ವಿಶ್ವಕ್ಕೆ ಕನ್ನಡ ಭಾಷೆ ಅನ್ನ ಭಾಷೆಯಷ್ಟೇ ಮಹತ್ವದ್ದಾಗಿದ್ದು, ಇದು ಸಮಾನತೆಗಾಗಿ ಹೋರಾಡಿದ ಚಳವಳಿಯ ಭಾಷೆಯಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಸದಸ್ಯ ಸಂಜೀವಕುಮಾರ ಅತಿವಾಳೆ ಅಭಿಪ್ರಾಯಪಟ್ಟರು.
ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ಬೀದರ ಜಿಲ್ಲಾ ಹಾಗೂ ರಾಜ್ಯ ಘಟಕದ ವತಿಯಿಂದ ಆಯೋಜಿಸಿದ ಪುನೀತ ರಾಜಕುಮಾರ ಅವರ 51ನೇ ಜನ್ಮದಿನ ಹಾಗೂ ರಾಜ್ಯ ಮಟ್ಟದ ಸಾಹಿತ್ಯ–ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಕನ್ನಡ ಭಾಷೆಗೆ ಸುಮಾರು 2,500 ವರ್ಷಗಳ ಶ್ರೀಮಂತ ಇತಿಹಾಸವಿದ್ದು, ಅಧಿಕ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಶ್ರೇಷ್ಠ ಭಾಷೆಯಾಗಿದೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮಾನತೆಗಾಗಿ ನಡೆದ ಚಳವಳಿ ಜಗತ್ತಿಗೆ ಕನ್ನಡದ ವೈಶಿಷ್ಟ್ಯತೆಯನ್ನು ಎತ್ತಿ ತೋರುತ್ತದೆʼ ಎಂದು ಹೇಳಿದರು.
ʼನಿರ್ಗತರಿಗೆ ಶಿಕ್ಷಣ ನೀಡುವುದು, ಅನಾಥರಿಗೆ ಆಶ್ರಯ ಕಲ್ಪಿಸುವುದು, ಕಣ್ಣು ದಾನ ಮಾಡುವಂತಹ ಮಾನವೀಯ ಕಾರ್ಯ ಹಾಗೂ ಕೋವಿಡ್ ಮಾರಣಾಂತಿಕ ಕಾಯಿಲೆ ಬಂದ ಸಂದರ್ಭದಲ್ಲಿ ಸರ್ಕಾರಕ್ಕೆ ನೀಡಿದ ಪುನೀತ್ ರಾಜಕುಮಾರ ಅವರ ನೆರವು ಇಂದಿನ ಸಮಾಜಕ್ಕೆ ಮಾದರಿಯಾಗಿದೆʼ ಎಂದು ಹೇಳಿದರು.

ಕರವೇ(ಕಾವಲುಪಡೆ) ರಾಜ್ಯಾಧ್ಯಕ್ಷ ಡಾ.ಸುರೇಶ ಮಾತನಾಡಿ, ʼರಾಜಕುಮಾರ ಕುಟುಂಬದ ಮಾನವೀಯತೆ, ಸಮಾಜಪರ ಕಾಳಜಿ ಮತ್ತು ಕನ್ನಡಾಭಿಮಾನವನ್ನು ಯಾರಿಂದಲೂ ಭರ್ತಿಮಾಡಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಬೇಕುʼ ಎಂದು ಕರೆ ನೀಡಿದರು.
ಜ್ಯೂನಿಯರ್ ರಾಜಕುಮಾರ ಅಪ್ಪು ಸಂಕಲೇಶ್ವರಪುರ ಅವರು ಪುನೀತ ಅಭಿನಯದ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ ಆರ್ಥಿಕ ನೆರವು, ಪುಸ್ತಕ, ನೋಟ್ಬುಕ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 51 ಜನರಿಗೆ ʼಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | 5 ಮೇಕೆಗಳನ್ನು ಹರಿದು ತಿಂದ ತೋಳ
ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷ ಅವಿನಾಶ್ ಬುದೇರಕರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೈ ಭಾರತ ಮಾತೆ ಜನಸೇವಾ ಸಮಿತಿ ನವದೆಹಲಿ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಸ್ವಾಮೀಜಿ ಹಾಗೂ ಯೋಗಗುರು ಗೋರಖನಾಥ, ಫಾದರ್ ಶ್ಯಾಮವೇಲ್, ಹಣ್ಮು ಪಾಜಿ, ಅಮೃತರಾವ ಚಿಮಕೋಡೆ ಸೇರಿದಂತೆ ಸಂಘಟನೆಯ ಪ್ರಮುಖರು, ಗಣ್ಯರು, ಸಮಾಜ ಸೇವಕರು ಉಪಸ್ಥಿತರಿದ್ದರು.





