ಬಂಗಾರದ ಬೆಳೆ ಎಂದೇ ಕರೆಯಲ್ಪಡುವ ಗೋಡಂಬಿ ಬೆಳೆಯನ್ನು ರೈತರು ಕಪ್ಪು ಮಣ್ಣಿನಲ್ಲಿ ಬೆಳೆಯದೆ, ಕೆಂಪು ಮಣ್ಣಿನಲ್ಲಿ ಮತ್ತು ಬಂಜರು ಭೂಮಿಯಲ್ಲಿ ಮಾತ್ರ ಬೆಳೆಯಬೇಕು. ಇದನ್ನು ಬೆಳೆಯಲು ತೋಟಗಾರಿಕೆ ಇಲಾಖೆಯ ಸಹಾಯ ಸಹಕಾರ ಮತ್ತು ತೋಟಗಾರಿಕೆ ವಿಜ್ಞಾನಿಗಳ ತಾಂತ್ರಿಕ ಸಲಹೆ ಪಡೆದು ಹೆಚ್ಚಿನ ಲಾಭ ಪಡೆಯಬೇಕೆಂದು ಬೀದರ ತೋಟಗಾರಿಕಾ ಕಾಲೇಜಿನ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ತೋಟಗಾರಿಕೆ ಕಾಲೇಜು ಮತ್ತು ಕೊಚ್ಚಿಯ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ಬೀದರ ತಾಲೂಕಿನ ಕಮಠಾಣಾ ಗ್ರಾಮದ ನಾಗನಾಥರಾವ ನಿಡೋದೆ ಅವರ ಗೋಡಂಬಿ ಹೊಲದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಗೋಡಂಬಿ ಬೆಳೆಯ ಮೇಲೆ ರೈತರಿಗಾಗಿ ಆಯೋಜಿಸಿದ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಎಸ್.ವಿ.ಪಾಟೀಲ್ ಅವರು ಮಾತನಾಡಿ, ʼರೈತರು ಶ್ರಮ ಜೀವಿಗಳಾಗಿ ನೈಸರ್ಗಿಕ ಬದುಕನ್ನು ಕಟ್ಟಿಕೊಳ್ಳಬೇಕು. ಗಂಡು ಹೆಣ್ಣು ಎಂಬ ಭೇದ ಭಾವ ಮಾಡದೆ ಎಲ್ಲರೂ ಮೈಮುರಿದು ದುಡಿದು ಸ್ವಾವಲಂಬಿಗಳಾಗಬೇಕುʼ ಎಂದರು.
ರೈತ ನಾಗನಾಥರಾವ ನಿಡೋದೆ ಮಾತನಾಡಿ, ʼನಾಲ್ಕು 14 ವರ್ಷಗಳಿಂದ ಗೋಡಂಬಿ ಬೆಳೆಯುತ್ತೇನೆ. ಉತ್ತಮ ಆದಾಯ ಪಡೆಯುತ್ತಿದ್ದೇನೆ. ಮೂರ್ನಾಲ್ಕು ವರ್ಷ ರೈತರು ಗೋಡಂಬಿ ಬೆಳೆಯಲು ಶ್ರಮಿಸಿದರೆ ನಂತರ ಪ್ರತಿ ವರ್ಷ ನಿರಂತರ ಆದಾಯ ಪಡೆಯಬಹುದು. ಗೋಡಂಬಿ ಬೆಳೆಯನ್ನು ಬೆಳೆಯಲು ರೈತರಿಗೆ ಆರ್ಥಿಕ ಸಹಾಯಧನದ ಯೋಜನೆಯ ಅಗತ್ಯವಿದೆʼ ಎಂದು ಹೇಳಿದರು.
ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ವಿ.ಪಿ.ಸಿಂಗ್ ಅವರು ʼಗೋಡಂಬಿ ಉತ್ಪಾದನೆಯಲ್ಲಿ ತಾಂತ್ರಿಕತೆʼ, ಡಾ.ಅಬ್ದುಲ್ ಕರೀಂ ಎಂ. ಅವರು ʼಗೋಡಂಬಿ ಬೆಳೆಯ ರೋಗ ನಿರ್ವಹಣೆʼ, ಡಾ. ರಾಜಕುಮಾರ ಎಂ. ʼಗೋಡಂಬಿ ಬೆಳೆಯ ಕೀಟ ನಿರ್ವಹಣೆʼ ಹಾಗೂ ಡಾ. ಹರೀಶ ಟಿ. ಅವರು ʼಗೋಡಂಬಿ ಸುಗ್ಗಿಯ ನಂತರದ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳುʼ ವಿಷಯದ ಕುರಿತು ರೈತರಿಗೆ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ : ರಾಜ್ಯದ 1 ಲಕ್ಷಕ್ಕೂ ಅಧಿಕ ಮೃತ ಫಲಾನುಭವಿಗಳ ಖಾತೆಗೆ ʼಗೃಹಲಕ್ಷ್ಮಿʼ ಹಣ ಜಮೆ
ಕಾರ್ಯಕ್ರಮದಲ್ಲಿ ತೋಟಗಾರಿಕೆ ಕಾಲೇಜಿನ ಡಾ.ಮಹ್ಮದ್ ಫಾರೂಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುಶಾಲರಾವ, ತೋಟಗಾರಿಕೆ ಕಾಲೇಜಿನ ವಿಜಯ ಮಹಾಂತೇಶ ಹಾಗೂ ರೈತರು ಪಾಲ್ಗೊಂಡಿದ್ದರು.





