ಅತ್ಯುತ್ತಮ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ಉತ್ತಮ ನಿರ್ಮಾಣಕ್ಕೆ ಬದ್ದತೆಯಿಂದ ಶ್ರಮಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು, ತನ್ನ ಸಾಮಾಜಿಕ ಹೊಣೆಗಾರಿಕೆ ಭಾಗವಾಗಿ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮಗಳು ಸೇರಿದಂತೆ ಮಹತ್ವದ ವಿಷಯಗಳ ಕುರಿತು ಸಮೀಕ್ಷೆಗೆ ಮುಂದಾಗಿದೆ.
ʼಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನುಗಳು ಮತ್ತು ಸ್ವಚ್ಛತಾ ಅಭಿಯಾನ ಕುರಿತು ಸಹ ಸಮೀಕ್ಷೆ ನಡೆಯಲಿದೆ. ಮನೆ-ಮನೆಗೆ ಭೇಟಿ ಮತ್ತು ಆನ್ಲೈನ್ ಮೂಲಕ ನಡೆಯುವ ಈ ಸರ್ವೆಯು ಸಂಪೂರ್ಣವಾಗಿ ಶೈಕ್ಷಣಿಕ ಸ್ವರೂಪದ್ದಾಗಿರಲಿದೆʼ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಇಂದಿನಿಂದ ಆರಂಭವಾಗಲಿರುವ ಸಮೀಕ್ಷೆ ಮುಂದಿನ 15 ದಿನ ಕಾಲ ನಡೆಯಲಿದೆ. ಆನ್ಲೈನ್ ಸರ್ವೆ ಹಾಗೂ ಮನೆ ಮನೆ ಭೇಟಿ ಮೂಲಕ ಸರ್ವೆ ನಡೆಸುವ ಕಾರ್ಯಗಳೆರಡೂ ಏಕಕಾಲದಲ್ಲಿ ನಡೆಯಲಿವೆ. ಶಾಹೀನ್ ಸಂಸ್ಥೆಯ ವೆಬ್ಸೈಟ್ನಲ್ಲಿರುವ ಲಿಂಕ್ ಬಳಸಿಕೊಂಡು ಆನ್ಲೈನ್ ಸರ್ವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೊಬೈಲ್ ಬಳಕೆಯಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ 12 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳು ಚಿಂತೆಗೆ ಕಾರಣವಾಗಿವೆ. ನಾಲ್ಕೈದು ಸೆಕೆಂಡುಗಳ ಅವಧಿಯ ರೀಲ್ ನೋಡುತ್ತಿರುವ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಶಾಲಾ ವರ್ಗದಲ್ಲಿ ಕುಳಿತು ಪಾಠ ಕೇಳುವ ತಾಳ್ಮೆ ಕಡಿಮೆಯಾಗುತ್ತಿದೆ. ಇದು ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಕೆಲ ಮಕ್ಕಳು ಒಂದು ನಿಮಿಷದಷ್ಟೂ ಏಕಾಗ್ರಚಿತ್ತದಿಂದ ಕುಳಿತು ಪಾಠ ಕೇಳುತ್ತಿಲ್ಲ. ಅಷ್ಟರಮಟ್ಟಿಗೆ ಮಕ್ಕಳ ಮನಸ್ಸು ಚಂಚಲಗೊಂಡಿದೆ. ಮಕ್ಕಳಲ್ಲಿ ಅಸಹನೆ, ಕೋಪ ಹೆಚ್ಚುತ್ತಿದೆ. ತ್ವರಿತವಾಗಿ ಪ್ರತಿಕ್ರಿಯಿಸುವ ಮನೋಭಾವ ಬೆಳೆಯುತ್ತಿದೆ. ಅತಿಯಾದ ಮೊಬೈಲ್ ವೀಕ್ಷಣೆಯು ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಈ ಕುರಿತು ಪಾಲಕರಿಗೆ ಮಾಹಿತಿ ನೀಡುವ, ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ವೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ, ವರದಕ್ಷಿಣೆ ಕಾಟದಿಂದ ರಕ್ಷಿಸಲು ಹಲವು ಕಾಯ್ದೆಗಳಿವೆ. ಸರಕಾರದ ಸಂಸ್ಥೆಗಳು ಇವೆ. ಬೀದರನಲ್ಲಿ ಅಕ್ಕಪಡೆ ಈ ದಿಸೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಇವೆಲ್ಲ ಸಂಗತಿಗಳ ಬಗ್ಗೆ ಸರ್ವೆ ಸಮಯದಲ್ಲಿ ಮಾಹಿತಿ
ಕೊಡಲಾಗುತ್ತದೆ. ಸುರಕ್ಷತೆಗಾಗಿ ಇರುವ ವ್ಯವಸ್ಥೆ, ನಿಯಮಗಳು ಮತ್ತು ಯಾರನ್ನು ಸಂಪರ್ಕಿಸಬಹುದು ಎಂಬ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛತೆ ಕುರಿತು ಜನಸಾಮಾನ್ಯರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯ ಇದೆ. ಕಸ ಸಂಗ್ರಹಕ್ಕೆ ಈಗ ಇರುವ ವ್ಯವಸ್ಥೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ. ಹಸಿ ಕಸ, ಒಣಗಿದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು, ಕಸ ವಿಲೇವಾರಿ ಮಾಡುವುದು, ಮಹಾನಗರ
ಪಾಲಿಕೆಯಿಂದ ನಡೆಯುತ್ತಿರುವ ಕಸ ಸಂಗ್ರಹ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ವೈಯುಕ್ತಿಕ ಸ್ವಚ್ಛತೆಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ʼಶಾಹೀನ್ ಸಂಸ್ಥೆಯ ಕಾಲೇಜಿನಲ್ಲಿ ಬಿಎ, ಬಿಸಿಎ, ಬಿಕಾಂ, ಬಿಎಸ್ಸಿ ಓದುತ್ತಿರುವ ಸುಮಾರು 200 ವಿದ್ಯಾರ್ಥಿಗಳು ಸರ್ವೆಯಲ್ಲಿ ಪಾಲ್ಗೊಳ್ಳುವರು. ಸಮೀಕ್ಷೆಗಾಗಿ ಸಾಮಾನ್ಯ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ವಾಸ್ತವಿಕವಾದ ಮಾಹಿತಿ ಸಂಗ್ರಹಿಸಲೂ
ಸಾಧ್ಯವಾಗಲಿದೆ. ಮಕ್ಕಳು ಮೊಬೈಲ್ ಬಳಸುವ ವಿಷಯದಲ್ಲಿ ಪಾಲಕರಲ್ಲಿ ಇರಬಹುದಾದ ಬೇರೆ-ಬೇರೆ ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ. ಜೊತೆಗೆ ಹೊಸ ಮತ್ತು ಉಪಯುಕ್ತ ಎನ್ನಿಸಬಹುದಾದ ಸಲಹೆಗಳೂ ಪಾಲಕರಿಂದ ಬರಬಹುದು. ಇವೆಲ್ಲವನ್ನು ಕ್ರಮಬದ್ಧವಾಗಿ ಸಂಗ್ರಹಿಸಲಾಗುತ್ತದೆʼ ಎಂದರು.
ಇದನ್ನೂ ಓದಿ : ಬೀದರ್ | ಶತಾಯುಷಿ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಚೇತರಿಕೆ : ಮಠಾಧೀಶರು, ಗಣ್ಯರ ಭೇಟಿ
ಎಲ್ಲೂ ವೈಯುಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ. ಇದೊಂದು ಶೈಕ್ಷಣಿಕ ಸಮೀಕ್ಷೆಯಾಗಲಿದೆ. ಸಂಗ್ರಹವಾಗುವ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಇನ್ನಷ್ಟು ಚಿಂತನೆ, ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದಿದ್ದಾರೆ.





