ಕನ್ನಡ ನಾಡು-ನುಡಿ, ಭಾರತ ಸಂಸ್ಕೃತಿ ಎಲ್ಲವೂ ಸಮೃದ್ಧಿಯಾಗಿದೆ. ಕನ್ನಡ ಹೆಚ್ಚು ಬಳಕೆಯಾದರೆ ಮಾತ್ರ ಕನ್ನಡ ಬೆಳೆದು ಉಳಿಯಲು ಸಾಧ್ಯ ಎಂದು ಹಿರಿಯ ಸಾಹಿತಿ ಭಾರತಿ ವಸ್ತ್ರದ ನುಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಹಯೋಗದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ ವಿಶ್ವ ಮಾನವ ಸಂದೇಶ ನೀಡಿದ ಮಹಾಕವಿ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಕುವೆಂಪು ಮಹಾನ್ ವ್ಯಕ್ತಿ, ಕನ್ನಡದ ಆಸ್ತಿಯಾಗಿದ್ದಾರೆ. ಅವರು ಬರೆದ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿವೆ. ಕುವೆಂಪು ಸಾಹಿತ್ಯ ಹೆಚ್ಚು ಅಧ್ಯಯನ ನಡೆಸಬೇಕುʼ ಎಂದರು.
ಚಿಟ್ಟವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ʼಗಡಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವ ಜೊತೆಗೆ ಗಡಿ ಭಾಗದಲ್ಲಿ ಕುವೆಂಪು ಅವರನ್ನು ಪರಿಚಯಿಸುವ ಕಾರ್ಯ ಆಗಬೇಕಿದೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡ ಬಳಸಬಹುದುʼ ಎಂದರು.
ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಅಲ್ಲೂರೆ ಅವರು ವಿಶೇಷ ಉಪನ್ಯಾಸ ನೀಡಿ, ʼತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಕನ್ನಡವನ್ನು ಬಳಸಬೇಕು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವ ಕಾರ್ಯದಲ್ಲಿ ಕನ್ನಡ ಬಳಕೆ ಹೆಚ್ಚಳವಾಗಬೇಕಿದೆ. ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ, ವೈಜ್ಞಾನಿಕ ಚಿಂತನೆಯಿದೆ. ಎಲ್ಲರೂ ಕುವೆಂಪು ಸಾಹಿತ್ಯ ಓದಬೇಕುʼ ಎಂದು ತಿಳಿಸಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ. ಮಾತನಾಡಿ, ʼಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟು ಪ್ರೋತ್ಸಾಹ ನೀಡಬೇಕು. ಒಂದು ಸಲ ಓದುವ ಹವ್ಯಾಸ ಬೆಳೆಸಿಕೊಂಡರೆ ಅವರು ಮುಂದುವರೆಸಿಕೊಂಡು ಹೋಗುತ್ತಾರೆ. ಹೆಚ್ಚಿನ ಪುಸ್ತಕ ಓದು ಜ್ಞಾನ ವೃದ್ಧಿಸುತ್ತದೆʼ ಎಂದರು.
ಮುಖ್ಯ ಅತಿಥಿಗಳಾದ ಪಾಂಡುರಂಗ ಬೆಂಬೂಳಗಿ ಮಾತನಾಡಿ, ʼಕಲಿಕೆ ಎಂಬುದು ಬದುಕಿನೂದ್ದಕ್ಕೂ ನಿರಂತರವಾಗಿರುತ್ತದೆ. ಶ್ರದ್ಧೆ, ಭಕ್ತಿ, ಜ್ಞಾನ ನಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆʼ ಎಂದು ನುಡಿದರು.
ಇದನ್ನೂ ಓದಿ : ಬೀದರ್ | ಅಸ್ಪೃಶ್ಯತೆ ಆಚರಣೆಗೆ ತಡೆಗೆ ಆಗ್ರಹ
ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಲಕ್ಷ್ಮಿಕಾಂತ ಶಂಕರರಾವ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೌರಮ್ಮ ಅವರು ಜನಪದ ಗೀತೆ ಹಾಡಿದರು. ರಮೇಶ ಪೂಜಾರಿ ನಿರೂಪಿಸಿದರು. ಗೌಡಪ್ಪ ಜಿ ಸ್ವಾಗತಿಸಿದರು. ವೀರಶೆಟ್ಟಿ ಕುಂಬಾರ ವಂದಿಸಿದರು.





