ನಾಲ್ಕೈದು ಯುವಕರು ಸೇರಿ ಭಾಲ್ಕಿ ಬಸ್ ಡಿಪೋಗೆ ಸೇರಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಡೆದು ಚಾಲಕ ಮತ್ತು ನಿರ್ವಾಹಕರನ್ನು ಥಳಿಸಿದ ಘಟನೆ ಭಾಲ್ಕಿ ತಾಲೂಕಿನ ಬೀರಿ(ಕೆ) ಮಾರ್ಗದ ರಸ್ತೆಯಲ್ಲಿ ಬುಧವಾರ ನಡೆದಿದೆ.
ಸೋನಾಳ ಗ್ರಾಮದ ನಿವಾಸಿ ಆಗಿರುವ ಬಸ್ ಚಾಲಕ ಚಂದ್ರಶೇಖರ ಬಸಯ್ಯ ಸ್ವಾಮಿ ಮತ್ತು ದಾಡಗಿ ಗ್ರಾಮದ ನಿವಾಸಿ ಆಗಿರುವ ನಿರ್ವಾಹಕ ಲಿಂಗರಾಜ ಸಿದ್ರಾಮಪ್ಪ ಎಂಬುವರ ಮೇಲೆ ಬೀರಿ(ಕೆ) ನಿವಾಸಿ ಆಗಿರುವ ವಿಶಾಲ ಸಂಜೀವಕುಮಾರ ಚವ್ಹಾಣ ಸೇರಿ ನಾಲ್ಕೈದು ಯುವಕರು ಹಲ್ಲೆ ನಡೆಸಿದ್ದಾರೆ.
ತೀವ್ರ ಗಾಯಗೊಂಡಿರುವ ಬಸ್ ಚಾಲಕ ಚಂದ್ರಶೇಖರ ಬಸಯ್ಯ ಸ್ವಾಮಿ ಅವರನ್ನು ಭಾಲ್ಕಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಬ್ರೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಗುರುನಾನಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಕುರಿತು ನಿರ್ವಾಹಕ ಲಿಂಗರಾಜ ಸಿದ್ರಾಮಪ್ಪ ನೀಡಿರುವ ದೂರಿನ ಮೇರೆಗೆ ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ :
ಬಾಳೂರು-ಚಂದಾಪೂರ-ಬೀದರ್ ಮಾರ್ಗಕ್ಕೆ ಸಂಚರಿಸುವ ಬಸ್ ಮೇಲೆ ಎಂದಿನಂತೆ ಚಾಲಕ ಚಂದ್ರಶೇಖರ ಬಸಯ್ಯ ಸ್ವಾಮಿ ಮತ್ತು ನಿರ್ವಾಹಕ ಲಿಂಗರಾಜ ಸಿದ್ರಾಮಪ್ಪ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾಲ್ಕಿ ಬಸ್ ನಿಲ್ದಾಣದಿಂದ ಬುಧವಾರ ಬೆಳಿಗ್ಗೆ 8:30ಕ್ಕೆ ಹೊರಟ ಈ ಬಸ್ ಕೋಟಗ್ಯಾಳವಾಡಿ, ಅಂಬೆಸಾಂಗವಿ ಕ್ರಾಸ್ ರೋಡ್, ವಳಸಂಗ ಮಾರ್ಗದ ಮೂಲಕ 9 ಗಂಟೆ ಸುಮಾರಿಗೆ ಬೀರಿ(ಕೆ) ಗ್ರಾಮ ತಲುಪಿದೆ. ಅಲ್ಲಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಸ್ ಹೊರಟಿದೆ.

ಮಾರ್ಗ ಮಧ್ಯದಲ್ಲಿ ಹಿಂಬದಿಯಿಂದ ಸ್ಕೂಟಿ ಮೇಲೆ ಬಂದ ವಿಶಾಲ ಎಂಬಾತ ಬಸ್ನ್ನು ಅಡ್ಡಗಟ್ಟಿ ಮುಂದೆ ಬರಲು ಬಸ್ ಬದಿ ದಾರಿ ನೀಡಲಿಲ್ಲ ಎಂದು ಆರೋಪಿಸಿ ಏಕಾಏಕಿ ಬಸ್ ಚಾಲಕ ಚಂದ್ರಶೇಖರ ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಶರ್ಟ್ ಹಿಡಿದು ಎಳೆದಾಡಿ ಭುಜ, ಎದೆಯ ಮೇಲೆ ಮುಷ್ಟಿ ಕೈಯಿಂದ ಹೊಡೆದು ಗುಪ್ತ ಗಾಯಗೊಳಿಸಿದ್ದಾನೆ. ನಂತರ ವಿಶಾಲ ಎಂಬಾತ ಜತೆಗೆ ಗುರುತಿಸಿಕೊಂಡ ನಾಲ್ಕೈದು ಯುವಕರು ಬಸ್ನಂದ ಚಾಲಕ ಚಂಧ್ರಶೇಖರ, ನಿರ್ವಾಹಕ ಲಿಂಗರಾಜ ಎಂಬುವರನ್ನು ಹೊರತಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಾಲಕನ ಆರೋಗ್ಯ ವಿಚಾರಣೆ :
ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ನಗರದ ಗುರುನಾನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಚಂದ್ರಶೇಖರ ಸ್ವಾಮಿ ಅವರನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯರು ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಭಾಲ್ಕಿ ತಾಲ್ಲೂಕಿನ ಬೀರಿ(ಕೆ) ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪು ಸ್ವಾಮಿ ಅವರ ಮೇಲೆ ತೀವ್ರ ಹಲ್ಲೆ ನಡೆಸಿರುವುದು ಖಂಡನೀಯ. ಶರಣ ನಾಡಿನಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಗಾಯಾಳು ವಾಹನ ಚಾಲಕರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಎಂದು ದಿಸಾ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಒತ್ತಾಯಿಸಿದರು.
ಹಲ್ಲೆ ಪ್ರಕರಣ ವಾಹನಗಳ ಚಾಲಕರಲ್ಲಿ ಭಯ ಮೂಡಿಸಿದೆ. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ. ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯರೂ ಆದ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನೀಲ್ ಬಚ್ಚನ್ ಹೇಳಿದರು.
ಬಸ್ ಚಾಲಕರ ಮೇಲೆ ಹಲ್ಲೆಗೈದ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಫುಲಾರಿ ಆಗ್ರಹಿಸಿದರು.
ಇದನ್ನೂ ಓದಿ : ಔರಾದ್ | ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ ಪ್ರಕರಣ; ಶಿಕ್ಷಕನ ಅಮಾನತು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಪ್ರಮುಖರಾದ ವರದಯ್ಯ ಸ್ವಾಮಿ, ಮಹೇಶ ಪಾಟೀಲ, ರತನ್ ಕಮಲ್, ಪ್ರಭುಲಿಂಗ ಸ್ವಾಮಿ, ಬಿಲ್ಲುಭಯ್ಯಾ ಮತ್ತಿತರರಿದ್ದರು.





