ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸದಲಾಪುರ ಗ್ರಾಮದ ದಲಿತರ ಓಣಿಯಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ತಾಲೂಕು ಘಟಕ ಒತ್ತಾಯಿಸಿದೆ.
ಈ ಸಂಬಂಧ ಸಂಘಟನೆಯ ಪದಾಧಿಕಾರಿಗಳು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ʼಸದಲಾಪುರ ಗ್ರಾಮದ ದಲಿತರ ಓಣಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳ ಭಯ ಕಾಡುತ್ತಿದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪಂಚಾಯತ್ ಅಧಿಕಾರಿಗಳು, ಸದಸ್ಯರು ಸ್ಪಂದಿಸುತ್ತಿಲ್ಲʼ ಎಂದು ದೂರಿದ್ದಾರೆ.
ʼ15ನೇ ಹಣಕಾಸು ಯೋಜನೆ ಹಣವನ್ನು ಮೂಲ ಸೌಕರ್ಯಕ್ಕೆ ಬಳಸದೆ ಗುಡಿ ಗುಂಡಾರಗಳಿಗೆ ಬಳಸುತ್ತಿದ್ದು, ಪಂಚಾಯತ್ ಪಿಡಿಒ, ಅಧ್ಯಕ್ಷರು 15ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ತಾಲೂಕು ಪಂಚಾಯತ್ ಎದುರು ಧರಣಿ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಔರಾದ್ | ಮಾನವೀಯತೆ ಸಂಬಂಧ ಗಟ್ಟಿಗೊಳಿಸಿದ ಶರಣರು : ಶಿವಕುಮಾರ ಘಾಟೆ
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕದ ಜಿಲ್ಲಾಧ್ಯಕ್ಷ ಲೋಕೇಶ ಕಾಂಬಳೆ, ಬಸವಕಲ್ಯಾಣ ತಾಲೂಕಾಧ್ಯಕ್ಷ ಮುಕೇಶ ಪಾಂಡೆ ಸೇರಿದಂತೆ ಪ್ರಮುಖರಾದ ದೇವಾನಂದ ತೊಳೆ, ಭೀಮರೆಡ್ಡಿ ಸಿಂಧನಕೇರಾ, ಗೌತಮ ಖರ್ಗೆ, ಯುವರಾಜ ಐಹೊಳೆ, ಸಾಗರ ರಾಯೋಳ ಮತ್ತಿತರರಿದ್ದರು.





