ಜಾತಿ, ಧರ್ಮ, ಲಿಂಗ ತಾರತಮ್ಯ ವಿಲ್ಲದೆ ಕನ್ನಡವನ್ನು ಕಟ್ಟಲಾಗಿದೆ. ಜೈನ, ಮುಸ್ಲಿಂ, ಲಿಂಗಾಯತ, ಬ್ರಾಹ್ಮಣ, ಕ್ರೈಸ್ತರು ಹೀಗೆ ಎಲ್ಲರೂ ಕನ್ನಡ ಜಗತ್ತನ್ನು ಕಟ್ಟಿದ್ದಾರೆ. ಹಾಗಾಗಿಯೇ ಕನ್ನಡ ಸಾಹಿತ್ಯ ಎಂದಿಗೂ ಸಮಾನತೆ ಮತ್ತು ಸೌಹಾರ್ದತೆ ಪ್ರತಿಪಾದಿಸುತ್ತದೆʼ ಎಂದು ಹಿರಿಯ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಬಸವಕಲ್ಯಾಣ ನಗರದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಪ್ರತಿಷ್ಠಾನದ 96ನೇ ಉಪನ್ಯಾಸ ಸಮಾರಂಭದಲ್ಲಿ ‘ಕನ್ನಡ ಸಾಹಿತ್ಯ: ಸಮಾನತೆ ಮತ್ತು ಸೌಹಾರ್ದತೆ ‘ ಕುರಿತು ಮಾತನಾಡಿದ ಅವರು ಮಾತನಾಡಿದರು.
ʼಬಹುತ್ವ ಹಾಗೂ ಏಕತ್ವಗಳ ಒಂದತ್ವಗಳೆ ಸೌಹಾರ್ದತೆಯಾಗಿದೆ. ಸಂವಾದ ಪ್ರಜಾಪ್ರಭುತ್ವದ ಪ್ರಧಾನ ತತ್ವ. ಸಂವಾದದಲ್ಲಿ ಸಹಿಷ್ಣುತೆ, ಅಭಿಪ್ರಾಯ, ಭಿನ್ನಾಭಿಪ್ರಾಯಗಳಿಗೂ ಮನ್ನಣೆ ದೊರೆಯುತ್ತದೆ. ತನ್ನ ಸಮಾಜದ, ದೇಶದ ಸೌಹಾರ್ದತೆಗೆ ಸಮಾನತೆಗೆ ಧಕ್ಕೆ ಬಂದಾಗ ಕಾಲದ ದನಿಯಾಗಿದ್ದು ಸಾಹಿತ್ಯ. ಎಲ್ಲರೂ ಕಾಲದ ದನಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕುʼ ಎಂದು ತಿಳಿಸಿದರು.

ʼವಿವೇಕ ಜಾಗದಲ್ಲಿ ಉದ್ರೇಕ, ಸತ್ಯದ ಜಾಗದಲ್ಲಿ ಅಸತ್ಯ ಬಂದು ನೆಲೆಸಿವೆ. ವಿಚಾರ ಮತ್ತು ವಿಕಾರಗಳ ನಡುವಿನ ಅಂತರ ಕಡಿಮೆಯಾಗಿದೆ. ಕನ್ನಡ ಸಾಹಿತ್ಯ ಜಾತಿ- ಕುಲ ವ್ಯವಸ್ಥೆಯನ್ನು, ಲಿಂಗ ತಾರತಮ್ಯವನ್ನು ವಿರೋಧಿಸಿದೆ. ಪರಂಪರೆಗೆ ಚಲನಶೀಲತೆ ಇರುತ್ತದೆ. ಸಂಪ್ರದಾಯಕ್ಕೆ ಜಡತೆ ಇರುತ್ತದೆ. ಸಂಸ್ಕೃತಿಯೂ ಏಕ ಕಾಲದಲ್ಲಿ ಚಲನಶೀಲತೆ ಮತ್ತು ಜಡವು ಆಗಿರುತ್ತದೆʼ ಎಂದರು.
ʼವಚನ ಸಾಹಿತ್ಯಕ್ಕೆ ಸಾಹಿತ್ಯದ ಮನ್ನಣೆ ದೊರೆತದ್ದು 70-80ರ ದಶಕದ ನಂತರ. ಅನಂತರ ವಚನಗಳ ಕುರಿತು ಭಿನ್ನ ಆಯಾಮಗಳಲ್ಲಿ ಅಧ್ಯಯನ ಆರಂಭವಾದವು. ಕನ್ನಡ ಜಗತ್ತನ್ನು ವೈಚಾರಿಕವಾಗಿ ರೂಪಿಸಿದ್ದು ವಚನಕಾರರು. ದೇಹವೇ ದೇಗುಲ, ಶರಣ ಸತಿ ಲಿಂಗ ಪತಿ, ಕಾಯಕವೇ ಕೈಲಾಸ ಇಂಥ ಪರಿಕಲ್ಪನೆ ನೀಡಿದ ವಚನ ಚಳುವಳಿ ಭಕ್ತಿಯ ಖಾಸಗೀಕರಣಕ್ಕೆ ಮಹತ್ವ ನೀಡಿದೆ. ಬಸವಣ್ಣನವರು ರಾಜಾಶ್ರಯದಲ್ಲಿ ಇದ್ದು ಚಳುವಳಿ ರೂಪಿಸಿದ್ದರು. ಪಂಪ ರಾಜಾಶ್ರಯದಲ್ಲಿ ವ್ಯವಸ್ಥೆಯನ್ನು ವಿರೋಧಿಸಿದ್ದನುʼ ಎಂದರು.
ʼಕರ್ನಾಟಕ ಎಂದರೆ ಬರಿ ನಕಾಶೆಯಲ್ಲ. ನದಿ, ಹಳ್ಳ, ಹಳ್ಳಿ, ನೆಲ, ಕಾಡು ಎಲ್ಲವೂ ಆಗಿದೆ. ನಿಸರ್ಗದಲ್ಲಿಯೇ ಭೇದ ಭಾವ ಮಾಡುತ್ತೇವೆ. ನಿಸರ್ಗದಲ್ಲಿ ಯಾವುದು ಕನಿಷ್ಠ, ಶ್ರೇಷ್ಠ ಎಂಬುವುದಿಲ್ಲ. ಗಂಧದ ಮರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಜಾಲಿಮರ. ಕೋಗಿಲೆಯಷ್ಟೆ ಕಾಗೆಯೂ ಮುಖ್ಯ. ನಿರಾವರಿ ಎಂದರೆ ನೀರು ಇರದ ಕಡೆಗೆ ನೀರು ಹರಿಸುವುದು. ಭಾವನಾತ್ಮಕವಾಗಿ ಏಕತ್ವದ ಪ್ರತಿಪಾದನೆ ಮತ್ತು ಸಾಂಸ್ಕೃತಿಕವಾಗಿ ಬಹುತ್ವದ ಪ್ರತಿಪಾದನೆ ಇವೆರಡರ ಸೇರುವಿಕೆಯೇ ಸೌಹಾರ್ದತೆಯಾಗಿದೆ ಎಂದರು.
ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ, ʼಕನ್ನಡ ಸಾಹಿತ್ಯ ಆರಂಭದಿಂದಲೂ ಸಮಾನತೆ ಮತ್ತು ಸೌಹಾರ್ದತೆಯ ಪಾಠ ಮಾಡುತ್ತಾ ಬಂದಿದೆ. ಅದನ್ನು ಗ್ರಹಿಸುವ, ಅರ್ಥೈಸುವ ಪ್ರಯತ್ನ ಮತ್ತೆ ಮತ್ತೆ ಮಾಡಬೇಕಿದೆʼ ಎಂದರು.
ಹಿರಿಯ ಸಾಹಿತಿ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ʼಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಬರಗೂರ ಅವರು ತಮ್ಮ ಕನ್ನಡ ಪರ ಕೆಲಸಗಳಿಂದ ಮನೆಮಾತಾಗಿದ್ದಾರೆ. ಅವರು ತಾಯಿ ಪ್ರೀತಿಯ ಜಾಯಮಾನವರು. ಎಂದಿಗೂ ಈ ನೆಲದ ಪ್ರಜಾಪ್ರಭುತ್ವದ, ಸಮಾನತೆಯ ಬಗೆಗೆ ಧ್ಯಾನಿಸಿದವರುʼ ಎಂದರು.
ಕಾಲೇಜು ಪ್ರಾಚಾರ್ಯ ಡಾ.ಅಶೋಕ ಕುಮಾರ ವಣಗೀರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರಗೂರು ರಾಮಚಂದ್ರಪ್ಪ ಅವರು ಬರೆದ ಸೌಹಾರ್ದ ಭಾರತ ಪುಸ್ತಕ ಓದುಗರಿಗೆ ನೀಡುವ ಮೂಲಕ ಸಮಾರಂಭ ಉದ್ಘಾಟಿಸಲಾಯಿತು.
ಇದನ್ನೂ ಓದಿ : ಬೀದರ್ | ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರ ಮತದಾನ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ, ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಆಕಾಂಕ್ಷ ಬರಗೂರು, ಉಪ ಪ್ರಾಚಾರ್ಯ ಡಾ.ಅರುಣಕುಮಾರ್ ಯಲಾಲ್, ಚಂದ್ರಕಾಂತ ಅಕ್ಕಣ್ಣ, ಸಂಜು ಕುಮಾರ ನಡುಕರ, ಅನೋಜಕುಮಾರ, ಶರಣಪ್ಪ ಗದಲೆಗಾಂವ ಮೋದಲಾದವರಿದ್ದರು. ರೆಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ವಂದಿಸಿದರು.





