ಬೀದರ್ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ರಾಜಕೀಯ ಇಚ್ಚಾಶಕ್ತಿ ಅಗತ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷಣ ದಸ್ತಿ ಹೇಳಿದರು.
ವಿಶ್ವ ರೈತ ದಿನಾಚರಣೆಯ ಪ್ರಯುಕ್ತ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಸಹಯೋಗದಲ್ಲಿ ಬೀದರ್ನ ರೈತ ಭವನದಲ್ಲಿ ಮಂಗಳವಾರ ಆಯೋಜಿಸಿದ ದುಂಡು ಮೇಜಿನ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಬೀದರ್ ಜಿಲ್ಲೆಯ ಜೀವನದಿ ಕಾರಂಜಾ ಜಲಾಶಯಕ್ಕೆ ಭೂಮಿ ನೀಡಿದ ಸಂತ್ರಸ್ತರಿಗೆ ಸರ್ಕಾರ ಇನ್ನೂ ಸೂಕ್ತ ಪರಿಹಾರ ದೊರಕದಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ ರೈತರಿಗೆ ಶೀಘ್ರ ಪರಿಹಾರ ದೊರಕಿಸಿಕೊಡಬೇಕುʼ ಎಂದರು.
ʼಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರ ಧೀರ್ಘ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಳೆದ ವರ್ಷ ಬೆಳಗಾವಿ ಚಳಿಗಾಲ ಅಧಿವೇಶನದ ವೇಳೆ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಉಪಸ್ಥಿತಿಯಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕಿದ್ದರೂ ವಿಳಂಬವಾಗಿದೆʼ ಎಂದರು.
ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ರಚನೆಯಾದ ಸಮಿತಿ ಇದೇ ಡಿಸೆಂಬರ್ ಅಂತ್ಯದೊಳಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತರು ಭರವಸೆ ನೀಡಿದ್ದಾರೆ. ಈ ವರದಿ ಸಲ್ಲಿಕೆಯಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅದನ್ನು ಸವಾಲಾಗಿ ತೆಗೆದುಕೊಂಡು ಹೊಸ ವರ್ಷದ ಆರಂಭದಲ್ಲಿ ರೈತರಿಗೆ ಸಿಹಿ ಸುದ್ದಿ ನೀಡಬೇಕುʼ ಎಂದು ಅವರು ಒತ್ತಾಯಿಸಿದರು.

ಹಿರಿಯ ನ್ಯಾಯವಾದಿ, ಹೋರಾಟಗಾರ ಬಾಬುರಾವ ಹೊನ್ನಾ ಮಾತನಾಡಿ, ʼಬರುವ ಜನವರಿ 16ರಂದು ನಡೆಯುವ ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರೈತರಿಗೆ ಕರೆ ನೀಡಿದರು. ರೈತರಿಗೆ ಮಾಸಿಕ ಗೌರವಧನ ನೀಡುವ ವಿಷಯದಲ್ಲೂ ಎಲ್ಲರೂ ಒಕ್ಕೊರಲಿನಿಂದ ಧ್ವನಿ ಎತ್ತುವ ಅಗತ್ಯವಿದೆʼ ಎಂದರು.
ಕಾರಂಜ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಮಾತನಾಡಿ, ʼಬರುವ ಹೊಸ ವರ್ಷದ ಮೊದಲ ತಿಂಗಳಲ್ಲೇ ಸರ್ಕಾರ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು, ಇಲ್ಲದಿದ್ದರೆ ಹೋರಾಟ ಪುನರಾರಂಭವಾಗಲಿದೆʼ ಎಂದು ಎಚ್ಚರಿಸಿದರು.
ಸಭೆಯಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಪುನರಾರಂಭ, ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಹಾಗೂ ರೈತರು ಪಕ್ಷಾತೀತವಾಗಿ ಒಂದಾಗುವ ಅಗತ್ಯ ಎಂಬ ಮೂರು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಎಲ್ಲ ರೈತರು ಕೈ ಎತ್ತಿ ಅಂಗೀಕರಿಸಿದರು.
ಇದನ್ನೂ ಓದಿ : ಬೀದರ್ | ಅಸ್ಪೃಶ್ಯತೆ ಆಚರಣೆ ತಡೆಗೆ ಆಗ್ರಹ
ಸಭೆಯಲ್ಲಿ ಪ್ರಮುಖರಾದ ರಾಜಪ್ಪ ಕೋಸಂ, ಡಾ.ರಾಜಶೇಖರ, ಮಹೇಶ ಗೊರನಾಳಕರ್, ದಶರಥ ಗುರು, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸದಸ್ಯ ವಿನಯಕುಮಾರ್ ಮಾಳಗೆ, ಹರ್ಷವರ್ಧನ್ ರಾಠೋಡ, ಸಂಗಾರೆಡ್ಡಿ ಮೊಹಮ್ಮದ್ ಸೋಲಾಪುರಿ, ಎಂ.ಡಿ.ಯೂಸುಫ್, ಲಕ್ಷ್ಮೀಬಾಯಿ ಕೌದೆ, ತೇಜಮ್ಮ ಹಿಲಾಲಪುರ, ಶಂಕರರಾವ್ ಮನ್ನಳ್ಳಿ, ಶಿವ ಬಗದಲ, ಮಾದಪ್ಪ ಬಸವರಾಜ ಹಿಂದಾ ರೈತರು ಪಾಲ್ಗೊಂಡಿದ್ದರು. ಹಿರಿಯ ಹೋರಾಟಗಾರ ವೀರಭದ್ರಪ್ಪ ಉಪ್ಪಿನ ನಿರೂಪಿಸಿ, ವಂದಿಸಿದರು.





