ಬೀದರ್ ನಗರದ ಶಿವನಗರ ಪ್ರದೇಶದಲ್ಲಿರುವ ಸಾರ್ವಜನಿಕ ವಾಕಿಂಗ್ ಪಾತ್ನಲ್ಲಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳ್ಳದೆ ಮಧ್ಯದಲ್ಲೇ ನಿಂತಿರುವುದರಿಂದ ಸ್ಥಳೀಯ ನಿವಾಸಿಗಳು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮಹಾನಗರ ಪಾಲಿಕೆ ಚರಂಡಿ ದುರಸ್ತಿ ಕಾಮಗಾರಿಯನ್ನು ಆರಂಭಿಸಿದ್ದರೂ ಅದನ್ನು ಸಂಪೂರ್ಣವಾಗಿ ಪೂರ್ಣಗೊಳಿಸದೆ ಬಿಟ್ಟುಹೋಗಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ಹಾಗೂ ಜನರಿಗೆ ವಾಕಿಂಗ್ ಮಾಡಲು ಅನಾನುಕೂಲ ಉಂಟಾಗಿದೆ ಎಂದು ನಿವಾಸಿಗಳು ದೂರಿದರು.
ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಶಿವನಗರ ಬಡಾವಣೆಯ ಹಿರಿಯರು, ವೃದ್ಧರು ಹಾಗೂ ಮಕ್ಕಳು ಆರೋಗ್ಯದ ದೃಷ್ಟಿಯಿಂದ ಈ ಸ್ಥಳಕ್ಕೆ ವಾಕಿಂಗ್ಗೆ ಬರುತ್ತಾರೆ. ಆದರೆ ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಾಕಿಂಗ್ ಪ್ರದೇಶದ ಸುತ್ತಮುತ್ತ ಅಲ್ಪ ಉಪಹಾರ ಅಂಗಡಿಗಳು ನಿಯಂತ್ರಣವಿಲ್ಲದೆ ಹೆಚ್ಚಾಗಿದ್ದು, ಅಂಗಡಿಗಳಿಂದ ಉಂಟಾಗುವ ಕಸವನ್ನು ಅಲ್ಲಿಯೇ ಬಿಸಾಡುವುದರಿಂದ ಪರಿಸರ ಅಸ್ವಚ್ಛವಾಗಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದ ವಾಕಿಂಗ್ ಮಾಡಲು ಬರುವ ಜನರಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಶಿವನಗರ ವಾಕಿಂಗ್ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಆಧುನಿಕ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು. ಜೊತೆಗೆ ಸಾರ್ವಜನಿಕರು ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆಗಳನ್ನು ಆಧುನಿಕ ಹೈಟೆಕ್ ಮಾದರಿಯಲ್ಲಿ ನಿರ್ಮಿಸಬೇಕು. ಶಿವನಗರ ಫುಟ್ಪಾತ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಫುಡ್ ಕೋರ್ಟ್ ಯೋಜನೆಯನ್ನು ಕೈಬಿಡಬೇಕು ಹಾಗೂ ನಡೆಯುತ್ತಿರುವ ಫುಟ್ಪಾತ್ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಸ್ಥಳೀಯರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : ಬೀದರ್ | ಅಷ್ಟೂರ್ ಜಾತ್ರೆ : ಗ್ರಾ.ಪಂ. ವತಿಯಿಂದ ಐತಿಹಾಸಿಕ ಪುಷ್ಕರಣಿ ಸ್ವಚ್ಛತೆ
ನಗರ ಪಾಲಿಕೆಯ ಸದಸ್ಯರಾದ ರಾಜು ಚಿಂತಾಮಣಿ, ಶಶಿ ಹೊಸಳ್ಳಿ, ಅಶೋಕಕುಮಾರ್ ಕಾರಂಜಿ, ಗುರುನಾಥ್ ಜಾಂತಿಕರ್, ಶಿವರಾಜ್ ಮಾಡ್ಗಿ, ಆನಂದ್ ಕುಮಾರ್ ಪಬ್ಭಾ, ಸಿ.ಎಸ್. ಪಾಟೀಲ್, ಮಲ್ಲಿಕಾರ್ಜುನ್ ಔರಾದೆ, ಬಂಡೆಪ್ಪ ಕೋಟೆ, ಪಂಡಿತ್ ಶಂಭು, ರಾಜೇಂದ್ರ ಚಿಂತಲ್ ಘಾಟ್, ಶ್ರೀಕಾಂತ್ ಮೋದಿ, ಸಂಗ್ ಶೆಟ್ಟಿ ಮಾನಕರೆ, ಡಾ. ಯು.ಎಸ್. ಪಾಟೀಲ್, ನೀಲಕಂಠ ಉಳ್ಳಾಗಡ್ಡಿ, ಬಿ.ಕಾಶಪ್ಪ, ಧನರಾಜ್ ಲಾಚೋರಿಯ, ರೋಷನ್ ವರ್ಮ, ಮಹಾಲಿಂಗಪ್ಪ ಬೆಲ್ದಾಳೆ ಹಾಗೂ ಗಣೇಶ್ ಭೋಸ್ಲೆ ಸೇರಿದಂತೆ ಬಡಾವಣೆಯ ಅನೇಕ ಹಿರಿಯ ನಾಗರಿಕರು ಉಪಸ್ಥಿತರಿದ್ದರು.





