ಸದೃಢ ಆರೋಗ್ಯಕ್ಕೆ ಎಲ್ಲರೂ ನಿತ್ಯ ವ್ಯಾಯಾಮ ಅಗತ್ಯವಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಹೇಳಿದರು.
ಬೀದರ್ ನಗರದ ಕೆ.ಇ.ಬಿ. ಕಚೇರಿ ಸಮೀಪ ಈಚೆಗೆ ನಡೆದ ಜಾರ್ಜ್ ಫೆಟ್ನೆಸ್ ಜಿಮ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ʼವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ಮತ್ತಿತರ ರೋಗಗಳು ದೂರವಾಗುತ್ತವೆʼ ಎಂದರು.
ʼಮನುಷ್ಯನಲ್ಲಿ ಸಂಪತ್ತು ಎಷ್ಟಿದ್ದರೂ ಆರೋಗ್ಯ ಇಲ್ಲದಿದ್ದರೆ ಅದು ವ್ಯರ್ಥ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜಿಮ್ಗಳಲ್ಲಿ ನಿತ್ಯ ಕನಿಷ್ಠ ತಾಸಾದರೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯುವ ಜನರಿಗೆ ಆರೋಗ್ಯದ ಗುಟ್ಟು ಹೇಳಿಕೊಡುತ್ತಿರುವ ವಿಕ್ಟೋರಿಯಾ ಜಾರ್ಜ್ ಅವರು 10 ವರ್ಷಗಳಿಂದ ಜಿಮ್ ನಡೆಸುತ್ತಿದ್ದಾರೆ. ಇದೀಗ ಹೈಟೆಕ್ ಜಿಮ್ ಆರಂಭಿಸಿದ್ದಾರೆ. ಯುವಜನರು ಇದರ ಲಾಭ ಪಡೆಯಬೇಕುʼ ಎಂದು ಸಲಹೆ ಮಾಡಿದರು.
ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಿ ಮಾತನಾಡಿ, ʼಪ್ರಸ್ತುತ ಎಲ್ಲರಿಗೂ ಒತ್ತಡ ಹೆಚ್ಚಾಗಿದೆ. ಜಿಮ್ಗಳಲ್ಲಿ ವ್ಯಾಯಾಮ ಮಾಡುವ ಮೂಲಕ ಅದನ್ನು ನಿವಾರಿಸಿಕೊಳ್ಳಬಹುದು. ಜಾರ್ಜ್ ಅವರು ಜನರಿಗೆ ಆರೋಗ್ಯದ ಮಹತ್ವ ಮನವರಿಕೆ ಮಾಡಿಕೊಡುತ್ತಿದ್ದಾರೆ. ಫಿಟ್ನೆಸ್ ಜಿಮ್ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗುತ್ತಿದ್ದಾರೆ. ಅವರ ಜನಪರ ಕಾಳಜಿ ಶ್ಲಾಘನೀಯʼ ಎಂದು ಹೇಳಿದರು.

ಜಾರ್ಜ್ ಫಿಟ್ನೆಸ್ ಜಿಮ್ ಮಾಲೀಕರಾದ ವಿಕ್ಟೋರಿಯಾ ಜಾರ್ಜ್ ಮಾತನಾಡಿ, ʼಸ್ವಸ್ಥ ಸಮಾಜ ನಿರ್ಮಾಣ ಕೊಡುಗೆ ನೀಡಲು ಜಿಮ್ ಫಿಟ್ನೆಸ್ ಸೆಂಟರ್ ಪ್ರಾರಂಭಿಸಿದ್ದೇನೆ. ಜಿಮ್ನಲ್ಲಿ ಪ್ರತಿ ದಿನ ಯೋಗ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತದೆ. ಕೊಬ್ಬು ಕರಗಿ ತೂಕ ನಿಯಂತ್ರಣದಲ್ಲಿ ಇರುತ್ತದೆ. ರಕ್ತ ಸಂಚಾರದಲ್ಲಿ ಸುಧಾರಣೆಯಾಗಿ, ಹೃದಯ ರೋಗದ ಅಪಾಯ ಕಡಿಮೆಯಾಗುತ್ತದೆʼ ಎಂದು ತಿಳಿಸಿದರು.
ʼಜಿಮ್ದಿಂದ ತಾಳ್ಮೆ ವೃದ್ಧಿಸುತ್ತದೆ. ದಿನವಿಡೀ ಮನಸ್ಸು ಉಲ್ಲಸಿತವಾಗಿರುತ್ತದೆ. ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ. ರಾತ್ರಿ ನೆಮ್ಮದಿಯ ನಿದ್ರೆ ಬರುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಿದರು. ಸದ್ಯ ಶೇ 10 ರಷ್ಟು ಮಹಿಳೆಯರು ಮಾತ್ರ ಜಿಮ್ ಹಾಗೂ ಫಿಟ್ನೆಸ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆʼ ಎಂದು ಫಿಟ್ನೆಸ್ ಕೋಚ್ ಅನುಶಾ ಹೇಳಿದರು.
ಇದನ್ನೂ ಓದಿ : ಬೀದರ್ | ತೀವ್ರ ಚಳಿಗಾಲ : ಪ್ರಾಥಮಿಕ, ಪ್ರೌಢ ಶಾಲಾ ಸಮಯ ಬದಲಾವಣೆ
ಸೆಲೆಬ್ರಿಟಿ ಟ್ರೈನರ್ ರಾಖಿ, ಪಾಸ್ಟರ್ ಎಜಿಕಿಯೇಲ್, ಬೀದರ್ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್, ಮುಖಂಡ ಫನಾರ್ಂಡೀಸ್ ಹಿಪ್ಪಳಗಾಂವ್, ಜಿಸಸ್ ಗ್ಲೋಬಲ್ ಚರ್ಚ್ನ ಫಾದರ್ ರೆವರೆಂಡ್ ರಜನಿಕಾಂತ್ ಮತ್ತಿತರರು ಇದ್ದರು.





