ಪ್ರರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಸೋಮವಾರ ಹುಮನಾಬಾದ್ ಪಟ್ಟಣದಲ್ಲಿ ಬಲಗೈ ಸಮುದಾಯಗಳ ಸಂಘಟನೆಗಳು ಕರೆ ನೀಡಿದ ಬಂದ್ಗೆ ಬಹುತೇಕ ಅಂಗಡಿ-ಮುಂಗಟ್ಟು ಮುಚ್ಚಿ ವರ್ತಕರು ಬಂದ್ಗೆ ಬೆಂಬಲ ನೀಡಿದರು.
ಕೆಲವೆಡೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು, ಶಾಲಾ-ಕಾಲೇಜುಗಳ ತರಗತಿಗಳು ಎಂದಿನಂತೆ ನಡೆದವು. ಸಾರಿಗೆ ಬಸ್ಗಳು, ಆಟೊಗಳು ಸಂಚರಿಸಿದವು. ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಶಿವಾಜಿ ವೃತ್ತ, ಹಳೆ ಪುರಸಭೆ ಕಚೇರಿ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದ ಮುಖಾಂತರ ಡಾ.ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅಂಜುಂ ತಬಸುಮ್ ಅವರಿಗೆ ಸಲ್ಲಿಸಲಾಯಿತು.
ಸಮಿತಿಯ ಮುಖಂಡರು ಮಾತನಾಡಿ, ‘ಒಳಮೀಸಲಾತಿ ಜಾರಿಯಿಂದ ಹಲವು ವರ್ಗಗಳಿಗೆ ಬಹಳ ದೊಡ್ಡ ಅನ್ಯಾಯವಾಗಲಿದೆ. ರೋಸ್ಟರ್ ಬಿಂದುವನ್ನು ಕಡಿಮೆ ಸಂಖ್ಯೆಯ ನೇಮಕಾತಿಗಳಲ್ಲಿ ಸಮತೋಲನ ಸಾಧಿಸುವಂತೆ ಕಾಯ್ದೆ ರೂಪಿಸಬೇಕು. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದೊಡ್ಡ ಸಂಖ್ಯೆಯ ನೇಮಕ ನಡೆಯುವಾಗ ಒಳಮೀಸಲು ಹಂಚಿಕೆಯಲ್ಲಿ ವ್ಯತ್ಯಾಸವಾಗವುದಿಲ್ಲ. ಆದರೆ ಬೆರಳೆಣಿಕೆ ಹುದ್ದೆಯ ನೇಮಕ ವೇಳೆ ಪ್ರವರ್ಗ-ಎಗೆ ಸಿಕ್ಕ ಪ್ರಾಧಾನ್ಯತೆ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗೆ ಸಿಗುವುದೇ ಇಲ್ಲʼ ಎಂದು ಹೇಳಿದರು.

ʼಸರ್ಕಾರದ ಇಲಾಖೆಯ ಎಲ್ಲಾ ಹುದ್ದೆಗಳನ್ನು ಫೋಲ್ ಮಾಡಿಕೊಂಡು ಹೆಚ್ಚು ನೇಮಕಾತಿ ಮಾಡಿಸಿದರೆ, ಎಲ್ಲರಿಗೂ ಸಮಾನ ಅವಕಾಶ ಸಿಕ್ಕಂತಾಗುತ್ತದೆ. ನ್ಯಾ.ನಾಗಮೋಹನದಾಸ ಆಯೋಗ ಕೊಟ್ಟ ಶಿಫಾರಸಿನಂತೆ ಪ್ರವರ್ಗಗಳ ಹಂಚಿಕೆಯಾಗಿದ್ದರೆ, ಈ ಸಮಸ್ಯೆ ಬರುತ್ತಿರಲಿಲ್ಲ. ಆದರೆ ರಾಜಕೀಯ ತೀರ್ಮಾನದಿಂದ ಸಮಸ್ಯೆ ಹೆಚ್ಚಾಗಿದೆ. ಸರ್ಕಾರದ ನೀತಿಗಳನ್ನು ರೂಪಿಸುವ ಸ್ಥಾನದಲ್ಲಿರುವ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳಿಗೆ ರೋಸ್ಟರ್ ಬಿಂದುವಿನಲ್ಲಾಗಿರುವ ಇಂತಹ ಸಮಸ್ಯೆಗಳು ಅವರ ಗಮನಕ್ಕೆ ಬಂದಿಲ್ಲವೆಂದರೆ ಇದು ನಿಜಕ್ಕೂ ದುರಂತ. ಇದು ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಸಮುದಾಯಗಳಿಗೆ ಮರಣ ಶಾಸನವಾಗಿದೆʼ ಎಂದು ಆಕ್ರೋಶ ಹೊರಹಾಕಿದರು.
ಒಳಮೀಸಲಾತಿ ಕಾಯ್ದೆಯನ್ನು ರಾಜ್ಯಪಾಲರು ಶೀಘ್ರ ಸರ್ಕಾರಕ್ಕೆ ವಾಪಸ್ ಕಳುಹಿಸಬೇಕು ಮತ್ತು ಒಳಮೀಸಲಾತಿಯಲ್ಲಿ ಆಗಿರುವ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಮುಖರು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಮಾಧ್ಯಮಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಕೊಳ್ಳಲಿ : ಬಸವರಾಜ ಹೊರಟ್ಟಿ
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಬಾಬು ಟೈಗರ್ ಸೇರಿದಂತೆ ಪ್ರಮುಖರಾದ ಅಂಕುಶ್ ಗೋಖಲೆ, ಬಸವರಾಜ ಆರ್ಯ, ಗಜೇಂದ್ರ ಕನಕಟಕರ, ಲಕ್ಷ್ಮೀಪುತ್ರ ಮಾಳಗೆ, ದೇವೇಂದ್ರ ಫೋಲಾ, ವೀರಪ್ಪ ಭೋತಾಳೆ, ಸುರೇಶ್ ಘಾಂಗ್ರೆ, ಗೌತಮ ಚೌಹಾಣ, ಈಶ್ವರ ಕ್ರಾಂತಿ, ರಾಹುಲ್ ಉದ್ಧಾ, ಅನೀಲ ದೊಡ್ಡಿ, ಶಿವಾನಂದ ಕಟ್ಟಿಮನಿ, ಲೋಕೇಶ ಮೇತ್ರೆ, ಹುಲೆಪ್ಪ, ರವಿ ಹೊಸಳ್ಳಿ, ದಿಲೀಪ ಮರಪಳ್ಳಿಕರ, ವೈಜಿನಾಥ ಸಿಂಧೆ, ಶರಣಪ್ಪಾ ಮೇತ್ರೆ, ಸಿದ್ಧಾರ್ಥ್ ಕಾಂಬಳೆ, ಸುನೀಲ, ಶಿವರಾಜ, ಶ್ರೀಧರ, ವಿನೋದ, ಮಲ್ಲಿಕಾರ್ಜುನ ಶರ್ಮಾ ಸೇರಿದಂತೆ ವಿವಿಧೆಡೆಯಿಂದ ನೂರಾರು ಜನರು ಪಾಲ್ಗೊಂಡಿದ್ದರು.





