ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯಿತಿಗಳನ್ನು ದುರ್ಬಲ ಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ (VB-G RAM G-2025 ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಕಾರ್ಯಕರ್ತರು ಬೀದರ್ ಸಂಸದ ಸಾಗರ ಖಂಡ್ರೆ ಅವರ ಭಾಲ್ಕಿ ನಿವಾಸದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಸಂಸದ ಸಾಗರ ಖಂಡ್ರೆ ಅವರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ ಮನರೇಗಾ-2005ನ್ನು ಪೂರ್ಣ ಪ್ರಮಾಣದಲ್ಲಿ ಬದಲಾಯಿಸುವ ಕಾಯ್ದೆಯಾಗಿದೆ. ಕಾರ್ಮಿಕರು, ಕಾರ್ಮಿಕ ಗುಂಪುಗಳು, ಚಿಂತಕರು ಹಾಗೂ ಹೋರಾಟಗಾರರ ಜೊತೆ ಸಮಾಲೋಚನೆ ನಡೆಸದೆ ಈ ಮಸೂದೆಯನ್ನು ರಚಿಸಲಾಗಿದೆ. ಉದ್ಯೋಗ ಖಾತ್ರಿಯನ್ನು ಕೇಂದ್ರ ಸರಕಾರದ ಕೇಂದ್ರಿಕೃತ, ಬಜೆಟ್ನ್ನು ನಿಯಂತ್ರಿಸುವ, ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ʼಮನರೇಗಾ ಕೂಲಿ ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡುವ, ಪರಿಹಾರ ನೀಡುವ ಜವಾಬ್ದಾರಿ ಕೇಂದ್ರ ಸರಕಾರದಾಗಿತ್ತು. ಜಿ ರಾಮ್ ಜಿ ಮಸೂದೆ 4(5) ರ ಪ್ರಕಾರ, ಕೇಂದ್ರ ಸರಕಾರದಿಂದ ನಿರ್ಧರಿಸಲ್ಪಟ್ಟ ರಾಜ್ಯವಾರು ಬಜೆಟ್ ಹಂಚಿಕೆಗಳ ಮೂಲಕ ಮಾನವ ದಿನಗಳನ್ನು ನಿರ್ಧರಿಸಲಾಗುತ್ತದೆ. ಪರಿಚ್ಛೇದ 4(6) ರಲ್ಲಿ ಈ ಬಜೆಟ್ ಮಿತಿಯನ್ನು ಮೀರಿದರೆ ರಾಜ್ಯ ಸರಕಾರಗಳ ಹೊರೆಯನ್ನು ಭರಿಸಬೇಕುʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತಿ ಯೋಜನೆಯ ಪ್ರಕಾರ ಕೆಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಬಜೆಟ್ ಹಂಚಿಕೆ ಶೇ 90-10 ರಷ್ಟಿತ್ತು. ಆದರೆ, VB G RAM G 2025ರ ನೂತನ ಮಸೂದೆಯ ಪರಿಚ್ಛೇದ 22(2) ಪ್ರಕಾರ ಬಜೆಟ್ ಶೇ 60-40 ಅನುಪಾತದಲ್ಲಿ ಹಂಚಿಕೆಯಾಗಿದೆ. ಈ ಹಿಂದೆ ವರ್ಷದ ಯಾವುದೇ ದಿನದಲ್ಲಿಯೂ ಕೆಲಸ ಕೇಳುವ ಅಧಿಕಾರ ಕಾರ್ಮಿಕರಿಗಿತ್ತು. ಹೊಸ ಮಸೂದೆಯ ಪ್ರಕಾರ ಕೃಷಿ ಚಟುವಟಿಕೆ ಸಮಯಯದಲ್ಲಿ 60 ದಿನಗಳ ಕಾಲ ಯೊಜನೆ ಸ್ಥಗಿತ ಗೊಳಿಸಲಾಗುವುದು ಹಾಗೂ ವರ್ಷದಲ್ಲಿ ಎರಡು ತಿಂಗಳು ಕೆಲಸ ನಿರಾಕರಿಸುವುದರಿಂದ ಮಹಿಳೆಯರು, ಭೂಹಿನರು ಮತ್ತು ಇತರೆ ಅಂಚಿನಲ್ಲಿರುವ ಸಮುದಾಯಗಳ ಉದ್ಯೋಗದ ಹಕ್ಕಿನಿಂದ ನಿರಾಕರಿಸಿದಂತಾಗುತ್ತದೆʼ ಎಂದು ಹೇಳಿದರು.
ಜಿ ರಾಮ್ ಜಿ ಯೋಜನೆ ಮಹಾತ್ಮ ಗಾಂಧೀಜಿಯವರ ಹೆಸರು ಬದಲಾವಣೆ ಮಾಡುವ ಮೂಲಕ ಮಾಹಾತ್ಮ ಗಾಂಧೀಜಿಯವರ ಆಶಯಗಳ ವಿರೋಧವಾಗಿ ರೂಪುಗೊಂಡಿದೆ. ಅಷ್ಟೆ ಅಲ್ಲದೆ ಕೋಟ್ಯಾಂತರ ಭೂಹೀನ ಕಾರ್ಮಿಕರ, ಮಹಿಳೆಯರ, ಆದಿವಾಸಿಗಳ, ದಲಿತರ ಬದುಕನ್ನು ಸಂಕಷ್ಟಕೊಳಪಡಿಸುತ್ತದೆ. ಡಾ. ಬಾಬಾ ಸಾಹೇಬ ಅಂಬೇಡ್ಕರರ ಸಾಮಾಜಿಕ ನ್ಯಾಯದ ಆಶಯವನ್ನು ಸಂಪೂರ್ಣ ಬದಿಗೆ ಸರಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ದುಡಿಮೆಯ ಗೌರವದ ಹಕ್ಕನ್ನು ಉಳಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ (VB G RAM G) 2025 ಮಸೂದೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಗುರಿ : ಡಾ.ಮಾನಸ
ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕಿ ಸಪ್ನಾದೀಪ ಸೇರಿದಂತೆ ಸಂಘಟನೆಯ ಪ್ರಮುಖರಾದ ಗೀತಾ ಡಿಗಾರೆ, ಸುರೇಖಾ, ರೇಶ್ಮಾ, ಗೀತಾ, ಸುಶೀಲಬಾಯಿ, ರಾಜಕುಮಾರ್, ಲೋಕೇಶ ಕಾಂಬಳೆ, ಮಹಾದೇವ ಮದಕಟ್ಟಿ, ಕೃಷ್ಣ ಸೇರಿದಂತೆ ಎಲ್ಲಾ ತಾಲೂಕಿನ ನರೇಗಾ ಕಾರ್ಮಿಕರು ಪಾಲ್ಗೊಂಡಿದ್ದರು.





