ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಅನೇಕ ಭಕ್ತರು ಶ್ರದ್ಧೆ, ಭಕ್ತಿಯಿಂದ ಲಿಂಗಪೂಜೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಬೀದರ್ ನಗರದ ಬಸವ ಮಂಟಪದಲ್ಲಿ ಬೆಳಿಗ್ಗೆ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ಆಯೋಜಿಸಿದ ಸಾಮೂಹಿಕ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಯಿತು.
ʼಕೊರಳಲ್ಲಿರುವ ಲಿಂಗವನ್ನು ಗೂಟಕ್ಕೆ ನೇತುಹಾಕಿ ಕೇವಲ ಶಿವರಾತ್ರಿಗೊಮ್ಮೆ ಪೂಜಿಸದೆ ನಿತ್ಯ ನಿತ್ಯ ಲಿಂಗವ ಪೂಜಿಸಬೇಕುʼ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಇಷ್ಟಲಿಂಗ ಪೂಜೆಯಿಂದ ದೀರ್ಘಕಾಲಿನ ಕಾಯಿಲೆಗಳು ನಿಯಂತ್ರಣದಲ್ಲಿರುವುದರ ಜೊತೆಗೆ ಮಾನಸಿಕ ನೆಮ್ಮದಿ ಲಭಿಸುತ್ತದೆ. ಆತ್ಮಾನಂದದ ಅನುಭವ, ಧನಾತ್ಮಕ ವಿಚಾರಗಳನ್ನು ವೃದ್ಧಿಸುತ್ತದೆ. ಲಿಂಗವು ಸೃಷ್ಟಿಕರ್ತನ ಕುರುಹವಾಗಿದ್ದು, ನಮಗೆ ಅನ್ನ, ಅರಿವೆ, ಆಶ್ರಯ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ನಿತ್ಯವೂ ಲಿಂಗಪೂಜೆ ಮಾಡಬೇಕುʼ ಎಂದು ಪ್ರತಿಪಾದಿಸಿದರು.

ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ, ʼ12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನೀಡಿದ ಇಷ್ಟಲಿಂಗವು ಸರ್ವಶರಣರಿಗೆ ಪ್ರಾಣವಾಗಿತ್ತು. ಲಿಂಗಪೂಜೆಯ ನಂತರ ತೀರ್ಥಪ್ರಸಾದ ಪಡೆದುಕೊಂಡ ನಂತರವೇ ಕಾಯಕ ದಾಸೋಹ ಮಾಡುತಿದ್ದರು. ಇಷ್ಟಲಿಂಗ ವೈಜ್ಞಾನಿಕ ಹಿನ್ನೆಲೆ ಹೊಂದಿದೆ. ತ್ರಾಟಕ ಯೋಗದಿಂದ ಕಣ್ಣಿನ ಕಾಂತಿ ವೃದ್ಧಿಸುವುದರ ಜೊತೆಗೆ ಮನಸ್ಸು ಪ್ರಶಾಂತವಾಗಿರುತ್ತದೆʼ ಎಂದರು.
ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಪ್ರೊ. ವೀರಶೆಟ್ಟಿ ಮೈಲೂರಕರ್ ಬಸವಪೂಜೆ ನೆರವೇರಿಸಿ ಪ್ರಸಾದ ದಾಸೋಹಗೈದರು.
ಇದೇ ವೇಳೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಲಿಂಗಾಯತ ಧರ್ಮ ಮಹಾಪೀಠದ ಕಾರ್ಯಯೋಜನೆಯ ಭಿತ್ತಿಪತ್ರ ಹಾಗೂ ಗಂಗಾವತಿಯಲ್ಲಿ ಮಾ.22 ರಂದು ನಡೆಯಲಿರುವ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ : ಔರಾದ್ | ಸಮಾನತೆ ಸಂದೇಶ ಸಾರಿದ ಸಂತ ಸೇವಾಲಾಲ್ : ಶಾಸಕ ಪ್ರಭು ಚವ್ಹಾಣ
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಪಶುವೈದ್ಯಕೀಯ ವಿ.ವಿ.ಯ ನಿವೃತ್ತ ಡೀನ್ ಡಾ. ಸುರೇಶ ಪಾಟೀಲ, ಉದ್ಯಮಿ ನಾಗಶೆಟ್ಟಿ ದಾಡಗಿ, ಡಾ.ವೀರಶೆಟ್ಟಿ ಮೈಲೂರಕರ್, ಶಿವಶರಣಪ್ಪ ಪಾಟೀಲ ಹಾರೂರಗೇರಿ, ನಿರ್ಮಲಾ ನಿಲಂಗೆ, ಶಿವಕುಮಾರ ಪಾರಾ, ನ್ಯಾಯವಾದಿ ಅಶೋಕ ಮಾನೂರೆ, ಬಸವರಾಜ ಲಾಧಾ, ಬಸವರಾಜ ಸಂಗಮದ, ಮನ್ಮಥಯ್ಯ ಸ್ವಾಮಿ, ಗಣಪತಿ ಬಿರಾದಾರ, ಶ್ರೀನಾಥ ಕೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಲ್ಯಾಣರಾವ ಬಂಬುಳಗಿ ವಚನ ಗಾಯನ ಮಾಡಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಸತೀಶ ಪಾಟೀಲ ನಿರೂಪಿಸಿದರೆ, ಬಸವಕುಮಾರ ಚಟನಳ್ಳಿ ವಂದಿಸಿದರು.
ಭಾಲ್ಕಿ : ಮಕ್ಕಳಲ್ಲಿ ಲಿಂಗಪೂಜೆ ಆಸಕ್ತಿ ಬೆಳೆಸಿ : ಬಸವಲಿಂಗ ಪಟ್ಟದ್ದೇವರು
ಭಾಲ್ಕಿಯ ಚನ್ನಬಸವಾಶ್ರಮ ಪರಿಸರ ಸಮೀಪದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಭಾನುವಾರ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ವಿವಿಧೆಡೆಯ ಅನೇಕ ಭಕ್ತರು ಶ್ರದ್ಧೆ, ಭಕ್ತಿಯಿಂದ ಲಿಂಗಪೂಜೆಯಲ್ಲಿ ಭಾಗಿಯಾಗಿದ್ದರು.
ಲಿಂಗಪೂಜೆಯ ವಿಧಿ ವಿಧಾನ ತಿಳಿಸಿ ಕೊಟ್ಟ ಬಳಿಕ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಇಷ್ಟಲಿಂಗದಲ್ಲಿ ಅದ್ಭುತ ಶಕ್ತಿ ಅಡಗಿದೆ. ಮನದ ಮೈಲಿಗೆ ತೊಳೆದು ಮನಸ್ಸು ಶಾಂತಗೊಳಿಸುವ ಮತ್ತು ಮನುಷ್ಯ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಇಷ್ಟಲಿಂಗ ಪೂಜೆಯಲ್ಲಿದೆ. ಲಿಂಗಪೂಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರು ಪ್ರತಿನಿತ್ಯ ಇಷ್ಟಲಿಂಗ ಪೂಜೆಯನ್ನು ಮಾಡುವುದು ರೂಢಿಸಿಕೊಳ್ಳಬೇಕುʼ ಎಂದರು.

ʼಮಕ್ಕಳಲ್ಲಿ ಬಾಲ್ಯದಿಂದಲೇ ಇಷ್ಟಲಿಂಗ ಪೂಜೆಯ ಆಸಕ್ತಿ ಬೆಳೆಸಿದಲ್ಲಿ ಅವರು ಮುಂದೆ ದೇಶಕ್ಕೆ ಉತ್ತಮ ಆಸ್ತಿಯಾಗುತ್ತಾರೆ. ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ನಡೆಯುವ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಭಾಗಿಯಾಗುವುದರಿಂದ ದೈವಿ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಎಲ್ಲರೂ ಪ್ರತಿದಿನ ಲಿಂಗಪೂಜೆ ಮಾಡುವುದಾಗಿ ಸಂಕಲ್ಪ ಮಾಡಬೇಕುʼ ಎಂದು ತಿಳಿಸಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬಸವಲಿಂಗ ದೇವರು ನೇತೃತ್ವ ವಹಿಸಿದ್ದರು.
ಇದನ್ನೂ ಓದಿ : ಭಾಲ್ಕಿ | ಹಿರೇಮಠ ಸಂಸ್ಥಾನ ಸಹಯೋಗದಲ್ಲಿ ನಾಳೆ ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ
ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಶಾರದಾ ಹೋಟೆಲ್ ಮಾಲಿಕ ಬಾಬುರಾವ ಹುಣಜೆ ಬಸವಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಸೇರಿದಂತೆ ಹಲವರು ಇದ್ದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿ, ವಂದಿಸಿದರು.





