ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು ಸೂಕ್ತ ಅರಿವು ಇಲ್ಲದೆ ಹೇಳಿಕೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕಾರಂಜಾ ಮುಳುಗಡೆ ಸಂತ್ರಸ್ತರು ತೀವ್ರವಾಗಿ ಖಂಡಿಸಿದ್ದಾರೆ
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹಾಗೂ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಅವರು ಸಂಯುಕ್ತವಾಗಿ ಪ್ರಕಟಣೆ ನೀಡಿದ್ದು, ʼಸುಮಾರು ನಾಲ್ಕು ದಶಕಗಳಿಂದ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿರುವ ಕಾರಂಜಾ ಸಂತ್ರಸ್ತರ ಬೇಡಿಕೆಗಳ ಬಗ್ಗೆ ಸಚಿವರು ಸದನದಲ್ಲಿ ನೀಡಿದ ಉತ್ತರ ಬೇಜವಾಬ್ದಾರಿಯಾಗಿದೆʼ ಎಂದು ಆರೋಪಿಸಿದ್ದಾರೆ.
ʼವಿಧಾನಮಂಡಲ ಅಧಿವೇಶನದಲ್ಲಿ ಎಂಎಲ್ಸಿ ಎಂ.ಜಿ.ಮುಳೆ ಅವರು ಕಾರಂಜಾ ಸಂತಸ್ತರಿಗೆ ಮಾನವೀಯ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಸಮರ್ಪಕ ಪರಿಹಾರ ನೀಡುವ ಕುರಿತು ಪ್ರಶ್ನಿಸಿದರು, ಅದಕ್ಕೆ ಸಚಿವ ತಂಗಡಗಿ ಅವರು ಸ್ಪಷ್ಟನೆ ನೀಡಲು ವಿಫಲರಾಗಿದ್ದು, ಗಡಿ ಜಿಲ್ಲೆಯ ಜನರಿಗೆ ಅವಮಾನವಾಗುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆʼ ಎಂದು ದೂರಿದ್ದಾರೆ.
ಕಾರಂಜಾ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ, ನ್ಯಾಯಾಲಯದ ತೀರ್ಪುಗಳು, ವಿವಿಧ ಸಮಿತಿಗಳ ಶಿಫಾರಸುಗಳು ಹಾಗೂ ಹಿಂದಿನ ಸರ್ಕಾರಗಳ ಭರವಸೆಗಳಿದ್ದರೂ ಸಹ ರೈತರಿಗೆ ಸಮರ್ಪಕ ಪರಿಹಾರ ದೊರಕಿಲ್ಲ ಎಂಬುದು ಬಹುಕಾಲದಿಂದಲೂ ತಿಳಿದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ಹಾಗೂ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅವರು ನೀಡಿದ ಭರವಸೆಗಳನ್ನು ನೆನಪಿಸಿಕೊಂಡ ಅವರು, ಈ ವಿಷಯದಲ್ಲಿ ಸಮಗ್ರ ಅಧ್ಯಯನ ಮಾಡದೆ ಸಚಿವರು ನೀಡಿದ ಹೇಳಿಕೆ ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದ್ದಾರೆ.
ʼಸಚಿವ ಶಿವರಾಜ ತಂಗಡಿಯವರ ಕಲ್ಯಾಣ ವಿರೋಧಿ ಧೋರಣೆ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರ ಖಂಡಿಸಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ತಿರ್ಮಾನಿಸಲಾಗಿದೆʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ | 3 ವರ್ಷ, 5,100 ಪ್ರಕರಣ; ಮಹಿಳೆಯರ ನಾಪತ್ತೆ ಹಿಂದೆ ಕಳ್ಳಸಾಗಣೆಯ ಕರಿನೆರಳು?!
ಈ ಸಂದರ್ಭದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಕರ ಪಾಟೀಲ ಹುಚಕನಳ್ಳಿ, ಮುಖಂಡರಾದ ವಿನಯ ಮಾಳಗೆ, ರಾಜಪ್ಪಾ ಕೋಸಂ, ರಾಜಕುಮಾರ ಬುಸ್ಸಾ, ಸಂಗಾರೆಡ್ಡಿ ಅವರಾದ, ಮಹಮ್ಮದ್ ಸೋಲಾಪೂರೆ ಬಗದಲ್, ಯೂಸುಫ್ ರೇಕುಳಗಿ, ರೋಹನಕುಮಾರ, ಮಾದಪ್ಪಾ, ರಂಜೋಳ, ವೀರೆಂದ್ರ ಭತಮುರ್ಗ ಸಮಿತಿಯ ಪದಾಧಿಕಾರಿಗಳು ಖಂಡನಾ ಪ್ರಕಟಣೆ ಹೊರಡಿಸಿದ್ದಾರೆ.





