ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ದೇಶಪ್ರೇಮ ಕೋಟ್ಯಾಂತರ ಭಾರತೀಯರಿಗೆ ಸ್ಫೂರ್ತಿಯಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಛತ್ರಪತಿ ಶಿವಾಜಿ ಮಹಾರಾಜ ಅವರು ಭಾರತದ ಇತಿಹಾಸದಲ್ಲಿ ಅಪ್ರತಿಮ ವೀರ ಮತ್ತು ದಕ್ಷ ಆಡಳಿತಗಾರರಾಗಿ ಚಿರಸ್ಥಾಯಿಯಾಗಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವರಾಜ್ಯದ ಕನಸನ್ನು ಕಂಡು ಅದನ್ನು ನನಸು ಮಾಡಿದರು. ಶಿವಾಜಿ ಮಹಾರಾಜರು ಕೇವಲ ಯುದ್ಧವಲ್ಲದೆ, ಸ್ತ್ರೀಯರಿಗೆ ಗೌರವ ನೀಡುವುದು, ರೈತ ಹಿತರಕ್ಷಣೆ ಮತ್ತು ಸಮರ್ಥ ನೌಕಾಪಡೆಯನ್ನು ನಿರ್ಮಿಸುವ ಮೂಲಕ ಅವರು ಒಬ್ಬ ಜನಪರ ರಾಜನಾಗಿ ಗುರುತಿಸಿಕೊಂಡವರು. ಛತ್ರಪತಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಅವರ ಸೈನ್ಯದಲ್ಲಿ ಸಾಕಷ್ಟು ಮುಸ್ಲಿಂರಿದ್ದರು. ಆದರೆ ಅವರ ಇತಿಹಾಸವನ್ನು ತಪ್ಪಾಗಿ ಹೇಳಲಾಗುತ್ತಿದೆ. ಸತ್ಯಾಂಶವನ್ನು ಹೊರತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮರಾಠ ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆʼ ಎಂದರು.
ಬೀದರ ಸಂಸದ ಸಾಗರ ಖಂಡ್ರೆ ಅವರು ಮಾತನಾಡಿ, ʼಛತ್ರಪತಿ ಶಿವಾಜಿ ಮಹಾರಾಜರು ಅನ್ಯಾಯ ಅತ್ಯಾಚಾರದ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸುತ್ತಿದ್ದರು. ಅವರಂತೆ ತಾವೆಲ್ಲರೂ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮಹಪುರುಷರನ್ನು ಕೇವಲ ಜಯಂತಿಗೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವಾಗಬೇಕಿದೆ. ಮರಾಠ ಸಮುದಾಯ ಭವನ ನಿರ್ಮಾಣಕ್ಕಾಗಿ 50 ಲಕ್ಷ ಮೀಸಲಿಡಲಾಗಿದೆ. ಮುಂದೆಯೂ ಸಮಾಜದ ಪರವಾಗಿ ನಿಲ್ಲುವುದಾಗಿ ಸಂಸದರು ಭರವಸೆ ನೀಡಿದರು.
ಇತಿಹಾಸಕಾರರು ಹಾಗೂ ಮರಾಠ ಸೇವಾ ಸಂಘ ಪುಣೆ ಮಹಾರಾಷ್ಟ್ರದ ಪ್ರಮುಖ ಗಂಗಾಧರ್ ಬನಬಾರೆ ವಿಶೇಷ ಉಪನ್ಯಾಸ ನೀಡಿ, ʼಛತ್ರಪತಿ ಶಿವಾಜಿ ಮಹಾರಾಜರನ್ನು ಮರಾಠರಿಗೆ, ಹಿಂದೂ ಧರ್ಮಕ್ಕೆ ಸೀಮಿತಗೊಳಿಸಿ ಅನ್ಯ ಧರ್ಮದವರಿಗೆ ಮರಾಠಿಗರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಮಹಾಪುರುಷರನ್ನು ಒಂದು ಜಾತಿ, ಧರ್ಮದ ಹಣೆಪಟ್ಟಿ ಕಟ್ಟಬೇಡಿ, ಮಹಾಪುರಷರು ಈ ಸಮಾಜದ ಆಸ್ತಿ. ಶಿವಾಜಿ ಬಗ್ಗೆ ಶತ್ರುಗಳು ಸಹ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ. ಅಂತಹ ಮಹಾನ್ ವ್ಯಕ್ತಿ ಶಿವಾಜಿ ಮಹಾರಾಜರಾಗಿದ್ದರು. ಕನ್ನಡ -ಮರಾಠಿ ಭಾಷೆಯ ನಡುವೆ ನಡೆಯುತ್ತಿರುವ ಹೋರಾಟ ವ್ಯರ್ಥವಾದದ್ದು. ಶಿವಾಜಿ ಮಹಾರಾಜರು ಕರ್ನಾಟಕದ ಬೆಂಗಳೂರಿನಲ್ಲಿಯೇ ಪೋಷಕರಿಂದ ಸ್ವರಾಜ್ಯದ ಶಿಕ್ಷಣ ಪಡೆದಿದ್ದರೂ. ಕನ್ನಡ ಹಾಗೂ ಮರಾಠಿಗರ ಮಧ್ಯ ಅವಿನಾಭಾವ ಸಂಬಂಧವಿದೆʼ ಎಂದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ನಗರದ ಶಿವಾಜಿ ವೃತ್ತದಿಂದ ಚಾಲನೆಗೊಂಡು ಭಗತ್ಸಿಂಗ್ ವೃತ್ತ, ಬಸವವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ರಂಗಮಂದಿರ ತಲುಪಿತು.
ಇದನ್ನೂ ಓದಿ : ಜನಪರ, ಜೀವಪರ ಸಾಹಿತ್ಯ ರಚನೆಯಾಗಲಿ : ಮಾಣಿಕ ನೇಳಗಿ
ಬೀದರ ನಗರ ಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಛತ್ರಪತಿ ಶಿವಾಜಿ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಘುನಾಥರಾವ್ ಜಾಧವ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.





