ಔರಾದ್ ಪಟ್ಟಣದ ಬೀದಿ ಬದಿಗಳಲ್ಲಿ ಹಲವು ವರ್ಷಗಳಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ಮಂಜೂರಾದ ಜಾಗ ಕೂಡಲೇ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾವು ಮಾಡುವ ಕಾಯಕದ ವೇಷಗಳೊಂದಿಗೆ ಆಗಮಿಸಿದ ಅಲೆಮಾರಿ ಸಮುದಾಯದ ಮಹಿಳೆಯರು, ಮಕ್ಕಳು ಘೋಷಣೆಗಳು ಕೂಗುತ್ತಾ ತಹಸೀಲ್ದಾರ್ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿದರು.
ನ್ಯಾಯಕ್ಕಾಗಿ ತಹಸೀಲ್ ಕಚೇರಿ ಎದುರಗಡೆ ಸಭಾ ಮಂಟಪದ ಮೇಲೆ ಮುಂದುವರೆದ ಅಹೋರಾತ್ರಿ ಧರಣಿ ಸ್ಥಳಕ್ಕೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಹಾಗೂ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಭೇಟಿ ನೀಡಿದರು.

ʼಔರಾದ್ ಪಟ್ಟಣದಲ್ಲಿ ವಾಸಿಸುವ ಅಲೆಮಾರಿ-ಅರೆ ಅಲೆಮಾರಿ ಜನಾಂಗಕ್ಕೆ ಮಂಜೂರಾದ ಸರ್ವೇ ನಂ-205ರಲ್ಲಿ 72 ಕುಟುಂಬಗಳಿಗೆ ಮನೆ ನೀಡಬೇಕೆಂಬ ಪ್ರಸ್ತಾವನೆ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 15 ಲಕ್ಷ ಮಂಜೂರಾಗುತ್ತದೆ. ಮುಂದಿನ ಐದಾರು ತಿಂಗಳಲ್ಲಿ ವಸತಿ ಕಾರ್ಯಕ್ಕೆ ಚಾಲನೆ ದೊರೆಯಲಿದೆʼ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಭರವಸೆ ನೀಡಿದರು.
ಅದಕ್ಕೆ ಒಕ್ಕೂಟದ ಮುಖಂಡ ರಾಹುಲ್ ಖಂದಾರೆ ಪ್ರತಿಕ್ರಿಯಿಸಿ, ʼಈ ಹಿಂದೆ ಜಿಲ್ಲಾಧಿಕಾರಿ ಹೆಚ್.ಆರ್.ಮಹಾದೇವ ಅವರು 2019ರಲ್ಲಿ ಔರಾದ ಹೊರವಲಯದ ಸರ್ಕಾರಿ ಗಾಯರಾಣ ಜಮೀನು ಸರ್ವೇ ನಂ-183ರಲ್ಲಿ 2 ಎಕರೆ ಜಮೀನನ್ನು ಪಟ್ಟಣದಲ್ಲಿ ವಸತಿ ವಂಚಿತ ಅಲೆಮಾರಿ ಜನಾಂಗದ ನಿವೇಶನಕ್ಕಾಗಿ ಮಂಜೂರಾತಿ ನೀಡಿ, ಅದನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಿದರು. ಆದರೆ ಸರ್ವೇ ನಂ.183ನಲ್ಲಿ ಮಂಜೂರಾದ ನಿವೇಶನ ಹಂಚಿಕೆಯಾಗದೆ ನನೆಗುದಿಗೆ ಬಿದ್ದಿತ್ತುʼ ಎಂದು ವಿವರಿಸಿದರು.
ʼ2022ರ ಡಿಸೆಂಬರ್ 27ರಂದು ನಡೆದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಔರಾದ ಹೊರವಲಯದ ಸರ್ಕಾರಿ ಗಾಯರಾಣ ಸರ್ವೇ ನಂ.205 ರಲ್ಲಿ ಒಟ್ಟು 50 ಎಕರೆ 11 ಗುಂಟೆ ಜಮೀನು ಪೈಕಿ 2 ಎಕರೆ ಜಮೀನನ್ನು ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ರಹಿತ ಕುಟುಂಬಗಳ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಆದೇಶಿಸಿದರು. ಮೂರು ದಶಕಗಳಿಂದ ವಾಸಿಸುತ್ತಿರುವ 150ಕ್ಕೂ ಅಧಿಕ ಕುಟುಂಬಗಳಿಗೆ ಮಂಜೂರಾದ ನಿವೇಶನ ನೀಡದೇ ಇರುವುದು ಕಾರಣಗಳೇನು ಎಂದು ಪ್ರಶ್ನಿಸಿದ ಅವರು, ʼಸ್ವಂತ ಸೂರಿಲ್ಲದೆ ಹಳೆ ಸಿರೆಗಳಿಂದ ಜೋಪಡಿ ನಿರ್ಮಿಸಿಕೊಂಡು ದುಸ್ತರ ಬದುಕು ಸಾಗಿಸುವ ಅಲೆಮಾರಿ ಜನಾಂಗಕ್ಕೆ ಕೂಡಲೇ ನಿವೇಶನ ಹಂಚಿಕೆ ಮಾಡಬೇಕುʼ ಎಂದು ಒತ್ತಾಯಿಸಿದರು.
ಬಳಿಕ ಮಹೇಶ ಪಾಟೀಲ್ ಅವರು ಪ್ರತಿಕ್ರಿಯಿಸಿ, ʼಈ ಹಿಂದೆ ಅಲೆಮಾರಿ ಜನಾಂಗಕ್ಕಾಗಿ ಮಂಜೂರಾದ ಸರ್ವೇ ನಂ-183 ಜಾಗ ರದ್ದು ಪಡಿಸಬೇಕೆಂದು 2023ರಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ. ಆ ಜಾಗ ತಕರಾರಿನ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮೇಲಾಧಿಕಾರಿಗಳು ಉತ್ತರಿಸುತ್ತಾರೆ. ಸರ್ವೇ ನಂಬರ್ 205ರಲ್ಲಿ ಇಂದಿರಾ ಗಾಂಧಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆʼ ಎಂದು ಉತ್ತರಿಸಿ ಅಲ್ಲಿಂದ ತೆರಳಿದರು.

ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತರಾದ ಅಲೆಮಾರಿ ಸಮುದಾಯಕ್ಕೆ ವಸತಿಗಾಗಿ ಮೀಸಲಿಟ್ಟಿರುವ ಸರ್ವೇ ನಂ-183ರ ನಿವೇಶನವು ಪಟ್ಟಣ ಪಂಚಾಯತಿ ವತಿಯಿಂದ ಸರ್ವೇ ನಡೆಸಿ, ಅಲೆಮಾರಿ ಜನಾಂಗದ ವಸತಿ ವಂಚಿತರಿಗೆ ಹಂಚಿಕೆ ಮಾಡಬೇಕೆಂದು ಅಹೋರಾತ್ರಿ ಧರಣಿ ಮುಂದುವರೆಸಿದರು.
ಸಂಜೆ 7 ಗಂಟೆ ಸುಮಾರಿಗೆ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಪುನಃ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟ ಕೈಬಿಡುವಂತೆ ಮನವೋಲಿಸಿದರು. ʼಅಲೆಮಾರಿ ಜನಾಂಗದ ಬದುಕಿಗೆ ಭೂಮಿʼ ಸಿಗುವರೆಗೂ ಅಹೋರಾತ್ರಿ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲʼ ಎಂದು ಉತ್ತರಿಸಿದರು. ಮೊದಲ ದಿನದ ಅಹೋರಾತ್ರಿ ಧರಣಿ ಇನ್ನೂ ಮುಂದುವರೆದಿದೆ ಎಂದು ಒಕ್ಕೂಟದ ಮುಖಂಡ ಸುಭಾಷ ಲಾಧಾ ತಿಳಿಸಿದ್ದಾರೆ.
ʼಅಲೆಮಾರಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಹಲವು ವರ್ಷಗಳಿಂದ ಬೀದಿ ಬದಿಗಳಲ್ಲಿ ಪುಟ್ಟ ಗುಡಿಸಲುಗಳಲ್ಲಿ ವಾಸಿಸುವ ಈ ಕುಟುಂಬಗಳು ʼಕನಿಷ್ಠ ಜಾಗವಾದರೂ ಕೊಡಿʼ ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನವಹಿಸಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆʼ ಎಂದು ಮುಖಂಡರು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ಬೀದರ್ | ʼಈದಿನʼದ 5 ಸಣ್ಣ ಸುದ್ದಿಗಳು ಓದಿರಿ
ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯದ ಮುಖಂಡ ನಾಗನಾಥ ವಾಕೋಡೆ, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೊಲೆ, ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ದಿಲೀಪ ವರ್ಮಾ, ಒಕ್ಕೂಟದ ಪ್ರಮುಖರಾದ ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಫಿರ್ದೋಷ್ ಪಟೇಲ್, ಸುಂದರ ಮೇತ್ರೆ, ಅಖಿಲೇಶ ಸಾಗರ, ಸುಭಾಷ ದಾಂಡೇಕರ್, ಬಸವರಾಜ ಕಾಂಬಳೆ, ಆನಂದ ಕಾಂಬಳೆ, ಉತ್ತಮ ಸುತಾರ್, ಪ್ರವೀಣ್ ಕಾರಂಜೆ, ಸಂಪತ್ ಫೈಟರ್, ಸುಂದರ ಮೇತ್ರೆ, ಪ್ರೇಮ್ ಗೊಡಬೊಲೆ, ರಾಜಶೇಖರ್ ಶೇರಿಕಾರ್ ಸೇರಿದಂತೆ ಅಲೆಮಾರಿ ಸಮುದಾಯದವರು ಭಾಗವಹಿಸಿದ್ದಾರೆ.





