2026ರ ಫೆ.27ರಂದು ಹೊರಡಿಸಿರುವ ಡಿಪಿಎಆರ್ ಆದೇಶವನ್ನು ತಕ್ಷಣ ಹಿಂಪಡೆದು ಪರಿಷ್ಕೃತ ರೋಸ್ಟರ್ ಪದ್ದತಿಯ ಒಳ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಒತ್ತಾಯಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಕರ್ನಾಟಕ ರಾಜ್ಯ ಸರ್ಕಾರ ಭಂಡ ಹಾಗೂ ಭ್ರಷ್ಟ ಸರ್ಕಾರವಾಗಿದ್ದು, ಇದು ನೀಚ ಸರ್ಕಾರವಾಗಿದೆ. ಅಹಿಂದ ವರ್ಗಗಳ ನಾಯಕರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತ ವರ್ಗಗಳಿಗೆ ಮೋಸ ಮಾಡುತ್ತಿದ್ದಾರೆʼ ಎಂದು ಕುಟುಕಿದರು.
ʼಕಳೆದ 35 ವರ್ಷಗಳ ಸಾಮಾಜಿಕ ನ್ಯಾಯದ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿದ್ದರೂ, ಗೆಜೆಟ್ ಪ್ರಕಟಣೆ ನೀಡದೆ 2026ರ ಫೆ.27ರಂದು ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಹೊರಡಿಸಿದ ಆದೇಶವನ್ನು ಹಿಂಪಡೆಯಬೇಕು. ಒಳ ಮೀಸಲಾತಿ ಜಾರಿಗೊಳಿಸದೆ ಹಳೆ ಮೀಸಲಾತಿ ಜಾರಿ ಮಾಡುವ ಮೂಲಕ ಮಾದಿಗ ಹಾಗೂ ಸಂಬಂಧಿತ ಜಾತಿಗಳಿಗೆ ಸಿಗಬೇಕಾಗಿದ್ದ ಸಾವಿರಾರು ಹುದ್ದೆಗಳು ತಪ್ಪಿಸುವ ಹುನ್ನಾರ ನಡೆದಿದೆʼ ಎಂದು ಆರೋಪಿಸಿದರು.
ʼ56,342 ಹುದ್ದೆಗಳ ಭರ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾದ ಸುಮಾರು 3,387ಕ್ಕೂ ಹೆಚ್ಚು ಹುದ್ದೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಈ ಪದ್ದತಿ ಹಿಂಪಡೆಯದಿದ್ದರೆ ಮಾರ್ಚ್ 5ರಂದು ಬೀದರ್ನ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಲಾಗುವುದುʼ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ರೋಹಿದಾಸ ಘೋಡೆ ಮಾತನಾಡಿ, ʼನ್ಯಾಯದ ಹರಿಕಾರ ಎಂದೇ ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತ ವರ್ಗಗಳ ಪೈಕಿ ಹೆಚ್ಚು ಜನಸಂಖ್ಯೆಯುಳ್ಳ ಮಾದಿಗ ಸಮಾಜವನ್ನು ಅನ್ಯಾಯ ಮಾಡಲು ಹೊರಟಿದ್ದಾರೆ. ಇವರು ನೇರವಾಗಿ ಸಿಕ್ಕರೆ ಮೊಟ್ಟೆಯಿಂದ ಹೊಡೆಯಬೇಕು ಎಂದು ಗುಡುಗಿದ ಅವರು, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹಾದೇವಪ್ಪನವರ ರಾಜೀನಾಮೆ ಪಡೆಯದಿದ್ದರೆ ಮಾದಿಗ ಸಮಾಜ ಎಂದಿಗೂ ನಿಮಗೆ ಕ್ಷಮಿಸುವುದಿಲ್ಲʼ ಎಂದರು.
ಮಾದಿಗ ನೌಕರರ ಸಂಘದ ಅಧ್ಯಕ್ಷ ದೇವದಾಸ ತುಮಕುಂಟೆ ಮಾತನಾಡಿ, ʼರಾಜ್ಯ ಸರ್ಕಾರವು 2024ರ ಅ.28 ಹಾಗೂ 2025ರ ಅ.20ರಂದು ಒಳ ಮೀಸಲಾತಿ ಘೋಷಿಸಿ 2025ರ ಡಿ.20ರಂದು ಅಧಿವೇಶನದಲ್ಲಿ ವಿಧೇಯಕ ಅಂಗೀಕರಿಸಿತ್ತು. ಬಳಿಕ ಫೆ.26ರಂದು ರಾಜ್ಯಪಾಲರಿಂದ ಅನುಮೋದನೆ ದೊರೆತಿದ್ದರೂ, ತಕ್ಷಣ ಗೆಜೆಟ್ ಪ್ರಕಟಿಸದೇ ಒಳ ಮೀಸಲಾತಿ ಇಲ್ಲದೆ ನೇಮಕಾತಿ ಮುಂದುವರಿಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿರುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.
ಸಮಾಜದ ಮುಖಂಡ ಕಲ್ಲಪ್ಪ ವೈದ್ಯ ಮಾತನಾಡಿ, ‘ಒಕ್ಕೂಟವು ಶೇ 56ರಷ್ಟು ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದೆ. ಅಲ್ಲದೆ, ಪ.ಜಾ ಶೇ 15 ಅಥವಾ ಶೇ 17ರಷ್ಟು ಮೀಸಲಾತಿಯೊಳಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ನ್ಯಾಯಮೂರ್ತಿ ಸದಾಶಿವ ಆಯೋಗ ಅಥವಾ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಶಿಫಾರಸ್ಸಿನಂತೆ ಒಳ ಮೀಸಲಾತಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಸಚಿವರ ರಾಜೀನಾಮೆ ಪಡೆಯುವಂತೆ ಮನವಿ ಪತ್ರ ಸಲ್ಲಿಸಲಾಗುವುದುʼ ಎಂದರು.
ʼಶಿಕ್ಷಣ ಕ್ಷೇತ್ರದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪಿಎಚ್.ಡಿ.ವರೆಗೆ ವರ್ಗೀಕರಣದ ಅನುಪಾತದಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು. ಉದ್ಯೋಗಗಳಲ್ಲಿ ನೇರ ನೇಮಕಾತಿ, ಬಡ್ತಿ ಹಾಗೂ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೂ ಒಳ ಮೀಸಲಾತಿ ಅನ್ವಯಿಸಬೇಕು. 2001ರಿಂದ ಖಾಲಿ ಉಳಿದಿರುವ ಪ.ಜಾ ಹಾಗೂ ಪ.ಪಂ ಬ್ಯಾಕ್ಲಾಗ್ ಹುದ್ದೆಗಳಿಗಾಗಿ ವಿಶೇಷ ನಿಯಮ ರೂಪಿಸಿ ನೇಮಕಾತಿ ಮಾಡಬೇಕುʼ ಎಂದು ಸಮಿತಿ ಉಪಾಧ್ಯಕ್ಷ ಕಮಲಾಕರ ಹೆಗಡೆ ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಗ್ರಾಪಂ ಮಾಜಿ ಅಧ್ಯಕ್ಷೆಗೆ ಇಲ್ಲ ಸ್ವಂತ ಸೂರು : ಅನ್ನ-ಆಸರೆಗೆ ವೃದ್ಧ ದಂಪತಿ ಪರದಾಟ!
ಒಕ್ಕೂಟದ ಪ್ರಮುಖರಾದ ವಿಜಯಕುಮಾರ ಹಿಪ್ಪಳಗಾಂವ, ಸೂರ್ಯಕಾಂತ ದಂಡಿನ್, ಆಸ್ಕರ್ ಫರ್ನಾಂಡಿಸ್, ಪೀಟರ್ ಶ್ರೀಮಂಡಲ, ಬಸವರಾಜ ಮಾಳಗೆ, ಉಮೇಶ ಗುತ್ತೇದಾರ, ತುಳಸಿರಾಮ ಸೂರ್ಯವಂಶಿ, ಶಿವಣ್ಣ ಹಿಪ್ಪಳಗಾಂವ, ಹರೀಶ ಗಾಯಕವಾಡ, ಗುಂಡಪ್ಪ ಕೋಟೆ, ಅಬ್ರಹಾಂ ಸೂರ್ಯವಂಶಿ, ಸನ್ನಿ ಹಿಪ್ಪಳಗಾಂವ, ಸಂದೀಪ ನಂದಿ, ಪಂಡಿತ ಭಾಗ್ಯಕರ್, ಸಂಜು ಹಿಪ್ಪಳಗಾಂವ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.





