ತೆಲಂಗಾಣದಿಂದ ಮಹಾರಾಷ್ಟ್ರದ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹19.77 ಲಕ್ಷ ಮೌಲ್ಯದ ಗಾಂಜಾವನ್ನು ಔರಾದ್ ತಾಲೂಕಿನ ಸಂತಪೂರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಔರಾದ್ ತಾಲೂಕಿನ ಗಡಿ ಗ್ರಾಮ ಜಂಬಗಿಯಿಂದ ಸೋರಳ್ಳಿ ಮಾರ್ಗವಾಗಿ ಮಹಾರಾಷ್ಟ್ರ ಮುಂಬೈ ಕಡೆಗೆ ಮಾರಾಟ ಮಾಡುವ ಉದ್ದೇಶದಿಂದ ಬೈಕ್ ಮೇಲೆ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸಂತಪೂರ ಠಾಣೆಯ ಪೊಲೀಸರು ಮಾ.9ರಂದು ದಾಳಿ ನಡೆಸಿದ್ದಾರೆ. ಬಂಧಿತರಿಂದ ₹19.47 ಲಕ್ಷ ಮೌಲ್ಯದ 30.950 ಕೆ.ಜಿ. ಗಾಂಜಾ ಹಾಗೂ ₹30 ಸಾವಿರ ಮೌಲ್ಯದ ಒಂದು ಬೈಕ್ ಜಪ್ತಿ ಮಾಡಿದ್ದಾರೆ.
ತೆಲಂಗಾಣದ ನಾರಾಯಣಖೇಡ್ ತಾಲೂಕು ಮೂಲದವಾರದ ಪವನ ನಾರಾಯಣ ಚವ್ಹಾಣ ಹಾಗೂ ಕಿಶನ್ ಲಕ್ಷ್ಮಣ ರಾಠೋಡ್ ಬಂಧಿತರು. ಇವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ʼನಾವಿಬ್ಬರು ಓಡಿಶಾ ರಾಜ್ಯದ ಮಲಕನಗಿರಿ ನಗರದಿಂದ ₹4 ಲಕ್ಷ ಹಣದಿಂದ 40 ಕೆ.ಜಿ ಗಾಂಜಾ ಖರೀದಿಸಿದ್ದೇವೆ. ಅಲ್ಲಿಂದ ರೈಲ್ವೆ ಮೂಲಕ ಹೈದರಾಬಾದ್ ಮಾರ್ಗವಾಗಿ ತಾಂಡಾಕ್ಕೆ ತೆರಳಿದೆವು. ಅಲ್ಲಿಂದ ಈಗ ಬೈಕ್ ಮೇಲೆ ಬೀದರ್ ಮಾರ್ಗವಾಗಿ ರೈಲ್ವೆ ಮೂಲಕ ಮಹಾರಾಷ್ಟ್ರ ಕಡೆಗೆ ಕೊಂಡೊಯ್ಯುತ್ತಿದ್ದೇವೆʼ ಎಂದು ಬಾಯ್ಬಿಟ್ಟರು.
ʼನಮಗೆ ಶ್ರಮದಾಯಕ ಕೆಲಸ ಮಾಡಲು ಅಸಾಧ್ಯವಾದ ಹಿನ್ನೆಲೆ ದಿಢೀರ ಶ್ರೀಮಂತ ಆಗಬೇಕೆಂಬ ಉದ್ದೇಶದಿಂದ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಗಾಂಜಾ ಮಾರಾಟ ಮಾಡುತ್ತಿದ್ದೇವೆʼ ಎಂದು ಪೊಲೀಸರಿಗೆ ಉತ್ತರಿಸಿದರು.
ಸಂತಪೂರ ಠಾಣೆಯ ಪಿಎಸ್ಐ ದಿನೇಶ ಎಂ.ಟಿ. ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಶೇಷರಾವ್ ಹಾಗೂ ಸಿಬ್ಬಂದಿಗಳಾದ ದತ್ತಾತ್ರಿ, ರಾಮರೆಡ್ಡಿ, ಅರುಣಸಿಂಗ್, ಕೋಟ್ರೆಶ್, ಪ್ರಕಾಶ, ರಾಜಶೇಖರ, ಗೌತಮ, ಸುಭಾಷ ಸೇರಿದಂತೆ ಮತ್ತಿತರರಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ತಂಡವನ್ನು ಎಸ್ಪಿ ಪ್ರದೀಪ ಗುಂಟಿ ಅವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಭಾಲ್ಕಿ | ಪರೀಕ್ಷೆ ಭಯ ಬೇಡ, ಹಬ್ಬದಂತೆ ಸಂಭ್ರಮಿಸಿ : ಬಿಇಒ ಸಿ.ಜಿ.ಹಳ್ಳದ
ಈ ಸಂಬಂಧ ಸಂತಪೂರ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಬಂಧಿಸಿ ನ್ಕಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼ





