ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಮತಗಟ್ಟೆ ಅಧಿಕಾರಿಗಳಾಗಿ (ಬಿಎಲ್ಓ) ನೇಮಿಸಿರುವ ಕ್ರಮವನ್ನು ತಕ್ಷಣ ಹಿಂಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿಯು ಸಹಾಯಕ ಆಯುಕ್ತ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ʼಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಕೇಂದ್ರ ಚುನಾವಣಾ ಆಯೋಗವು ಪಾರ್ಲಿಮೆಂಟ್ ಅನುಮೋದನೆ ಪಡೆಯದೇ ನಡೆಸುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಬಿಹಾರ ರಾಜ್ಯದಿಂದ ಆರಂಭಗೊಂಡ ಈ ಪ್ರಕ್ರಿಯೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತಿದೆʼ ಎಂದು ಸಿಪಿಐ ದೂರಿದೆ.
ʼ2002ರಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಧಾರ್, ಮತದಾರ ಚೀಟಿ ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಹೆಸರುಗಳನ್ನು ಸೇರಿಸಲಾಗಿದ್ದು, ಮೃತರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಆದರೆ 2025–26ನೇ ಸಾಲಿನ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹೆಚ್ಚು ಕಠಿಣ ಷರತ್ತುಗಳೊಂದಿಗೆ ನಡೆಯುತ್ತಿದೆʼ ಎಂದು ಪಕ್ಷದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ʼಪ್ರಸ್ತುತ ಕರ್ನಾಟಕದಲ್ಲಿಯೂ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದ್ದು, ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಈ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೆ, ಈ ಕಾರ್ಯಕ್ಕೆ ಕನಿಷ್ಠ ಪದವಿ ಹೊಂದಿರುವ ಸರ್ಕಾರಿ ಖಾಯಂ ನೌಕರರನ್ನು ನೇಮಕ ಮಾಡಬೇಕಾಗಿದ್ದರೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಫಾರಸ್ಸಿನಂತೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಿ.ಎಲ್.ಓ.ಗಳಾಗಿ ನೇಮಕ ಮಾಡಲಾಗಿದೆʼ ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಆಧಾರಿತ ಸಿಬ್ಬಂದಿಯಾಗಿದ್ದು, ಅವರು ಸರ್ಕಾರಿ ಖಾಯಂ ನೌಕರರಲ್ಲ. ಮತದಾರರ ಪರಿಶೀಲನೆಗೆ ಅಗತ್ಯವಿರುವ ನಮೂನೆಗಳು ಇನ್ನೂ ಅವರಿಗೆ ಲಭ್ಯವಾಗಿಲ್ಲದಿರುವುದು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ತಪ್ಪು ಮಾರ್ಗದರ್ಶನ ನೀಡಲಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಬಿ.ಎಲ್.ಓ.ಗಳಾಗಿ ನೇಮಕ ಮಾಡಿರುವ ಕ್ರಮವನ್ನು ಹಿಂಪಡೆಯಬೇಕು. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿನ ತಾರ್ಕಿಕ ವ್ಯತ್ಯಾಸದ ಷರತ್ತುಗಳನ್ನು ತೆಗೆದುಹಾಕಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ವಸತಿ ಗೃಹದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆ
ಈ ಸಂದರ್ಭದಲ್ಲಿ ಮುಖಂಡರಾದ ಬಾಬುರಾವ ಹೊನ್ನಾ, ಪಕ್ಷದ ಸಹ ಕಾರ್ಯದರ್ಶಿ ಎಂ.ಡಿ. ಶಫಾಯತ್ ಅಲಿ, ಜಿಲ್ಲಾ ಕಾರ್ಯದರ್ಶಿ ನಜೀರ ಅಹ್ಮದ್ ಮತ್ತಿತರರಿದ್ದರು.




