೆದ 10 ವರ್ಷದಲ್ಲಿ ಸಂಸದನಾಗಿ, ಕೇಂದ್ರದಲ್ಲಿ ಸಚಿವನಾಗಿ ದೇಶದೆಲ್ಲೆಡೆ ನೂರಾರು ಸಭೆಗಳು ಮಾಡಿರುವೆ, ಅಲ್ಲಿ ನಾನು
ಸಭೆಯಲ್ಲಿ ಮೊದಲು ಎಂತಹ ವಿಷಯಗಳು ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಿದ್ದೆ. ನಾನು ತೆಗೆದುಕೊಂಡಿರುವ ಅದೆಷ್ಟೋ ಸಭೆಗಳಲ್ಲಿ ರಾಜಕೀಯ ಬದ್ದ ವೈರಿಗಳು ಸಹ ಇದ್ದರು. ಆದರೆ ಎಲ್ಲಿಯೂ ಈಶ್ವರ ಖಂಡ್ರೆ ಅವರಂತೆ ಜಗಳವಾಡಲು ಬಿಟ್ಟು, ಮಜಾ ತೆಗೆದುಕೊಂಡಿಲ್ಲ. ಇಂದಿನ ಕೆಡಿಪಿ ಸಭೆ ಮುಂದೂಡಿ, ಸಾಧಿಸಿದ್ದಾರು ಏನು? ಈಗಾಗಲೇ ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸಗಳು ಆಗುತಿಲ್ಲ. ಇವುಗಳನ್ನು ಮುಚ್ಚಿಟ್ಟುಕೊಳ್ಳಲು ಖಂಡ್ರೆ ಅವರು ಮುಂದೆ ಇನ್ಯಾವ ನಾಟಕ ಆಡುತ್ತಾರೋ ನೋಡಬೇಕುʼ ಎಂದು ಭಗವಂತ ಖೂಬಾ ಟೀಕಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಹುಮನಾಬಾದ್ ತಾಲೂಕಿನಾದ್ಯಂತ ಜ.5ರಿಂದ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಹುಮನಾಬಾದ್ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ʼಇಂದು ಕೆಡಿಪಿಯಲ್ಲಿ ಇಬ್ಬರು ಶಾಸಕರ ಮಧ್ಯೆ ಮಾತಿನ ವಾಕ್ಸಮರ ನಡೆದಿದೆ. ನಡೆಯಬಾರದಂತಹ ಘಟನೆ ನಡೆದಿದೆ. ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಕಾನೂನು ಸುವ್ಯವಸ್ಥೆ ಮುರಿಯದಂತೆ ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕಾಗಿದೆ. ಹುಮನಾಬಾದ್ ಕ್ಷೇತ್ರದ ಎಲ್ಲಾ ಜನತೆ ಶಾಂತಿಯಿಂದ ಸ್ಪಂದಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅವಕಾಶ ಮಾಡಿಕೊಡಬಾರದು. ನಾವೆಲ್ಲರೂ ಕಾನೂನು ಚೌಕಟ್ಟಿನಲ್ಲಿ ಬಿಟ್ಟು ಹೋಗುವುದಿಲ್ಲʼ ಎಂದು ಹೇಳಿದರು.





