ಬೀದರ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದ್ದು, ಕೂಡಲೇ ಅದನ್ನು ತಡೆಯಬೇಕೆಂದು ದಲಿತ ಯೂನಿಟ್ ಮೂವ್ಮೆಂಟ್ ಸಂಘಟನೆ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ಹೆಸರಿಗೆ ಬರೆದ ಮನವಿಯನ್ನು ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ʼಜಿಲ್ಲೆಯ ಅನೇಕ ಗ್ರಾಮಗಳಲ್ಲಿ ದ್ಯಾವಮ್ಮ, ದುರ್ಗಮ್ಮ, ಲಕ್ಷ್ಮಿ ಹಾಗೂ ಮರಿಗಮ್ಮ ದೇವರ ಜಾತ್ರೆಯ ಹೆಸರಿನಲ್ಲಿ ದಲಿತ ಸಮುದಾಯದ ವ್ಯಕ್ತಿಗಳ ಮೇಲೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ದಲಿತ ಸಮುದಾಯದ ವ್ಯಕ್ತಿಗಳನ್ನು ಪೋತರಾಜ ಚಾಣಿಯನನ್ನಾಗಿಸಿ, ವಿಚಿತ್ರ ವೇಷಧಾರಣೆ ಮಾಡಿಸಿ, ಮದ್ಯಪಾನಕ್ಕೆ ಒತ್ತಾಯಿಸಿ ಸಾರ್ವಜನಿಕರ ಮಧ್ಯೆ ಕುಣಿಸುವುದು ಅನಿಷ್ಟ ಪದ್ಧತಿಯಾಗಿದೆʼ ಎಂದು ದೂರಿದರು.
ʼಭಾರತೀಯ ಸಂವಿಧಾನದ 17ನೇ ವಿಧಿಯಂತೆ ಅಸ್ಪೃಶ್ಯತೆ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿದ್ದು, ಆದರೆ ಜಾತಿವಾದಿಗಳು ಅದನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದಾರೆ. ಇಂತಹ ಅನಿಷ್ಟ ಆಚರಣೆ ಮಾಡಿದರೆ ಎಸ್.ಸಿ. ಹಾಗೂ ಎಸ್.ಟಿ. ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ಸ್ಥಳೀಯ ಪೊಲೀಸರು ಅಸ್ಪ್ರಶ್ಯತೆ ಆಚರಣೆ ತಡೆಯುತ್ತಿಲ್ಲʼ ಎಂದು ಆರೋಪಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಅಸ್ಪೃಶ್ಯತೆ ಆಚರಣೆಗಳನ್ನು ಸಂಪೂರ್ಣವಾಗಿ ತಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಯೂನಿಟ್ ಮೂವ್ಮೆಂಟ್ ರಾಜ್ಯ ಸಂಘಟನಾ ಸಂಚಾಲಕ ಗೌತಮ ಡಾಕುಳಗಿ ಹಾಗೂ ಸಂಘಟನೆಯ ಪ್ರಮುಖರಾದ ಗೌತಮ್ ದೊಡ್ಡಿ, ಉತ್ತಮ ಕೆಂಪೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಶೌಚಾಲಯ ಕಾಣದ ರಾಜ್ಯದ 170 ಸರ್ಕಾರಿ ಶಾಲೆಗಳು





