ಬಹುತ್ವದ ಆಳವಾದ ಅಧ್ಯಯನದೊಂದಿಗೆ ಭಾರತದ ಸೌಹಾರ್ದತೆ ಕಾಪಾಡಬೇಕಾಗಿದೆ. ಬಹುತ್ವ ಮತ್ತು ಸೌಹಾರ್ದತೆ ಭಾರತದ ನಾಡಿಮಿಡಿತಗಳಾಗಿವೆ ಎಂದು ಬಸವಕಲ್ಯಾಣ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಬೀದರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ‘ಭಾಷಾ ಸೌಹಾರ್ದ ಸಂಸ್ಕೃತಿ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣದ ಎರಡನೇ ಗೋಷ್ಠಿಯಲ್ಲಿ ‘ಸೌಹಾರ್ದ ಭಾರತ ‘ ಕುರಿತು ಮಾತನಾಡಿದ ಅವರು, ʼಸಾಂಸ್ಕೃತಿಕ ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಸಹಿಷ್ಣುತೆಗಳು ಸೌಹಾರ್ದ ಭಾರತದ ತಾತ್ವಿಕತೆಗಳಾಗಿವೆʼ ಎಂದರು.
ʼಬಹುಭಾಷಿಕ, ಬಹುಸಾಂಸ್ಕೃತಿಕವಾದ ಭಾರತೀಯ ಸಾಮಾಜಿಕ ರಚನೆಯಲ್ಲಿ ಕೂಡಿ ಬಾಳುವ ಭಾವನಾತ್ಮಕ ನಿಲುವೇ ಸೌಹಾರ್ದತೆಯಾಗಿದೆ. ಸಮಾಜ ವಿಜ್ಞಾನಿಗಳು, ದಾರ್ಶನಿಕರು ಮಾತನಾಡಿದ ಸಮಾನತೆಯ ಅಂಶಗಳಲ್ಲಿಯೇ ಸೌಹಾರ್ದತೆ ಅಡಗಿದೆ. ಮಾನವೀಯತೆ ತತ್ವವೇ ಸೌಹಾರ್ದ ಬದುಕಿನ ಬುನಾದಿಯಾಗಿದೆ. ಧಾರ್ಮಿಕ ಅನನ್ಯಯ ಸಂಬಂಧಗಳು, ವೃತ್ತಿ ಅನನ್ಯತೆಯ ಸಂಬಂಧಗಳು, ವ್ಯಕ್ತಿ ಅನನ್ಯತೆಯ ಸಂಬಂಧಗಳು ಕಾಪಿಟ್ಟುಕೊಳ್ಳುವ ತತ್ವವು ಸೌಹಾರ್ದತೆ ಮೈಗೂಡಿಸಿಕೊಂಡಿದೆ. ಸೌಹಾರ್ದತೆ ಹಾಳುಗೆಡವಿ ಆಳುವ ಅಧಿಕಾರ ಕೇಂದ್ರಗಳು ಯಾವುವು ಎಂಬ ಅರಿವು ಮೂಡಿಸುವ ಕೆಲಸ ಇಂದು ಆಗಬೇಕಿದೆʼ ಎಂದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಉದಗೀರ ಉದಯಗಿರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಮೂಲಗೆ ಮಾತನಾಡಿ, ʼಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ತತ್ವವನ್ನು ನಮ್ಮ ಸಾಹಿತ್ಯ ಸದಾ ಸಾರುತ್ತದೆ. ಮಾತಿನಲ್ಲಿ ಮಾತ್ರ ಸೌಹಾರ್ದತೆ ಕುರಿತು ಹೇಳದೆ ಬದುಕಿನಲ್ಲಿ ಅಳವಡಿಸಿಕೊಂಡರೆ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯʼ ಎಂದರು.
ಡಾ.ಸಂಗಶೆಟ್ಟಿ ಪಾಟೀಲ, ಪ್ರಾಚಾರ್ಯ ಡಾ. ಶಂಕರ ಗಣಗೊಂಡ , ಡಾ. ಜಗನ್ನಾಥ ಹೆಬ್ಬಾಳೆ, ಡಾ.ಉಮಾಕಾಂತ ಪಾಟೀಲ, ಮಾತನಾಡಿದರು.
ಇದನ್ನೂ ಓದಿ : ಬೀದರ್ | ಎಲ್ಲರೂ ಒಗ್ಗೂಡಿದಾಗ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ
ಕಾರ್ಯಕ್ರಮದಲ್ಲಿ ರಾಜಕುಮಾರ ಅಲ್ಲೂರೆ, ಸಂಜುಕುಮಾರ ತಾಂದಳೆ, ಮಹಾದೇವಿ ಹೆಬ್ಬಾಳೆ, ಲಕ್ಷ್ಮಿಕಾಂತ ಪಂಚಾಳ, ಅಶೋಕ ಕೋರೆ, ಮಕ್ತಂಬಿ ಎಂ, ರೂತಾ, ಈಶ್ವರಯ್ಯ ಕೋಡಂಬಲ್, ಸ್ವರೂಪಾರಾಣಿ ನಾಗೂರೆ, ಸುನಿತಾ ಕೂಡ್ಲಿಕರ, ಸಂಗಪ್ಪ ತೌಡಿ, ಬಸವರಾಜ ಖಂಡಾಳೆ, ಅಶೋಕ ಕೋರೆ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.





