ಅತಿವೇಗದ ಚಾಲನೆ, ಮದ್ಯಪಾನ ಸೇವಿಸಿ ವಾಹನ ಚಾಲನೆ, ಹಾಳಾದ ರಸ್ತೆ, ಅಜಾಗರೂಕತೆ, ತರಬೇತಿ ಕೊರತೆ ಸೇರಿ ವಿವಿಧ ಕಾರಣಗಳಿಂದ ಬೀದರ್ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಿಂದಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ಬೀದರ್ ಜಿಲ್ಲೆಯ ವಿವಿಧೆಡೆ 2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ 10 ತಿಂಗಳಲ್ಲಿ 818 ರಸ್ತೆ ಅಪಘಾತ ಸಂಭವಿಸಿವೆ. 263 ಜನರು ಪ್ರಾಣ ಕಳೆದುಕೊಂಡಿದ್ದಾರೆ. 1,111 ಮಂದಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಾರಿಗೆ ಇಲಾಖೆ ನೀಡಿದ ಮಾಹಿತಿಯಿಂದ ತಿಳಿದು ಬಂದಿದೆ.
ಕಳೆದ ಆಗಸ್ಟ್ನಲ್ಲಿ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯ ಜನವಾಡ ಸಮೀಪ ಕಾರು-ಬೈಕ್ ಮಧ್ಯೆ ಸಿನಿಮೀಯ ರೀತಿಯಲ್ಲಿ ನಡೆದ ಭೀಕರ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದ. ಅತಿವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿತು. ಡಿಕ್ಕಿಯ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ಬೈಕ್ ಮೇಲಿದ್ದ ಇಬ್ಬರು ಐದಾರು ಅಡಿ ದೂರ ಹಾರಿದರು. ಮತ್ತೋರ್ವ ಸವಾರ ಗಾಯಗೊಂಡಿದ್ದನು. ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ಭೀಕರ ದೃಶ್ಯ ಭಾರಿ ವೈರಲ್ ಆಗಿತು.
ಫೆಬ್ರವರಿ ತಿಂಗಳಲ್ಲಿ ಬೀದರ್ ಕಡೆಯಿಂದ ಸಂತಪೂರ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟೆಂಪೋ ಟ್ರಾವೆಲ್ಸ್ ನಡುವೆ ಡಿಕ್ಕಿಯಾದ ಪರಿಣಾಮ ವೈದ್ಯರೊಬ್ಬರ ಪ್ರಾಣ ಘಟನಾ ಸ್ಥಳದಲ್ಲಿಯೇ ಹೋಗಿತ್ತು. ಈ ಘಟನೆ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಸ್ತಾಪುರ ಟೋಲ್ ಗೇಟ್ ಸಮೀಪ ನಡೆದಿತು. ಇನ್ನು ಬಸವಕಲ್ಯಾಣ ತಾಲೂಕಿನ ಉಮಾಪುರ ಗ್ರಾಮದ ಬಳಿ ವೇಗವಾಗಿ ಬಂದ ಗೂಡ್ಸ್ ಗಾಡಿಯೊಂದು ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಇಬ್ಬರು ಸ್ಥಳದಲ್ಲೇ ಕೊನೆಯುರೆಳೆದಿದ್ದ ಘಟನೆ ನಡೆದಿತ್ತು.

2025ರ ನವೆಂಬರ್ ತಿಂಗಳಲ್ಲಿ ತೆಲಂಗಾಣ ಮೂಲದ 5 ಜನರು ಕಾರಿನಲ್ಲಿ ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಊರಿಗೆ ತೆರಳುವ ವೇಳೆ ಭಾಲ್ಕಿ-ಬೀದರ್ ಹೆದ್ದಾರಿಯ ನೀಲಮನಳ್ಳಿ ತಾಂಡಾ ಬಳಿ ಎದುರಿಗೆ ಬಂದ ಡಿಟಿಡಿಸಿ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿತ್ತು. ಪರಿಣಾಮ ಸ್ಥಳದಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದರು. ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದರು.
ಜಿಲ್ಲೆಯ ನಾನಾ ಕಡೆ ಈ ರೀತಿಯ ರಸ್ತೆ ಅಪಘಾತಗಳ ದುರ್ಘಟನೆ ಸಂಭವಿಸಿವೆ. ಅದರಲ್ಲೂ ಹೆದ್ದಾರಿ ರಸ್ತೆಯಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿರುವುದು ಇದೆ. ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವುದು, ಅತಿಯಾದ ವೇಗ, ತರಬೇತಿ ಕೊರತೆ ಸೇರಿ ಅನೇಕ ಕಾರಣಗಳಿಂದ ಜೀವ ಕಳೆದುಕೊಂಡಿದ್ದಾರೆ. ಯುವ ಸಮೂಹ ಜಿದ್ದಿಗೆ ಬಿದ್ದವರಂತೆ ನಿಯಂತ್ರಣ ತಪ್ಪಿ ಬೈಕ್ ಓಡಿಸಿ ಅಪಘಾತ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಕೇಳಿ ಬರುತ್ತಿದೆ.
ಐದು ವರ್ಷದಲ್ಲಿ ನಡೆದ ಅಪಘಾತ, ಸಾವು ಏನಿದೆ?
ಬೀದರ್ ಜಿಲ್ಲೆಯಲ್ಲಿ 2021ರಿಂದ 2025ರ ಅಕ್ಟೋಬರ್ ಅಂತ್ಯದವರೆಗೆ ಅಂದರೆ 4 ವರ್ಷ 10 ತಿಂಗಳಲ್ಲಿ ಬರೋಬ್ಬರಿ 5,197 ರಸ್ತೆ ಅವಘಡಗಳು ನಡೆದಿವೆ. ಈ ಪೈಕಿ 1,547 ಜನ ಕಣ್ಣು ಮುಚ್ಚಿದರು, 7,044 ಮಂದಿ ಗಾಯಗೊಂಡಿರುವ ಬಗ್ಗೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳೇ ಹೇಳುತ್ತಿವೆ.
2021ರಲ್ಲಿ 1,086 ರಸ್ತೆ ಅಪಘಾತಗಳು ನಡೆದಿವೆ. 270 ಮಂದಿ ಸಾವಿಗೀಡಾಗಿದ್ದು, 1,482 ಮಂದಿ ಗಾಯಗೊಂಡಿದ್ದರು. 2022ರಲ್ಲಿ ನಡೆದ 1,136 ರಸ್ತೆ ಅಪಘಾತಗಳಲ್ಲಿ 332 ಜನ ಪ್ರಾಣ ಕಳೆದುಕೊಂಡಿದ್ದರು. 2024ರಲ್ಲಿ ಸಂಭವಿಸಿದ 1,097 ರಸ್ತೆ ಅಪಘಾತಗಳಲ್ಲಿ 335 ಜನರು ಮೃತಪಟ್ಟಿದ್ದರು. ಇನ್ನು ಕಳೆದ 2024ರಲ್ಲಿ 1,060 ರಸ್ತೆ ಅಪಘಾತ ಸಂಭವಿಸಿದವು. ಅದರಲ್ಲಿ 347 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸರಾಸರಿ 300 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಅಪಘಾತ ನಿಯಂತ್ರಣ ಹೇಗೆ?
ಮಾನವ ಜೀವ ಅತ್ಯಂತ ಅಮೂಲ್ಯವಾದದ್ದು, ಅಪಘಾತದಿಂದಾಗುವ ಜೀವ ಹಾನಿ ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಜಾರಿಯಲ್ಲಿದೆ. ಅಪಘಾತ ತಡೆಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೆ ರಸ್ತೆ ಅಪಘಾತ ಮತ್ತು ಅಪಘಾತದಲ್ಲಿ ಅಮಾಯಕರ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿರುವವರ ವಿರುದ್ದ ಜಿಲ್ಲಾ ಪೊಲೀಸರು ಅಭಿಯಾನ ಹಮ್ಮಿಕೊಂಡು ದಂಡ ವಿಧಿಸಿ ಬಿಸಿ ಮುಟ್ಟಿಸಿದರೂ ಅಪಘಾತ ಪ್ರಕರಣಗಳು ಇಳಿಕೆಮುಖ ಕಾಣುತ್ತಿಲ್ಲ.
ʼಅಪಘಾತದ ಪ್ರಮಾಣ ಇಳಿಸಲು ಮತ್ತು ಪ್ರಾಣ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿವರು ಸದಾ ಪ್ರಯತ್ನಿಸುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ, ದ್ವಿಚಕ್ರ ವಾಹನ ಚಾಲಕರು ಹೆಲ್ಮೇಟ್, ಕಾರು ಚಾಲಕರು ಸೀಟ್ ಬೇಲ್ಟ್ ತಪ್ಪದೇ ಧರಿಸುವುದು, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಅಭಿಯಾನ ಹಮ್ಮಿಕೊಂಡು ಸೂಚಿಸಲಾಗುತ್ತಿದೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದರು.
ʼಅಪಘಾತ ವಲಯಗಳನ್ನು ಗುರುತಿಸಿ, ಅಂತಹ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ವಹಿಸಬೇಕು. ಅಪಘಾತ ಸಂಭವಿಸುವ ರಸ್ತೆಗಳಲ್ಲಿ ಸಂಚಾರ ಚಿಹ್ನೆ, ರಸ್ತೆ ಗುರುತು ಫಲಕ ಅಳವಡಿಸಬೇಕು. ಅವಶ್ಯವಿರುವ ಕಡೆ ಬ್ಯಾರಿಕೇಡ್, ರಸ್ತೆ ಅಗಲೀಕರಣ ಸೇರಿ ಅಗತ್ಯ ಸುರಕ್ಷತಾ ಕ್ರಮವಹಿಸಿ ರಸ್ತೆ ನಿಯಮಗಳ ಪಾಲನೆ ಆಗುವಂತೆ ನೋಡಿಕೊಳ್ಳಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಗಗನ ಫುಲೆ ಹೇಳುತ್ತಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?
ʼಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಯಾಣಿಕರು ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳ ಅರಿವು ಹೊಂದುವುದು ತುಂಬಾ ಅತ್ಯವಶ್ಯಕವಾಗಿದೆ. ನಿಯಮಬಾಹಿರವಾಗಿ ಓಡಿಸುವ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು. ರಾತ್ರಿ 10 ಗಂಟೆಯೊಳಗೆ ಬಾರ್, ರೆಸ್ಟೊರೆಂಟ್, ಧಾಬಾ, ಹೋಟೆಲ್ ಮುಚ್ಚುವಂತೆ ಸೂಚಿಸಬೇಕು. ಪೊಲೀಸ್ ಅಧಿಕಾರಿಗಳು ಸಂಚಾರಿ ನಿಯಮಗಳ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿದರೆ ಅಪಘಾತ ನಿಯಂತ್ರಣ ಸಾಧ್ಯʼ ಎಂದು ʼಈದಿನʼದೊಂದಿಗೆ ಮಾತನಾಡಿ ತಿಳಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




