ಭಾರತದಲ್ಲಿ ಅಂಬೇಡ್ಕರ್-ಪೇರಿಯಾರ್-ಕಾನ್ಶಿರಾಮ್ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ ಅಹಿಂಸಾ ಹೇಳಿದರು.
ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ ಮಹಾತ್ಮ ಜ್ಯೋತಿಭಾ ಫುಲೆ ಪದವಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಸಮಾನತೆ ಸಭೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ʼಪ್ರಜಾಪ್ರಭುತ್ವದ ವ್ಯವಸ್ಥೆ ಅಸಮಾನತೆಯಿಂದ ಕೂಡಿದ್ದು, ಶ್ರೀಮಂತರ ಪರವಾಗಿ ಮಾತ್ರ ಸಮಾಜ ನಡೆಯುತ್ತಿದೆ. ಬಲ, ಎಡ ಮತ್ತು ಮಧ್ಯ ಪಂಥಿಯರಿಂದ ಉತ್ತಮ ಸಮ ಸಮಾಜ ನಿರ್ಮಾಣ ಸಾಧ್ಯವಾಗಿಲ್ಲ. ಸಮಾನತೆ, ನ್ಯಾಯ, ವೈಜ್ಞಾನಿಕತೆ, ಸಂವಿಧಾನ ಪೀಠಿಕೆಯನ್ನು ಸೂತ್ರವಾಗಿಸಿಕೊಂಡು ಸಾಗಬೇಕುʼ ಎಂದರು.
ʼಸತ್ಯ ಪಂಥದ ಮೇಲೆ ನಂಬಿಕೆಯಿರುವ ವ್ಯಕ್ತಿಗಳ ಮೂಲಕ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಾಗುತ್ತದೆ. ಸಮಾನತೆ ಮತ್ತು ನ್ಯಾಯದೊಂದಿಗೆ 2028ರ ವಿಧಾನಸಭಾ ಚುನಾವಣೆಗೆ ಸಿದ್ದರಾಗುತ್ತೇವೆ. 2026ರ ನವೆಂಬರ್ನಲ್ಲಿ ಹೊಸ ಪಕ್ಷ ಸ್ಥಾಪಿಸಿ, 2027ರ ಫೆಬ್ರವರಿಯೊಳಗೆ ಪಕ್ಷದ ಹೆಸರು, ಬಾವುಟ, ವೆಬ್ ಆರಂಭಿಸಲಾಗುವುದು. ಸಿದ್ಧಾಂತದಲ್ಲಿ ನಂಬಿಕೆ, ಸೇವಾ ಮನೋಭಾವ, ಪ್ರಾಮಾಣಕತೆ, ಆರ್ಥಿಕ ಭದ್ರತೆ ಹಾಗೂ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದುʼ ಎಂದು ತಿಳಿಸಿದರು.

ʼಪುರುಷ ಪ್ರಧಾನದ ವ್ಯವಸ್ಥೆಗೆ ಪ್ರತಿರೋಧವಾಗಿ ಲಿಂಗ ಸಮಾನತೆಯ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿಗಳು, ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ನ್ಯಾಯ ಯೋಜನೆಗಳನ್ನು ರೂಪಿಸಲಾಗುವುದು. ಬಂಡವಾಳಶಾಹಿ ವ್ಯವಸ್ಥೆಗೆ ಪ್ರತಿರೋಧವಾಗಿರುವ ಸಮಾಜವಾದದ ಪರವಾಗಿ ಕೆಲಸ ಮಾಡುತ್ತೇವೆ. ದೇಶದಲ್ಲಿರುವ ಸುಮಾರು 2,900 ರಾಜಕೀಯ ಪಕ್ಷಗಳು ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅಭಿವ್ಯಕ್ತಿ, ಪ್ರತಿಭಟನೆ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವುದು, ಲೋಕಾಯುಕ್ತ ಬಲಪಡಿಸಿ ಲಂಚಮುಕ್ತ ಕರ್ನಾಟಕ ಗುರಿಯೊಂದಿಗೆ ಪಾರದರ್ಶಕ ಆಡಳಿತ ನೀಡುವುದು ಘನ ಉದ್ದೇಶವಾಗಿದೆʼ ಎಂದು ಹೇಳಿದರು.
ಮಹಾತ್ಮ ಜೋತಿಭಾ ಫುಲೆ ಪದವಿ ಕಾಲೇಜಿನ ಸಂಸ್ಥಾಪಕ ಕಾಶಿನಾಥರಾವ ಚೆಲವಾ ಸಮಾನತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಸಮಾಜದಲ್ಲಿ ಇಂದಿಗೂ ಜಾತಿ, ಧರ್ಮ, ವರ್ಣ, ವರ್ಗ ವ್ಯವಸ್ಥೆ ಆಳವಾಗಿ ಬೇರೂರಿದೆ. ಸಮ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ರಾಜಕೀಯ ಪ್ರವೇಶ ಅಗತ್ಯವಿದೆ. ಸಾಮಾಜಿಕ ಸಮಾನತೆ ಬರಬೇಕಾದರೆ ರಾಜಕೀಯ ಸಮಾನತೆಯ ಅಗತ್ಯವಿದೆ. ಅಂಬೇಡ್ಕರ್ ಅವರ ಕನಸಿನ ರಾಜಕೀಯ ಸಿದ್ಧಾಂತ ಸಮಕಾಲೀನ ರಾಜಕಾರಣಕ್ಕೆ ಅವಶ್ಯವಿದೆʼ ಎಂದರು.
ಸಭೆಯಲ್ಲಿ ʼಸಮ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣʼ ಕುರಿತು ನಡೆದ ಸಂವಾದದಲ್ಲಿ ಹಲವು ಪ್ರಶ್ನೆಗಳಿಗೆ ನಟ ಚೇತನ ಅವರು ಉತ್ತರಿಸಿದರು.
ಇದನ್ನೂ ಓದಿ : ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಸಭೆಯಲ್ಲಿ ಬುದ್ಧ,ಬಸವ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ, ಚಿಂತಕ ತುಕಾರಾಮ ದೊಡ್ಡಿ, ಜ್ಞಾನ ಉದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗೇಶ ಚೆಲವಾ, ಕಾರ್ಯಕ್ರಮ ಸಂಯೋಜಕ ಮುಕೇಶ ಚೆಲವಾ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸಾಮಾಜಿಕ ಚಿಂತಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





