ಮೆಣಸಿನಕಾಯಿ ಬೆಳೆಯ ಹೊಸ ತಳಿಗಳನ್ನು ಕ್ಷೇತ್ರಕ್ಕೆ ಪರಿಚಯಿಸುವ ಮೂಲಕ ರೈತರು ಹೆಚ್ಚಿನ ಲಾಭ ಪಡೆಯಬಹುದೆಂದು ತೋಟಗಾರಿಕೆ ಮಹಾವಿದ್ಯಾಲಯ ಬೀದರ ಡೀನ್ ಡಾ.ಎಸ್.ವಿ.ಪಾಟೀಲ್ ಸಲಹೆ ನೀಡಿದರು.
ಸೋಮವಾರ ಬಸಂತಪೂರ ಗ್ರಾಮದ ರೈತ ಈರಪ್ಪ ಕಾಳೆ ಅವರ ಜಮೀನಿನಲ್ಲಿ ನಡೆದ ಮೆಣಸಿನಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ʼಮೆಣಸಿನಕಾಯಿ ಒಂದು ಪ್ರಮುಖ ತೋಟಗಾರಿಕಾ ಹಾಗೂ ವಾಣಿಜ್ಯ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಸಿ ಮತ್ತು ಒಣ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ರೈತರು ಹವಾಮಾನಕ್ಕೆ ತಕ್ಕ ಶಿಫಾರಿತ ತಳಿಗಳನ್ನು ಬೆಳೆಸಿ ವಿದೇಶಗಳಿಗೆ ರಫ್ತು ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದುʼ ಎಂದು ಹೇಳಿದರು.
ಭಾಲ್ಕಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ʼಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದಲ್ಲಿ ಸೂಕ್ತ ತಳಿಗಳನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಇಳುವರಿ ಪಡೆಯಬಹುದುʼ ಎಂದು ಸಲಹೆ ನೀಡಿದರು.
ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದಕುಮಾರ ರಾಠೋಡ ಅವರು ಮೆಣಸಿನಕಾಯಿ ಬೀಜೋತ್ಪಾದನೆ ಕುರಿತು ವಿವರಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಅಭಿವೃದ್ಧಿಪಡಿಸಿದ ‘ಕೃಷ್ಣ ಪ್ರಭಾ ರುದ್ರ’ ತಳಿಯ ಪ್ರಾತ್ಯಕ್ಷಿಕೆ ನಡೆಸಿ, ಆಸಕ್ತ ರೈತರಿಗೆ ಬೀಜ ಹಾಗೂ ಸಸಿಗಳನ್ನು ವಿತರಿಸಲಾಯಿತು.

ಬಸಂತಪೂರ ಗ್ರಾಮದ ಪ್ರಗತಿಪರ ರೈತರಾದ ಬಸವರಾಜ ಕಾಳೆ, ಗುರುಲಿಗಪ್ಪ ಪಾಟೀಲ್, ವೆಂಕಟರಾವ ಬಿರಾದಾರ, ನರಸಾ ರೆಡ್ಡಿ, ಸುಭಾಸ್ ಪಾಟೀಲ್ ಅವರು ಮಾತನಾಡಿ, ʼತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ತೋಟಗಾರಿಕೆ ಬೆಳೆಗಳ ಕ್ಷೇತ್ರೋತ್ಸವಗಳನ್ನು ಆಯೋಜಿಸಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಈಶ್ವರ ಖಂಡ್ರೆ ರಾಜ್ಯದ ಮುಖ್ಯಮಂತ್ರಿಯಾಗಲಿ : ಬಸವಲಿಂಗ ಪಟ್ಟದ್ದೇವರು
ತೋಟಗಾರಿಕೆ ಅಧಿಕಾರಿ ಮಹೆಬೂಬ, ಡಾ. ರಾಜಕುಮಾರ ಎಂ., ಬಸಂತಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು. ಬೀದರ ವಿಸ್ತರಣಾ ಘಟಕದ ಅಧಿಕಾರಿ ಜಾನವಿ ಡಿ.ಆರ್. ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





