ಮಾತ್ರ ಭಾಷೆ ಕನ್ನಡ ಬಳಕೆ ಕ್ಷೀಣಿಸುತ್ತಿದ್ದು, 2011ರಲ್ಲಿ ನಡೆದ ಸಮೀಕ್ಷೆಯಂತೆ ಕನ್ನಡ ಬಳಕೆದಾರರು ಕೇವಲ 3.6ರಷ್ಟು ಇದ್ದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅಭಿಪ್ರಾಯಪಟ್ಟರು.
ಔರಾದ್ ಪಟ್ಟಣದ ಅಮರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಬೀದರ್ ಸಹಯೋಗದಲ್ಲಿ ಆಯೋಜಿಸಿದ ʼಕನ್ನಡ ಭಾಷಾ ಸೌಹಾರ್ದ ನೆಲೆಗಳುʼ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ʼಕನ್ನಡಿಗರ ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿ ಕನ್ನಡ ಸಾಹಿತ್ಯ ಸಂಸ್ಕೃತಿ ವ್ಯಾಪಕವಾಗಿ ವಿಸ್ತರಿಸಿದೆ. ಹೀಗಾಗಿಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸುವಂತಾಗಿದೆʼ ಎಂದು ಹೇಳಿದರು.
ʼಕರ್ನಾಟಕದಲ್ಲಿ ಅನೇಕ ಭಾಷಿಕರಿದ್ದು ಅದರಲ್ಲಿ ಮರಾಠಿ, ತೆಲುಗು, ಉರ್ದು, ಕೊಂಕಣಿ, ಮಲೆಯಾಳಿ ಮಾತನಾಡುವ ಜನರಿದ್ದಾರೆ. ಬೀದರ ಜಿಲ್ಲೆಯಲ್ಲಿ ಮರಾಠಿ, ಉರ್ದು ಹಾಗೂ ತೆಲುಗು ಮಾತನಾಡುವವರಿದ್ದು, ಅವರ ಮಾತೃಭಾಷೆಯ ಜೊತೆಗೆ ನಾಡ ಭಾಷೆ, ಆಡಳಿತ ಭಾಷೆ ಕನ್ನಡಕ್ಕೆ ಆದ್ಯತೆ ನೀಡಬೇಕುʼ ಎಂದರು.
ʼಇಂದಿನ ಮಹಾರಾಷ್ಟ್ರದ ಅರ್ಧದಷ್ಟು ಪ್ರದೇಶ ಕನ್ನಡದ ಪ್ರದೇಶವಾಗಿತ್ತು ಎಂಬುದು ಇತಿಹಾಸದಿಂದ ನಮಗೆ ತಿಳಿಯುತ್ತದೆ. ಅಂದು ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರು ಕನ್ನಡಕ್ಕಾಗಿ ಹೋರಾಟ ಮಾಡಿದ್ದು, ಅವರ ಕೆಲಸ ಕಾರ್ಯಗಳು ನಮಗೆ ಸದಾ ಪ್ರೇರಣೆ ನೀಡಲಿವೆʼ ಎಂದು ತಿಳಿಸಿದರು.
‘ಕರ್ನಾಟಕದಲ್ಲಿ 216 ವಿವಿಧ ಮಾತೃಭಾಷೆ ಹೊಂದಿರುವ ಜನಾಂಗಗಳಿವೆ. ದೇಶದಲ್ಲಿ 19 ಸಾವಿರಕ್ಕೂ ಅಧಿಕ ಭಾಷೆಗಳು ಬಳಕೆಯಲ್ಲಿವೆ ಎಂಬುದು ವರದಿ ಹೇಳುತ್ತದೆ. ನಿತ್ಯವೂ ಕನ್ನಡ ಬಳಕೆಯಾಗಿದ್ದಲ್ಲಿ ಕನ್ನಡ ಬೆಳೆಯುತ್ತದೆ. ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಮನೆಯ ಹೊಸ್ತಿಲು ದಾಟುವಾಗ ಕನ್ನಡ ಸಂಸ್ಕೃತಿ ಹೊತ್ತು ನಿಲ್ಲಬೇಕಾಗಿದೆ’ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಬೀದರ್ ಜಿಲ್ಲೆ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕನ್ನಡದ ಜೊತೆ ಜೊತೆಗೆ ಮರಾಠಿ, ತೆಲುಗು, ಉರ್ದು ಬೆರೆತುಕೊಂಡಿವೆ. ಶರಣರು, ದಾಸರು, ಜನಪದ ಕವಿಗಳು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.
‘ಕನ್ನಡ-ಉರ್ದು ಸೌಹಾರ್ದ ನೆಲೆಗಳ ಕುರಿತು ಸಾಹಿತಿ ಶಕೀಲ್ ಐ.ಎಸ್, ಕನ್ನಡ-ತೆಲುಗು ಸೌಹಾರ್ದ ನೆಲೆಗಳ ಕುರಿತು ಸಂಶೋಧಕ ಡಾ ಧನರಾಜ ಧರಂಪೂರೆ, ಕನ್ನಡ-ಮರಾಠಿ ಸೌಹಾರ್ದ ನೆಲೆಗಳ ಕುರಿತು ಕಸಾಪ ತಾಲೂಕು ಆದ್ಯಕ್ಷ ಬಿ.ಎಂ.ಅಮರವಾಡಿ ಉಪನ್ಯಾಸ ಮಂಡಿಸಿದರು.
ಕಸಾಪ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ಮಾತನಾಡಿದರು. ಡಾ.ಶಿವಲಿಂಗ ಹೇಡೆ ಪ್ರಾಸ್ತಾವಿಕ ಮಾತನಾಡಿದರು.
ಇದನ್ನೂ ಓದಿ : ಬಸವಕಲ್ಯಾಣ | ಪ್ರಕೃತಿ ಸೊಬಗಿನಿಂದಲೇ ಕಾವ್ಯ ಸೃಷ್ಟಿಸಿದ ಕುವೆಂಪು : ಭೀಮಾಶಂಕರ ಬಿರಾದರ್
ಚಿಂತಕ ಜಗನ್ನಾಥ ಮೂಲಗೆ, ಕಲ್ಯಾಣರಾವ ಶೆಂಬೆಳ್ಳೆ, ರಹೀಂ ಸಾಬ್, ಅಮರೇಶ್ವರ ಪದವಿ ಕಾಲೇಜು ಪ್ರಾಚಾರ್ಯೆ ಡಾ.ಪ್ರೇಮಾ ಹೂಗಾರ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ರೇವಣಯ್ಯ ಮಠ, ಶಿವಶಂಕರ ಟೋಕರೆ, ಮಹಾನಂದಾ ಎಂಡೆ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನೆಳಗೆ, ಮಹಾದೇವ ಶಿಂಧೆ, ಪ್ರಶಾಂತ, ಮಲ್ಲಿಕಾರ್ಜುನ ಟೇಕರಾಜ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.





