ಬಸವಾದಿ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಎಲ್ಲರೂ ಒಗ್ಗೂಡಿದಾಗ ಕಲ್ಯಾಣ ರಾಜ್ಯ ನಿರ್ಮಾಣದ ಸಂಕಲ್ಪ ಸಾಕಾರಗೊಳ್ಳಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.
ಬಸವಕಲ್ಯಾಣ ಬಸವ ಧರ್ಮ ಪೀಠ ಸಭಾಂಗಣದಲ್ಲಿ ಭಾನುವಾರ ನಡೆದ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ ಹಾಗೂ ಶರಣ ಸಂಸತ್, ಶರಣ ವಂದನೆ ಹಾಗೂ ಶರಣಾರತಿ ಸಮಾವೇಶದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದಿಂದ ಫೆ.15 ರಿಂದ ಬಸವಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ವಿವಿಧ ಗ್ರಾಮಗಳ ಮುಖಾಂತರ ಬಸವಕಲ್ಯಾಣದಲ್ಲಿ ಭಾನುವಾರ ಸಮಾವೇಶಗೊಂಡಿತು.
‘ಶರಣ ಹರಳಯ್ಯ ಕಲ್ಯಾಣಮ್ಮ ದಂಪತಿ ತಮ್ಮ ತೊಡೆ ಚರ್ಮದಿಂದ ತಯಾರಿಸಿದ ಚಮ್ಮಾವುಗೆಗಳಿರುವ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬಿಜನಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬಿತ್ತಿದ ಬಸವಕಲ್ಯಾಣ ಜಗತ್ತಿನ ಪವಿತ್ರ ಕ್ಷೇತ್ರವಾಗಿದೆ. ಮುಂದಿನ ಶತಮಾನದಲ್ಲಿ ವಿಶ್ವದ ಎಲ್ಲ ಸಮುದಾಯದ ಜನರ ದಾರಿ ಬಸವಕಲ್ಯಾಣದತ್ತ ಬರುವಂತಾಗುತ್ತದೆ. ಬಸವಕಲ್ಯಾಣದ ತ್ರಿಪುರಾಂತ ಕೆರೆ ಅಭಿವೃದ್ಧಿ ಹಾಗೂ ಕೆರೆ ಮಧ್ಯದಲ್ಲಿ ನಿತ್ಯ ವಚನ ಪಠಣ ನಡೆಸಲು ವಚನ ಮಂಟಪ ನಿರ್ಮಿಸಲು ಸರ್ಕಾರ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಸಾನಿಧ್ಯ ವಹಿಸಿದ ಬಸವಕಲ್ಯಾಣ ಗುಣತೀರ್ಥವಾಡಿ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ಧರ್ಮ ಭಕ್ತಿ ಪ್ರಧಾನ ಧರ್ಮವಾಗಿದೆ. ಈ ಧರ್ಮಕ್ಕೆ ವೈಜ್ಞಾನಿಕ, ವೈಚಾರಿಕತೆಯ ಅರಿವು, ಆಚಾರ ಹಾಗೂ ಭಕ್ತಿ ತಳಹದಿಯಾಗಿದೆ. ಬಸವಣ್ಣನವರ ಬಹುತೇಕ ವಚನಗಳಲ್ಲಿ ಭಕ್ತಿ ಭಾವ ತುಂಬಿದೆ’ ಎಂದರು.
ಶಿಕ್ಷಕ ಮಹಾಂತೇಶ ಕುಂಬಾರ ಅವರು ಮಾತನಾಡಿ, ‘ಸಮಾಜದಲ್ಲಿ ಬಸವ ಪ್ರಜ್ಞೆ ಎಚ್ಚರಗೊಳಿಸುವ ಕೆಲಸ ಆಗಬೇಕು. ಧಾರ್ಮಿಕ ಪರಂಪರೆಯಾದ ಇಷ್ಟಲಿಂಗದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಬಸವಾದಿ ಶರಣರ ಸಾಮಾಜಿಕ ಮೌಲ್ಯಗಳನ್ನು ಪಾಲಿಸಬೇಕು. ಮಕ್ಕಳಿಗೆ ಶರಣ ಸಂಸ್ಕೃತಿಯ ಆಶಯಗಳನ್ನು ತಿಳಿಸುವುದು ಅತ್ಯಗತ್ಯ’ ಎಂದರು ಹೇಳಿದರು.
ಬೇಲೂರು ಮಠದ ನಿಜಗುಣಾನಂದ ಸ್ವಾಮೀಜಿ, ಹುಲಸೂರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಸೇರಿದಂತೆ ಮತ್ತಿತರರು ಮಾತನಾಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಜಗತ್ತು ಬಯಸುತ್ತಿರುವುದು ಯುದ್ಧವನ್ನಲ್ಲ; ಶಾಂತಿ-ನೆಮ್ಮದಿಯನ್ನು
ನಿವೃತ್ತ ನ್ಯಾಯಾಧೀಶ ಶರಣ ಎಸ್.ಎಸ್. ನಾಗರಾಣೆ ವಹಿಸಿದ್ದರು. ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಪದ್ಮಶ್ರೀ ಪುರಸ್ಕೃತೆ ಸುಶೀಲಮ್ಮ , ಬಸವ ಧರ್ಮ ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಧುಮ್ಮನಸೂರಿನ ಶಂಕರಲಿಂಗ ಸ್ವಾಮಿಜಿ, ಲಾವಣ್ಯ ಮಾತಾಜಿ, ಬಸವ ದೇವರು, ಸತ್ಯಕ್ಕ ಮಾತಾಜಿ, ಶರಣ ಪಂಡಿತ ಬಾಳೂರೆ, ವೀರಣ್ಮ ಕೊರ್ಲಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





