ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಈಚೆಗೆ ನಡೆದ ಗರ್ಭಿಣಿ ಯುವತಿ ಮಾನ್ಯಳ ಮರ್ಯಾದೆ ಹತ್ಯೆ ಖಂಡಿಸಿ, ದಲಿತ ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕಾಶಗೌಡ ಪಾಟಿಲ ಮತ್ತು ಎಲ್ಲ ಆರೋಪಿಗಳನ್ನು ತೀವ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಹುಮನಾಬಾದ್ ತಾಲೂಕು ಮರ್ಯಾದೆಗೇಡು ಹತ್ಯೆ ವಿರೋಧಿ ಹೋರಾಟ ಸಮಿತಿ ಹಾಗೂ ಎಸ್ಎಫ್ಐ, ಡಿವೈಎಫ್ಐ ಸಂಘಟನೆಗಳ ನೇತ್ರತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಮರ್ಯಾದೆ ಹತ್ಯೆ ಪ್ರಕರಣದ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ʼಮಗಳು ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆಯೇ ಏಳು ತಿಂಗಳ ಗರ್ಭಿಣಿ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಕ್ರೌರ್ಯವನ್ನು ಮರ್ಯಾದಾ ಹತ್ಯಾ ವಿರೋಧಿ ಹೋರಾಟ ಸಮಿತಿಯು ಶೀವ್ರವಾಗಿ ಖಂಡಿಸುತ್ತದೆ. ನಾಗರಿಕ ಸಮಾಜವು ತಲೆ ತಗ್ಗಿಸುವ ಇಂತಹ ಪ್ರಕರಣಗಳು ದಿನಗಳೆದಂತೆ ಹೆಚ್ಚುತ್ತಿವೆ. ರಾಜ್ಯದ ಅನೇಕ ಪ್ರದೇಶಗಳಲ್ಲಿ ಈ ಕೊಲೆಗಳು, ದಾಳಿಗಳು ಜಾತಿ ಅಹಂಕಾರದಿಂದ, ಪ್ರತಿಷ್ಠೆಯಿಂದ ಕೂಡಿವೆ. ಯುವಜನರ ಆಯ್ಕೆಯನ್ನು ಸಹಿಸಲಾರದ ಮನುವಾದಿ ಷಡ್ಯಂತ್ರವೂ ಇದರಲ್ಲಿ ಒಳಗೊಂಡಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಈ ಪ್ರಕರಣವು ಘಟಿಸಿದೆ. ಕೊಲೆಗೈದ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ ಈ ಕ್ರೌರ್ಯದ ಆರೋಪಿಯಾಗಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಮತ್ತು ಈಗ ಹೆತ್ತವರಿಂದಲೇ ಕೊಲೆಯಾಗಿರುವ ಮಾನ್ಯ ಮತ್ತು ಅವಳ ಗಂಡ ವಿವೇಕಾನಂದ ಜೀವ ಬೆದರಿಕೆಯ ಕಾರಣದಿಂದ ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ವಾಸವಾಗಿದ್ದರು. ಮೇಲ್ದಾತಿಯ ತನ್ನ ಹೆತ್ತವರಿಂದ ಇಂತಹದೊಂದು ದಾಳಿ ನಿರೀಕ್ಷಿಸಿದ್ದ ಯುವಕನ ಕುಟುಂಬವು ಮನೆಯ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಿದ್ದರಂತೆ. ಯುವತಿಯ ತಂದೆ ಕೊಡಲಿ ಹಿಡಿದು ಬರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. ತಂದೆ ಹಾಗೂ ಇನ್ನಿತರ ಆರೋಪಿಗಳನ್ನು ನಿನ್ನೆ ದಿನ ಬಂಧಿಸಲಾಗಿದೆʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ʼಸಮಾಜವನ್ನು ಚಾತುರ್ವಣ ವ್ಯವಸ್ಥೆಯತ್ತ ಹೊರಳಿಸುತ್ತಿರುವ ಕೋಮುವಾದಿ ಶಕ್ತಿಗಳು ಮೇಲ್ಪಾತಿಯ ಆಹಂಕಾರವನ್ನು ಪೋಷಿಸುತ್ತಿವೆ. ಮಹಿಳೆಯನ್ನು ತುಚ್ಛಕರಿಸುವ ಮನುಸ್ಮೃತಿಯನ್ನು ಭಾರತದ ತಲೆಯ ಮೇಲೆ ಹೇರಲು ಹೊರಟಿರುವ ದುಷ್ಟ ಪ್ರಯತ್ನಗಳು, ಜನರ ಮನಸನ್ನು ಇಂತಹ ಕ್ರೌರ್ಯಕ್ಕೆ ಸಿದ್ದಗೊಳಿಸುತ್ತಿವೆ. ಜಾತಿ ಹೆಸರಿನ ದೌರ್ಜನ್ಯವೆಂಬ ಭಯೋತ್ಪಾದನೆಯ ಭಾಗವಾಗಿಯೇ ಮರ್ಯಾದಾ ಹತ್ಯೆಗಳು ಘಟಿಸುತ್ತಿವೆ. ಈಚೆಗೆ ಮಗಳು ತನ್ನ ಆಯ್ಕೆಯಂತೆ ಮದುವೆಯಾದರೆ ಅಥವಾ ತಂದೆಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ತಂದೆಯ ಆಸ್ತಿಯಲ್ಲಿ ಮಗಳಿಗೆ ಹಕ್ಕಿಲ್ಲ ಎಂದು ಸುಪ್ರಿಂ ಕೋರ್ಟಿ ಹೇಳಿರುವುದು ತೀವ್ರ ಆತಂಕಕಾರಿಯಾಗಿದೆʼ ಎಂದು ಹೇಳಿದರು.
ʼಮಕ್ಕಳನ್ನೇ ಹತ್ಯೆ ಮಾಡುವ ಹೆತ್ತವರಿಗೆ ನಿರ್ಭಯ ಮತ್ತು ತಮ್ಮ ಬದುಕು ರೂಪಿಸಿಕೊಳ್ಳುವ ಯುವಜನರ ಆಯ್ಕೆಯ ಹಕ್ಕನ್ನು ಕಸಿದುಕೊಂಡ ಭಯ ಉಂಟಾಗುವುದು ಮತ್ತು ಇಂತಹ ಹತ್ಯೆಗಳು ಘಟಿಸಿದಾಗ ಇವುಗಳನ್ನು ತಡೆಗಟ್ಟಲು ಬೇಕಾದ ನಿರ್ದಿಷ್ಟ ಕಾನೂನಿನ ನೆರವು ಇಲ್ಲವಾಗಿದೆ. ಈ ದೇಶದ ಮಹಿಳಾ, ಯುವಜನ ಚಳುವಳಿಗಳು ಮರ್ಯಾದೆ ಹತ್ಯೆ ತಡೆಗಾಗಿ ಕಾಯ್ದೆ ರೂಪಿಸಬೇಕೆಂದು ಆಗ್ರಹಿಸುತ್ತ ಬಂದಿವೆ. ಆದರೆ ಈವರೆಗೂ ಇಂತಹದೊಂದು ಕಾಯ್ದೆ ರೂಪಿಸಲು ಸರಕಾರಗಳಿಗೆ ಸಾಧ್ಯವಾಗಿಲ್ಲʼ ಎಂದು ದೂರಿದರು.
ʼಕರ್ನಾಟಕ ಸರಕಾರವು ಬಸವಣ್ಣನನ್ನು ಸಾಂಸ್ಕೃತಿ ನಾಯಕನೆಂದು ಘೋಷಣೆ ಮಾಡಿದೆ. ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಸಮತೆಯ ನಾಡು ಕಟ್ಟಲು ಶರಣರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಹರಳಯ್ಯ ಮಧುವರಸರ ಮಕ್ಕಳು ತಾರತಮ್ಯದ ಜಾತಿಯನ್ನು ಧಿಕ್ಕರಿಸಿ ಮದುವೆಯಾಗಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ತಮ್ಮ ಮಕ್ಕಳ ಮದುವೆಯನ್ನು ಮಾಡಿದ ಹರಳಯ್ಯ ಮಧುವರಸ ದಂಪತಿಗಳ ಕಣ್ಣು ಕಿತ್ತಿ ಆನೆ ಕಾಲಿಗೆ ಕಟ್ಟಿ ಎಳೆಸಿದ್ದು ಅಂದಿನ ಪುರೋಹಿತಶಾಹಿ ವರ್ಣ ವ್ಯವಸ್ಥೆ, ಈಗಲೂ ಅದೇ ಶಕ್ತಿಗಳು ಜೀವಂತವಾಗಿದ್ದರಿಂದಲೇ ಮರ್ಯಾದೆ ಹೆಸರಿನ ಹತ್ಯೆಗಳು ಜೀವಂತವಾಗಿವೆ. ಇದನ್ನು ಸಾಂಸ್ಕೃತಿಕ ಅಪರಾಧವೆಂದೇ ಪರಿಗಣಿಸಬೇಕಾಗುತ್ತದೆʼ ಎಂದು ತಿಳಿಸಿದರು.
ʼಬಸವಣ್ಣನವರು ಕನಸು ಕಂಡ ಸಮಾನತೆಯ ಸಮಾಜ ಕಟ್ಟುವುದಕ್ಕಾಗಿ ಕಾನೂನು ರೂಪಿಸಬೇಕಾಗಿದ್ದು ಸರಕಾರದ ಹೊಣೆಗಾರಿಕೆಯಾಗಿದೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಮಾತ್ರ ಘೋಷಣೆ ಮಾಡಿದರೆ ಸಾಲದು. ಮರ್ಯಾದಾ ಹತ್ಯೆ ತಡೆಗಾಗಿ ಕೂಡಲೇ ನಿರ್ದಿಷ್ಟ ಕಾನೂನು ರೂಪಿಸಬೇಕು. ಇಂತಹ ಅಮಾನವೀಯ ಪ್ರಕರಣಗಳನ್ನು ನಡೆಯದಂತೆ ಸಾಂವಿಧಾನಿಕ ಮೌಲ್ಯಗಳ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿರುವುದು ಸರಕಾರದ ಹೊಣೆಯಾಗಿದೆ. ಜಾತಿ ಪ್ರಣೀತ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ಹತ್ಯೆ, ದಾಳಿಗಳನ್ನು ತಡೆಗಟ್ಟಲು ಆಟ್ರಾಸಿಟಿ ಕಾಯ್ದೆಯನ್ನು ಬಲಪಡಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ರೈತರ ಸಮಸ್ಯೆ ಪರಿಹಾರಕ್ಕೆ ರಾಜಕೀಯ ಇಚ್ಚಾಶಕ್ತಿ : ಲಕ್ಷ್ಮಣ ದಸ್ತಿ
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಸಂಚಾಲಕ ಶಶಿಕಾಂತ ಡಾಂಗೆ, ಎಸ್ಎಫ್ಐ ತಾಲೂಕು ಸಂಚಾಲಕ ಸೈಯದ್ ಮಿರಾಜೋದ್ದಿನ್, ಹೋರಾಟಗಾರರಾದ ಅಂಬಾಬಾಯಿ ಮಾಳಗೆ, ಪ್ರಭು ಸಂತೋಷಕರ, ಬಸವರಾಜ ಮಾಳಗೆ, ಗೌಸೋದ್ದಿನ್, ರಾಹುಲ್ ಉದ್ದ, ಶಬ್ಬೀರ್, ಯುವರಾಜ್ ಐಹೊಳ್ಳಿ, ಶ್ರೀಮಂತ ಮೇತ್ರೆ ಹಾಗೂ ಮತ್ತಿತರರು ಭಾಗವಹಿಸಿದರು.





