ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಹೇಳಿದರು.
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼನಮ್ಮ ಹಿರಿಯರು ಮನೆಯಲ್ಲಿ ದೇವರಮನೆ ಕಟ್ಟಿದಂತೆ ನಾವು ಗ್ರಂಥಾಲಯ ಸ್ಥಾಪಿಸುವ ಪರಂಪರೆ ಬೆಳೆಸಬೇಕಿದೆ. ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಆಸಕ್ತಿಯನ್ನು ಮೂಡಿಸುವುದು ಮತ್ತು ಮನೆಗಳನ್ನು ಜ್ಞಾನ ಮಂದಿರಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಲನಚಿತ್ರ ನಟರು, ಜನಪ್ರತಿನಿಧಿಗಳು, ರಾಜಕಾರಣಿಗಳ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಯೋಜನೆ ಇದೆ. ಇದಕ್ಕೆ ಓದುವ ಸಂಸ್ಕೃತಿ ಹೆಚ್ಚಿಸುವ ಕಾರ್ಯ ಹೆಚ್ಚಿಸಬೇಕಿದೆʼ ಎಂದರು.

ʼನಮ್ಮ ಮನೆಯಲ್ಲೊಂದು ಗ್ರಂಥಾಲಯವಿದೆ. ಅದರಲ್ಲಿ ಇಂತಿಂಥ ಪುಸ್ತಕಗಳಿವೆ ಎಂದು ಹೇಳಿಕೊಳ್ಳುವುದು, ಸೆಲ್ಫಿ ತೆಗೆದುಕೊಂಡು ಗ್ರೂಪ್ಗೆ ಹಾಕಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ನಮ್ಮ ನಿತ್ಯದ ಹವ್ಯಾಸ, ಅಭ್ಯಾಸವಾಗಬೇಕು. ಆಗ ನಾವಿರುವ ಬಡಾವಣೆಗಳಲ್ಲಿ ನಮ್ಮ ಮನೆಯ ಘನತೆ, ಪ್ರತಿಷ್ಠೆ ನಿಜಕ್ಕೂ ಹೆಚ್ಚುತ್ತದೆ. ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಜನ ನಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಆಗ ನಮ್ಮ ಮಕ್ಕಳಿಗೆ ನಾವು ನೀತಿಪಾಠ ಹೇಳಬೇಕಾಗಿಲ್ಲ. ನಮ್ಮ ಬದುಕಿನ ರೀತಿಯೇ ಅವರನ್ನು ಬೆಳೆಸುತ್ತದೆʼ ಎಂದು ನುಡಿದರು.
ʼಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ ಯೋಜನೆಗೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿ ರಚಿಸಿ ಓದುವ ಸಂಸ್ಕೃತಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ. ಬೀದರ್ ಜಿಲ್ಲೆಯಲ್ಲಿ ಹತ್ತು ಜನರನ್ನು ಒಳಗೊಂಡಿರುವ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ರಚನೆಯಾಗಿದ್ದು, ಜಿಲ್ಲಾದ್ಯಂತ ಮನೆ-ಮನೆಯಲ್ಲಿ ಗ್ರಂಥಾಲಯ ಬೀಜ ಬಿತ್ತಿ ಓದುವ ಹವ್ಯಾಸ ಹೆಚ್ಚಿಸಬೇಕುʼ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼನಮ್ಮ ಜಿಲ್ಲೆಯಲ್ಲಿ ಮನೆ-ಮನೆಗೆ ಗ್ರಂಥಾಲಯ ಸ್ಥಾಪಿಸುವ ಮೂಲಕ ಹೊಸ ಕ್ರಾಂತಿ ಮಾಡಬೇಕಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯದ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೈಜೋಡಿಸಿ ಓದುವ ಸಂಸ್ಕೃತಿ ಬೆಳೆಸಲು ಪ್ರಯತ್ನಿಸುತ್ತದೆʼ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿದರು.

ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕರಾಗಿ ಬಾಲಾಜಿ ಕುಂಬಾರ ಹಾಗೂ ಸದಸ್ಯರಾಗಿ ಪೀರಪ್ಪಾ ಸಜ್ಜನ್, ಕುಪೇಂದ್ರ ಹೊಸಮನಿ, ಜೈದೇವಿ ಯದಲಾಪುರೆ, ವೀರಶೆಟ್ಟಿ ಎಂ.ಪಾಟೀಲ್, ಚೇತನಾ ಚನ್ನಶೆಟ್ಟಿ, ಅಬ್ದುಲ್ ರಹೀಮ್, ಲಕ್ಷ್ಮಣ ಮೇತ್ರೆ, ಪಾರ್ವತಿ ಸೋನಾರೆ, ಶರತಕುಮಾರ್ ಅವರನ್ನು ನೇಮಿಸಿ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಎಲ್ಲರಿಗೂ ಅರ್ಹತಾ ಪತ್ರ ವಿತರಿಸಿದರು.
ಇದನ್ನೂ ಓದಿ : ರಾಜ್ಯ ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕನ್ನಡ ಪುಸ್ತಕ ಪ್ರಾಧಿಕಾರದ ಶ್ರೀನಿವಾಸ ಸೇರಿದಂತೆ ಜಿಲ್ಲೆಯ ಸಾಹಿತ್ಯಾಸಕ್ತರು, ಬರಹಗಾರರು ಪಾಲ್ಗೊಂಡಿದ್ದರು.





