ದಾಸರು ಅಜ್ಞಾನ ಮತ್ತು ಅಂಧಕಾರದಿಂದ ಬಳಲುತ್ತಿದ್ದ ಜನಸಾಮಾನ್ಯರನ್ನು ಅವರ ಆಡುಭಾಷೆಯಲ್ಲೇ ಭಕ್ತಿ ಮಾರ್ಗದ ಮೂಲಕ ಜಾಗೃತಿಗೊಳಿಸಿದರು ಎಂದು ಅಹಿಲ್ಯಾಬಾಯಿ ಹೊಳ್ಕರ ಪ್ರೌಢ ಶಾಲೆಯ ಮುಖ್ಯಗುರು
ಸೈಯದ್ ಸಲಾವೋದ್ದೀನ್ ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ, ವತಿಯಿಂದ ಶಿವರಾತ್ರಿ ಪ್ರಯುಕ್ತ ಬೀದರ್ ನಗರದ ಅಹಿಲ್ಯಾಬಾಯಿ ಹೊಳ್ಕರ ಪ್ರೌಢ ಶಾಲೆಯ ಆವರಣದಲ್ಲಿ “ಹರಿದಾಸರ ಶಿವಸ್ತುತಿ” ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದಾಸರು ಸಾತ್ವಿಕ ವಿಚಾರಗಳ ಮೂಲಕ ಸಮಾಜದ ಡೊಂಕನ್ನು ತಿದ್ದಿ, ವೈಚಾರಿಕತೆಯನ್ನು ಬೋಧಿಸಿದ ಮಹಾನ್ ಸಂತರು’ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಡಾ.ಸುನೀತಾ ಕುಡ್ಲಿಕರ್ ಅವರು ಹರಿದಾಸರ ಶಿವಸ್ತುತಿ ಕುರಿತು ಉಪನ್ಯಾಸ ನೀಡಿ, ‘ವಿಷ್ಣುಭಕ್ತರಾಗಿದ್ದ ಹರಿದಾಸರು ಶಿವಭಕ್ತಿಯ ಪಾರಮ್ಯ ಮೆರೆದಿರುವುದು ವಿಶಿಷ್ಟ. ಹರಿದಾಸರ ಸಂದೇಶದಂತೆ ಶಿವಧ್ಯಾನದಿಂದ ಮನದಲ್ಲಿನ ಅಜ್ಞಾನವನ್ನು ದೂರ ಮಾಡಿ ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು’ ಎಂದರು.
‘ಹರಿದಾಸರು ಶಿವ, ಮಹಾದೇವ, ಮಹಾರುದ್ರರನ್ನು ಆಪ್ತ ದೇವರಾಗಿ ಸ್ತುತಿಸಿದ್ದಾರೆ. “ಚಂದ್ರಚೂಡ ಶಿವಶಂಕರ ಪಾರ್ವತಿರಮಣ ನಿನಗೆ ನಮೋ ನಮೋ”, “ಶಿವ ಶಿವ ಶಿವ ಎನ್ನಿರೊ-ಮೂಜಗದವರೆಲ್ಲ”, “ಕೈಲಾಸವಾಸ ಗೌರೀಶ ಈಶ” ಮೊದಲಾದ ಕೀರ್ತನೆಗಳ ಮೂಲಕ ಶಿವಧ್ಯಾನ ಮಾಡಿ ಮನಸ್ಸಿನ ಶಾಂತಿ, ಏಕಾಗ್ರತೆ ಮತ್ತು ಆಂತರಿಕ ಅರಿವು ವೃದ್ಧಿಸಿಕೊಳ್ಳಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ರವೀಂದ್ರ ಲಂಜವಾಡಕರ ಮಾತನಾಡಿ, ‘ಹರಿದಾಸರು ಕನ್ನಡ ಸಾಹಿತ್ಯ ಭಂಡಾರಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಅವರ ಸಂದೇಶಗಳು ಸಮಾಜದಲ್ಲಿ ಸದಾ ಪ್ರಚಾರವಾಗಬೇಕು’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಡೆತ್ ನೋಟ್ ಬರೆದಿಟ್ಟು 10ನೇ ವಿದ್ಯಾರ್ಥಿ ನೇಣಿಗೆ ಶರಣು
ಕಾರ್ಯಕ್ರಮದಲ್ಲಿ ವೈಜಿನಾಥ ಬಿರಾದಾರ, ಬಾಲಮ್ಮಾ, ರೋಹಿಣಿ, ಪಲ್ಲವಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.





