ಅಲೆಮಾರಿ-ಅರೆಅಲೆಮಾರಿ ಸಮುದಾಯಕ್ಕೆ ನಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಔರಾದ್ ಪಟ್ಟಣದ ತಹಸೀಲ್ ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಗುರುವಾರ 5ನೇ ದಿನ ಪೂರೈಸಿದೆ.
ಧರಣಿ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಹುಜನ ನಾಯಕ ದಾದಾಸಾಹೇಬ್ ಕಾನ್ಶಿರಾಂ ಅವರ ಭಾವಚಿತ್ರ ಇಡಲಾಗಿದ್ದು, ಪ್ರತಿದಿನ ಬೆಳಿಗ್ಗೆ ಭಾವಚಿತ್ರಕ್ಕೆ ಗೌರವ ಮಾಲಾರ್ಪಣೆ ಸಲ್ಲಿಸಿ, ಭಾರತ ಸಂವಿಧಾನ ಪೀಠಿಕೆ ಪಠಿಸಲಾಗುತ್ತಿದೆ.
ಔರಾದ್ ಪಟ್ಟಣದ ವಿವಿಧೆಡೆ ರಸ್ತೆ ಬದಿಯಲ್ಲಿ ಕಳೆದ ಮೂರ್ನಾಲ್ಕು ದಶಕದಿಂದ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ವಸತಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾ, ತಾಲೂಕಾಡಳಿತ ಸಂಪೂರ್ಣ ವಿಫಲವಾಗಿದೆ. ಮಂಜೂರಾದ ನಿವೇಶನ ಹಂಚಿಕೆ ಮಾಡಿ ಆದೇಶಿಸಬೇಕೆಂದು ಒತ್ತಾಯವಾಗಿದೆ. ಇಲ್ಲಿಯವರೆಗೆ ಬೇಡಿಕೆಗೆ ಈಡೇರದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಅಲೆಮಾರಿ ಜನಾಂಗದ ಮಕ್ಕಳು, ಮಹಿಳೆಯರು, ವೃದ್ಧರು ಧರಣಿ ಮುಂದುವರೆಸಿದ್ದಾರೆ.
ಅಹೋರಾತ್ರಿ ಧರಣಿ ಆರಂಭವಾದ ದಿನ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಹಾಗೂ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಭೇಟಿ ನೀಡಿ ಭೂಮಿ ಒದಗಿಸುವ ಭರವಸೆ ನೀಡಿದರು. ಮೂರನೇ ದಿನ ಬೀದರ್ ಎಸಿ ಮುಹಮ್ಮದ್ ಶಕೀಲ್ ಅವರು ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟರು.
ʼಈ ಹಿಂದೆ ಅನೇಕ ಬಾರಿ ಅಧಿಕಾರಿಗಳು ಬರೀ ಭರವಸೆ ನೀಡಿದರೂ, ತುಂಡು ಜಮೀನು ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಈಗ ನಮಗೆ ಭರವಸೆ ಮೇಲೆ ನಂಬಿಕೆ ಇಲ್ಲ. ಲಿಖಿತ ಆದೇಶ ಪ್ರತಿ ಕೈಗೆ ಕೊಡಿʼ ಎಂದು ಪಟ್ಟು ಹಿಡಿದಿರುವ ಧರಣಿನಿರತರು ಅಲೆಮಾರಿ ಜನಾಂಗಕ್ಕೆ ಮಂಜೂರಾದ ಸರ್ವೇ ನಂ-183ರಲ್ಲಿ 2 ಎಕರೆ ಜಾಗ ಹಂಚಿಕೆ ಮಾಡಲಿಲ್ಲ. ಬದಲಿಗೆ ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ಆ ಜಾಗ ರದ್ದುಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಮಂಜೂರಾದ ಜಾಗ ರದ್ದತಿಗೆ ಕಳುಹಿಸಿದ ಪ್ರಸ್ತಾವನೆ ವಾಪಸ್ ಪಡೆದು ಪುನಃ ಹಂಚಿಕೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಕನಿಷ್ಠ ಮೂಲಸೌಕರ್ಯವಿಲ್ಲದೆ ಪುಟ್ಟ ಮಕ್ಕಳು, ವೃದ್ಧರು, ಗರ್ಭಿಣಿಯರು ರಸ್ತೆಬದಿಯ ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. ತಾಲೂಕಾಡಳಿತ ಇಲ್ಲಿಯವರೆಗೆ ಮಾನವೀಯತೆ ದೃಷ್ಟಿಯಿಂದ ಅಲೆಮಾರಿ ಜನರ ಸಂಕಟ ಕೇಳುವ ಪ್ರಯತ್ನ ಮಾಡಲಿಲ್ಲ. ಮಂಜೂರಾದ ನಿವೇಶನ ಹಂಚಿಕೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸುವರೆಗೆ ಅಹೋರಾತ್ರಿ ಧರಣಿ ಕೈಬಿಡುವುದಿಲ್ಲʼ ಎಂದು ಖಡಕ್ ಆಗಿ ಎಚ್ಚರಿಸುತ್ತಿದ್ದಾರೆ.
ವಿವಿಧ ಸಂಘಟನೆಗಳ ಬೆಂಬಲ :
ಕಳೆದ ಐದು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಮುಖಂಡರು, ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಬೆಂಬಲಿಸಿ ಮಾತನಾಡಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ್, ಅರವಿಂದಕುಮಾರ ಅರಳಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯ ಘಟಕದ ಮಲ್ಲಿಗೆ ಸಿರಿಮನೆ, ಕಾಂಗ್ರೆಸ್ ಮುಖಂಡ ಶಂಕರ ದೊಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ʼಅಲೆಮಾರಿಗಳು ತಮ್ಮ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಜಿಲ್ಲಾಡಳಿತ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನಿವೇಶನ ಮಂಜೂರಾತಿಗೆ ಆದೇಶಿಸಬೇಕುʼ ಎಂದು ಒತ್ತಾಯಿಸಿದರು.
ಬಹುಜನ ಸಮಾಜ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಎದ್ದೇಳು ಕರ್ನಾಟಕ, ಇಂಡಿಯನ್ ನ್ಯಾಶನಲ್ ಭೀಮ್ ಆರ್ಮಿ, ಆರ್ಪಿಐ (ಅಂಬೇಡ್ಕರ್), ನಮ್ಮ ಕರ್ನಾಟಕ ಸೇನೆ, ಮಾದಿಗ ದಂಡೋರಾ ಹೋರಾಟ ಸಮಿತಿ, ಟಿಪ್ಪು ಕ್ರಾಂತಿ ಸೇನಾ, ಭೀಮ್ ಆರ್ಮಿ ಏಕತಾ ಮಿಷನ್, ಜೆಡಿಎಸ್, ದಲಿತ ವಿದ್ಯಾರ್ಥಿ ಪರಿಷತ್, ಜನರ ಧ್ವನಿ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳ ಬೆಂಬಲಿಸಿವೆ.
ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪ್ರತಿಭಟನೆ
ತಹಸೀಲ್ ಕಚೇರಿ ಆವರಣದಲ್ಲಿರುವ ಸಭಾ ಮಂಟಪದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದೆ. ಪ್ರತಿಭಟನೆ ನೇತ್ರತ್ವ ವಹಿಸಿದ ಪ್ರಮುಖರು ಸೇರಿ ಅಲೆಮಾರಿ ಸಮುದಾಯದ ಮಹಿಳೆಯರು, ಮಕ್ಕಳು, ವೃದ್ಧರು ರಾತ್ರಿ ಧರಣಿ ಸ್ಥಳದಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಚಳಿ ಅಧಿಕ ಇರುವುದರಿಂದ ಕೆಲವರಿಗೆ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಪ್ರತಿಭಟನಾಕಾರರಿಗೆ ವೈದ್ಯಕೀಯ ತಪಾಸಣೆ ನಡೆಸಲು ವೈದ್ಯ ಸಿಬ್ಬಂದಿ ತಂಡ ಧರಣಿ ಸ್ಥಳದಲ್ಲಿ ಠಿಕಾಣಿ ಇದ್ದು ನಿಗಾವಹಿಸುತ್ತಿದೆ.
ಅಹೋರಾತ್ರಿ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಜೊತೆಗೆ ಮಕ್ಕಳು ಇರುವುದರಿಂದ ಎರಡು ದಿನದಿಂದ ತಾಲೂಕು ಆಡಳಿತದಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಒಕ್ಕೂಟದಿಂದ ಪ್ರತಿಭಟನಾ ಸ್ಥಳದಲ್ಲಿ ಊಟ, ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ಸೂರಿಗಾಗಿ ಈ ಅಲೆಮಾರಿ ಜನಾಂಗ ಇನ್ನೆಷ್ಟು ವರ್ಷ ಹೋರಾಟ ನಡೆಸಬೇಕು?
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ರಾಹುಲ್ ಖಂದಾರೆ, ನಾಗನಾಥ ವಾಕೋಡೆ, ಸುಭಾಷ ಲಾಧಾ, ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಸುಂದರ ಮೇತ್ರೆ ಹಾಗೂ ಅಲೆಮಾರಿ ಸಮುದಾಯದವರು ಮಹಿಳೆಯರು, ಮಕ್ಕಳು ಧರಣಿಯಲ್ಲಿದ್ದಾರೆ.





