ವಿದ್ಯಾರ್ಥಿಗಳು ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಂಡರೆ ಜೀವನ ಉಜ್ವಲಗೊಳ್ಳುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಶಿಕ್ಷಣ ಸಹಕಾರಿಯಾಗುತ್ತದೆ ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನುಡಿದರು.
ಬೀದರ್ ತಾಲೂಕಿನ ಬಗದಲ ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾದ ಮಾಜಿ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಅವರ ಮೂರ್ತಿ ಅನಾವರಣ ಹಾಗೂ ಗುರು ಹಿರಿಯರ ಆಶಿರ್ವಾದ-2026 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼನಮ್ಮ ಅಭ್ಯುದಯಕ್ಕೆ ಸರ್ವಸ್ವವನ್ನು ಸಮರ್ಪಿಸಿದ ಪಾಲಕರ ಕನಸನ್ನು ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ತೀರಿಸಬೇಕು. ವಿದ್ಯಾರ್ಥಿಗಳಲ್ಲಿ ಗುರು ಹಿರಿಯರ ಬಗ್ಗೆ ಗೌರವ ಮತ್ತು ಶಿಸ್ತುನಿಂದ ಜೀವನದಲ್ಲಿ ಮೌಲ್ಯ ಶಿಕ್ಷಣ ದೊರೆಯುತ್ತದೆ. ಗುರುಗಳ ಮಾರ್ಗದರ್ಶನ, ಹಿರಿಯರ ಅನುಭವ ಹಾಗೂ ಪೋಷಕರ ಆಶೀರ್ವಾದದೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಮಹೋನ್ನತ ಸಾಧನೆ ಸಾಧ್ಯ. ಗೌರವ, ಶ್ರಮ ಹಾಗೂ ನಿಷ್ಠೆ ಮೈಗೂಡಿಸಿಕೊಂಡ ವಿದ್ಯಾರ್ಥಿಗಳೇ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ನಾಯಕರಾಗುತ್ತಾರೆʼ ಎಂದರು.
ʼಮುಂದಿನ ಭವಿಷ್ಯ ಭಾರತದ ನಿಜವಾದ ಆಸ್ತಿಗಳಾದ ವಿದ್ಯಾರ್ಥಿಗಳು ದೇಶ ಕಟ್ಟುವ ಸಂಕಲ್ಪ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ದೇಶ ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸಬಲ್ಲ ಸಮರ್ಥ ನಾಗರೀಕರನ್ನು ನಿರೀಕ್ಷಿಸುತ್ತಿದೆ. ವ್ಯವಸ್ಥೆಯನ್ನು ಸಾಂಸ್ಥಿಕವಾಗಿ ಗಟ್ಟಿಗೊಳಿಸುವ ಗುರುತರ ಹೊಣೆಗಾರಿಕೆ ನಿಮ್ಮ ಮೇಲಿದೆ. ಬಗದಲ್ ಮೊರಾರ್ಜಿ ಗುಣಮಟ್ಟದ ಶಿಕ್ಷಣ ನೀಡಿ ಬೀದರ ದಕ್ಷಿಣ ಕ್ಷೇತ್ರದಲ್ಲಿ ಪ್ರತಿಷ್ಠಿತ ಶಾಲೆ ಎಂದು ಹೆಸರುವಾಸಿಯಾಗಿದೆ. ಸಿಬ್ಬಂದಿಗಳು ಮನಸ್ಸು ಮಾಡಿದರೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಬಹುದು ಎಂಬುದನ್ನು ಈ ಶಾಲೆ ತೋರಿಸಿಕೊಟ್ಟಿದೆʼ ಎಂದರು.
ʼಈ ಶಾಲೆಯ ಮಕ್ಕಳನ್ನು ಹೆಚ್ಚಿನ ಸಾಧನೆಗೈಯಲು ಪ್ರೋತ್ಸಾಹಿಸುವ ದಿಸೆಯಲ್ಲಿ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮಕ್ಕಳಿಗೆ ₹25 ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ ₹15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹10 ಸಾವಿರ ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದ ಅವರು, ಶಾಲೆಯ ಬಯಲು ರಂಗಮಂದಿರ ಮುಂಭಾಗದ ಮೇಲ್ಛಾವಣಿಗೆ ಅಗತ್ಯ ಅನುದಾನ ನೀಡುವೆ, ಚೆಸ್ ಥೀಮ್ ಪಾರ್ಕ್ ಮೇಲ್ ಛಾವಣಿಗೆ ₹2.5 ಲಕ್ಷ ಅನುದಾನ ನೀಡುವೆʼ ಎಂದು ಘೋಷಣೆ ಮಾಡಿದರು.
ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ʼಭಯ ಹೋಗಲಾಡಿಸಿ ನಿರ್ಭಯವಾಗಿ, ಧೈರ್ಯ ಶಾಲಿಗಳಾಗಿ ವಿದ್ಯಾರ್ಥಿಗಳು ಜೀವಿಸಬೇಕು. ಉನ್ನತ ಸಾಧನೆಗೈದು ಜೀವನ ಮತ್ತು ಪರೀಕ್ಷೆ ಎರಡರಲ್ಲಿಯೂ ಯಶಸ್ಸು ಗಳಿಸಬೇಕು. ದೊಡ್ಡ ಗುರಿ ಉದ್ದೇಶ ಇಟ್ಟುಕೊಂಡು ಅಸಾಮಾನ್ಯ ಸಾಧನೆಗೈದು ಗುರುತು ಬಿಟ್ಟು ಹೋಗುವ ಸಂಕಲ್ಪ ಮಕ್ಕಳು ಮಾಡಬೇಕುʼ ಎಂದು ನುಡಿದರು.
ಇದೇ ಸಂದರ್ಭದಲ್ಲಿ 2024-25 ನೇ ಸಾಲಿನ ಸಾಧಕ ವಿದ್ಯಾರ್ಥಿ ಅಭಿಷೇಕ ಸಂಜುಕುಮಾರ, ಕಾಯಕ ಜೀವಿಗಳಾದ ಗಂಗಮ್ಮ, ನಿಂಗಮ್ಮ, ಪ್ರಭಾವತಿ, ಮೃತ ನೌಕರ ಉಮೇಶ ಬಳೆಬಾಯಿ ಅವರ ತಾಯಿಯನ್ನು ಗೌರವಿಸಿ ಸತ್ಕರಿಸಲಾಯಿತು. 10ನೇ ತರಗತಿ ಮಕ್ಕಳು ತಮ್ಮ ಪಾಲಕರ ಗುರು ಹಿರಿಯರ ಆಶಿರ್ವಾದ ಪಡೆದರು.
ಇದನ್ನೂ ಓದಿ : ಬೀದರ್ | ಬಿಸಿಲಿನ ಧಗೆಗೆ ತಂಪೆರೆದ ಮಳೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರನ ಜಿಲ್ಲಾ ಅಧಿಕಾರಿ ಸುನೀತಾ ಪಟವಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರನ ವ್ಯವಸ್ಥಾಪಕ ಅಶೋಕ ಶೇರಿಕಾರ, ಕ್ರೈಸ್ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ ಸೇರಿದಂತೆ ಪ್ರಮುಖರಾದ ವೀರಶೆಟ್ಟಿ ಕಲ್ಲೂರ, ಬಸವರಾಜ ಚಟ್ನಳ್ಳಿ, ಕಾಶಿನಾಥ್ ಬಗದಲ್, ಸೂರ್ಯಕಾಂತ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಚಾರ್ಯ ಚನ್ನಬಸವ ಹೇಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಚಾರ್ಯ ಗೌತಮ ಕುದರೆ ನಿರೂಪಿಸಿದರು. ಪ್ರದೀಪ ನಿಡೋದೆ ವಂದಿಸಿದರು.





