ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕಾಗಿದ್ದ ಮನರೇಗಾ ಕಾನೂನನ್ನು ರದ್ದುಗೊಳಿಸಿ ಉದ್ಯೋಗವನ್ನು ಕೇಂದ್ರ ಸರಕಾರದ ಮರ್ಜಿಗೆ ಒಳಪಡಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹೊಸ ಕಾನೂನು ವಿಬಿ-ಜಿರಾಮ್ಜಿ ಸಂಪೂರ್ಣ ಕಾರ್ಮಿಕ ವಿರೋಧಿಯಾಗಿದ್ದು, ಕೂಡಲೇ ಹಿಂಪಡೆಯಬೇಕೆಂದು ಮನರೇಗಾ ಉಳಿಸಿ ಆಂದೋಲನದ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.
ʼಕನಿಷ್ಟ ವೇತನದ ಹಕ್ಕನ್ನು ಬದಿಗೆ ಸರಿಸಿ ಕೇಂದ್ರ ಸರಕಾರವೇ ನಿರ್ಧರಿಸುವ ವೇತನ, ಕೆಲಸ, ಕಾಮಗಾರಿಗಳ ಮೂಲಕ ವಲಸೆಯನ್ನು ಹೆಚ್ಚಿಸಿ, ಕಾರ್ಮಿಕರನ್ನು ಗುತ್ತಿಗೆದಾರರಿಗೆ ಅಗ್ಗದ ಕೂಲಿಗೆ ಪೂರೈಸುವ ಈ ವಿಬಿ-ಜಿಗ್ರಾಮ್ಜಿ ಕಾನೂನನ್ನು ನಾವು ತಿರಸ್ಕರಿಸುತ್ತೇವೆʼ ಎಂದರು.
ʼಕೇಂದ್ರ ಸರ್ಕಾರ ಈಗಾಗಲೇ ಆದೇಶಿಸಿದ ಜನವರಿ 26ರ ಗ್ರಾಮ ಸಭೆಯಲ್ಲಿ ನಾವು ಹೊಸ ಕಾನೂನನ್ನು ವಿರೋಧಿಸಿ ಸರ್ವಾನುಮತದಿಂದ ಠರಾವು ಪಾಸು ಮಾಡಿಸಿದ್ದೇವೆ. ಬೇಡಿಕೆ ಆಧಾರಿತ, ಸಾರ್ವತ್ರಿಕ, ಉದ್ಯೋಗದ ಹಕ್ಕಿನ ಮನರೇಗಾ ಕಾನೂನನ್ನು ಮರುಸ್ಥಾಪಿಸಬೇಕು. ವಿಬಿ-ಜಿಗ್ರಾಮ್ ಜಿ ಕಾನೂನನ್ನು ಹಿಂಪಡೆಯಬೇಕೆಂದು ಗಾಂಧಿ ಹುತಾತ್ಮರಾದ ದಿನದಂದು ಗಾಂಧಿ ಆಶಯವನ್ನು ಎತ್ತಿ ಹಿಡಿಯಲೇಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೊಯಿದ್ ಖಾನ್ ಖುಲಾಸೆ; ಮೋದಿಯುಗದ ನಿರಾಧಾರ ಮುಸ್ಲಿಂ ದ್ವೇಷಕ್ಕೆ ಮತ್ತೊಂದು ಪುರಾವೆ
ಪ್ರತಿಭಟನೆಯಲ್ಲಿ ಮನರೇಗಾ ಉಳಿಸಿ ಆಂದೋಲದ ಪ್ರಮುಖರಾದ ಸಪ್ನಾದೀಪ, ಗೀತಾ ಡಿಗಾರೆ, ರಾಜಕುಮಾರ ಡಿಗಾರೆ, ಸುಶೀಲಾಬಾಯಿ ಸೇರಿದಂತೆ ಅನೇಕರಿದ್ದರು.





