ಹುಲಸೂರ ತಾಲೂಕಿನ ಬೇಲೂರು ಗ್ರಾಮದ ಉರಿಲಿಂಗಪೆದ್ದಿ ಮಠದ ಆವರಣದಲ್ಲಿ ಉರಿಲಿಂಗಪೆದ್ದಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ, ಪೂಜ್ಯ ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ ಹಾಗೂ ಪ್ರಥಮ ಪ್ರಕಾಶಕರ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆಯಿತು.
ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ, ಪೂಜ್ಯ ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ಭಾವಚಿತ್ರ ಹಾಗೂ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಹಾಗೂ ಅಲಂಕೃತ ರಥದಲ್ಲಿ ಪ್ರಥಮ ಪ್ರಕಾಶಕರ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬಸವರಾಜ ಕೋನೆಕ ಅವರ ಮೆರವಣಿಗೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಪ್ರಮುಖ ರಸ್ತೆಗಳ ಮೂಲಕ ಶ್ರೀಮಠದ ವರೆಗೆ ತೆರಳಿ ಬಳಿಕ ಮುಖ್ಯವೇದಿಕೆಯಲ್ಲಿ ಸಮಾವೇಶಗೊಂಡಿತು.

ಪ್ರಥಮ ಪ್ರಕಾಶಕರ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬಸವರಾಜ ಕೋನೆಕ ಅವರು ಮಾತನಾಡಿ, ʼಪ್ರಕಾಶಕರು ಎಷ್ಟೇ ಸುಂದರವಾಗಿ ಪುಸ್ತಕಗಳನ್ನು ಮುದ್ರಿಸಿದರು ಕೊಂಡು ಓದುವ, ಉಪಯೋಗಿಸುವ ಜನರಿಲ್ಲದೆ ಪುಸ್ತಕೋದ್ಯಮ ಕುಸಿಯುತ್ತಿದೆ. ಪುಸ್ತಕೋದ್ಯಮ ಕುಸಿಯಬಾರದು, ಪ್ರಸ್ತಕ ಸಂಸ್ಕೃತಿ ಸದಾಕಾಲ ಚೈತನ್ಯಶೀಲವಾಗಿರಬೇಕುʼ ಎಂದು ಹೇಳಿದರು.
ʼಗ್ರಂಥ ಸಂಸ್ಕೃತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಗ್ರಂಥಗಳು ಮುಂದಿನ ದಿನಗಳಲ್ಲಿ ಮ್ಯೂಸಿಯಂ ಸೇರುವ ದಿನಗಳು ದೂರಿಲ್ಲವೆಂಬುದು ನನ್ನ ಅನಿಸಿಕೆ. ಇತ್ತೀಚಿಗೆ ಮುದ್ರಿತ ಪುಸ್ತಕಗಳಿಗೆ ಆತಂಕ ಎದುರಾಗಿದೆ ವಿದ್ಯುತ್ಮಾನದ ಆವಿಷ್ಕಾರದಿಂದ ಮುದ್ರಿತ ಪುಸ್ತಕಗಳು ಆ ಪ್ರಸ್ತುತವೇನೋ ಎನ್ನುವಂತಾಗಿದೆ. ಪುಸ್ತಕೋದ್ಯಮ ಅತ್ಯಂತ ಅಪಾಯದ ಅಂಚನ್ನು ತಲುಪಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ʼಪುಸ್ತಕ ಸಂಸ್ಕೃತಿ ಬೆಳೆಯಬೇಕಾದರೆ ಮಕ್ಕಳಲ್ಲಿ ಓದುವ ಅಭಿವೃದ್ಧಿಯನ್ನು ಬೆಳೆಸಬೇಕು. ಪ್ರತಿಯೊಂದು ಶಾಲೆಯಲ್ಲಿ ಸಸಜ್ಜಿತವಾದ ಗ್ರಂಥಾಲಯ ಇರಬೇಕು. ಪಾಠದ ಜೊತೆಗೆ ವಾರದಲ್ಲಿ ಒಂದು ಗಂಟೆಯಾದರೂ ತಮಗೆ ಬೇಕಾದ ಪುಸ್ತಕಗಳನ್ನು ಆಯ್ದುಕೊಂಡು ಓದುವಂತಿರಬೇಕು. ಓದಿಗೆ ಪ್ರೋತ್ಸಾಹ ಕೊಡುವ ಯೋಜನೆಯನ್ನು ರೂಪಿಸಿ ಜಾರಿಗೆ ತರಬೇಕು. ಈಚೆಗೆ ಇಂಗ್ಲಿಷ್ ಮಾಧ್ಯಮದ ಭರಾಟೆಯಿಂದ ಕನ್ನಡ ಪುಸ್ತಕಗಳನ್ನು ಓದುವುದರಿಂದ ಮಕ್ಕಳು ವಂಚಿತರಾಗಿದ್ದಾರೆ. ಇದಕ್ಕೆ ಪರಿಹಾರ 1ರಿಂದ-10ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯುವಂತೆ ಆಗಬೇಕುʼ ಎಂದು ಒತ್ತಾಯಿಸಿದರು.

ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಪ್ರಕಾಶ ಕಂಬತ್ತಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಸರ್ಕಾರ ಪ್ರಕಾಶಕರ ಎಲ್ಲ ಪುಸ್ತಕಗಳನ್ನು ಖರೀದಿ ಪುನರ್ ಸ್ಥಾಪಿಸಬೇಕು. ಓದುಗರಿಗೆ ಪುಸ್ತಕ ತಲುಪಿಸುವ ಪರ್ಯಾಯ ವ್ಯವಸ್ಥೆಗೆ ಆಲೋಚಿಸಬೇಕು. ಇಂಗ್ಲಿಷ್ ವ್ಯಾಮೋಹದ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಯದಿರುವ ಕಾರಣಕ್ಕೆ ಪುಸ್ತಕ ಓದುವ ಸಂಸ್ಕೃತಿಗೆ ಹಿನ್ನಡೆಯಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಆಸಕ್ತಿ ಮೂಡಿಸಬೇಕುʼ
ಸಾನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಪುಸ್ತಕಗಳು ಮನ-ಮನೆಗಳು ಬೆಳಗುತ್ತವೆ. ಪುಸ್ತಕದ ಒಂದು ಸಾಲಿನಿಂದ ಬದುಕು ಬದಲಾಗುತ್ತದೆ. ಪ್ರಕಾಶಕರ ನಿಸ್ವಾರ್ಥ ಶ್ರಮದಿಂದ ನಾಡಿನಲ್ಲಿ ಅನೇಕ ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಈಚೆಗೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರತಿಯೊಬ್ಬರು ಪುಸ್ತಕ ಕೊಂಡು ಓದುವ ಸಂಸ್ಕೃತಿ ಅನುಸರಿಸಿ. ನಿತ್ಯ ಓದುವ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ʼಬಸವಾದಿ ಶರಣರು ಕಲ್ಯಾಣ ಕ್ಷೇತ್ರಕ್ಕೆ ಬಂದು ಕನ್ನಡದಲ್ಲಿಯೇ ವಚನ ರಚಿಸಿದ್ದಾರೆ. ಶರಣರು ಕನ್ನಡಕ್ಕೆ ಜೀವ ತುಂಬಿದವರು. ಉರಿಲಿಂಗಪೆದ್ದಿ ಉತ್ಸವ ಕೇವಲ ದಲಿತರ ಕಾರ್ಯಕ್ರಮವಲ್ಲ, ಇದು ಶರಣರ ಕಾರ್ಯಕ್ರಮವಾಗಿದೆ. ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಅವರು ನಿಷ್ಠಾವಂತ ವಚನಕಾರರು. ಅವರ ಉತ್ಸವ ಕಾರ್ಯಕ್ರಮ ಸರ್ಕಾರದಿಂದಲೇ ಆಚರಿಸಬೇಕುʼ ಎಂದರು.
ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು :
ʼರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಪ್ರಕಾಶರೊಬ್ಬರಿಗೆ ಪ್ರತಿ ವರ್ಷ ಸದಸ್ಯರೆಂದು ಪರಿಗಣಿಸಿ ಜೊತೆಗೆ ಕಡ್ಡಾಯವಾಗಿ ಪ್ರಕಾಶಕರಿಗೆ ಒಂದು ಪ್ರಶಸ್ತಿ ನೀಡಬೇಕು. ಪ್ರಕಾಶಕರ ಪುಸ್ತಕ ಖರೀದಿಗೆ ಏಕಗವಾಕ್ಷಿ ಅಡಿಯಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕ ಖರೀದಿ ಪ್ರಾರಂಭಿಸಬೇಕು. ಪ್ರತಿ ವರ್ಷ ಪ್ರಕಾಶಕರ ಸಮ್ಮೇಳನ ಆಯೋಜಿಸಬೇಕು. ಪಠ್ಯಪುಸ್ತಕಗಳಲ್ಲಿ ಪ್ರಕಾಶಕರ ಜೀವನ ಚರಿತ್ರೆ ಮತ್ತು ಪ್ರಕಾಶಕರ ಪರಂಪರೆ ಅಳವಡಿಸಬೇಕು.

ಪ್ರಕಾಶಕ, ಮುದ್ರಕರು, ಡಿಟಿಪಿ, ಮುಖಪುಟ ವಿನ್ಯಾಸಕಾರರಿಗೆ ಉಚಿತ ಬಸ್ ಮತ್ತು ರೈಲ್ವೆ ಪಾಸ್ ವಿತರಿಸಿ ಅವರಿಗೆ ಸರ್ಕಾರದಿಂದ ಭದ್ರತೆ ಒದಗಿಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ (ಕೆಕೆಆರ್ಡಿಬಿ) ಪ್ರತಿ ವರ್ಷ ಪ್ರಕಾಶಕರ ಮತ್ತು ಲೇಖಕರ 500 ಕೃತಿಗಳನ್ನು ಕಡ್ಡಾಯವಾಗಿ ಖರೀದಿಸಬೇಕುʼ ಎಂದು ಹಕ್ಕೊತ್ತಾಯಗಳು ಮಂಡಿಸಿದರು.
ಇದನ್ನೂ ಓದಿ : ಬೀದರ್ | ಕೇಂದ್ರದ ಅನುದಾನ ತರುವಲ್ಲಿ ಸಾಗರ ಖಂಡ್ರೆ ಯಶಸ್ವಿ : ಸಚಿವ ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ, ಕಾರ್ಯಕ್ರಮ ಸಂಯೋಜಕ ಡಾ.ಗವಿಸಿದ್ದಪ್ಪ ಪಾಟೀಲ್, ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ, ವೈದ್ಯರಾದ ಡಾ.ಆರಿಫ್ ಪಟೇಲ್, ಡಾ.ಸಂಧ್ಯಾ ಸುರೇಶ ಕಾನೇಕರ್, ಜಗನ್ನಾಥ ಚಿಲ್ಲಾಬಟ್ಟೆ, ಅಪಾರಾವ್ ಅಕ್ಕೋಣಿ, ಪ್ರಕಾಶಕ ಕೃಷ್ಣಕುಮಾರ, ಕಾಳಿದಾಸ ಸೂರ್ಯವಂಶಿ, ರಾಜಕುಮಾರ ಮಾಳಗೆ ಸೇರಿದಂತೆ ಗಣ್ಯರು, ಮುಖಂಡರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.




