ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರು ಸಂಕಷ್ಟ, ಅನಾರೋಗ್ಯ ಮತ್ತು ಅವಮಾನಗಳ ನಡುವೆಯೂ ಕುಂದದೆ ತಮ್ಮ ಪತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಿರಂತರ ಬೆಂಬಲ ನೀಡಿದರು. ಅವರ ತ್ಯಾಗ, ಸಹನೆ ಮತ್ತು ಪ್ರೇರಣೆಯೇ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಬಲವಾಗಿ, ಭವ್ಯ ಭಾರತದ ನಿರ್ಮಾಣಕ್ಕೆ ಸ್ಪೂರ್ತಿಯ ಚಿಲುಮೆಯಾದರುʼ ಎಂದು ಅಕ್ಕಾ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ ಹೇಳಿದರು.
ಬೀದರ್ ನಗರದ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತ್ಯೋತ್ಸವ ಪ್ರಯುಕ್ತ ನಡೆದ ಐಎಎಸ್-ಕೆಎಎಸ್ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ, ಕಾನೂನು ಅರಿವು ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಮಹಿಳೆಯರು, ಕಾರ್ಮಿಕರು, ಶೋಷಿತರು ಹಾಗೂ ಹಿಂದುಳಿದ ವರ್ಗದವರು ಸಮಾಜದ ಆಳುವ ವರ್ಗವಾಗಬೇಕು ಎಂಬುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಆದರೆ ಇಂದು ನಾವು ಶಿಕ್ಷಣ ಮತ್ತು ಜ್ಞಾನಾಭ್ಯಾಸದಲ್ಲಿ ನಿರಂತರ ಪ್ರಯತ್ನದ ಕೊರತೆಯಿಂದ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲು ವಿಫಲವಾಗುತ್ತಿದ್ದೇವೆ. ಶಿಕ್ಷಣ, ಶ್ರಮ ಮತ್ತು ಶಿಸ್ತು ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಮಾತ್ರ ಮಹಾಪುರುಷರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.
ʼಸರ್ಕಾರದ ಯೋಜನೆಗಳು ಜನರಿಗೆ ಸಹಾಯ ಮಾಡುವುದಕ್ಕಾಗಿ ಇದ್ದರೂ, ಸದಾ ನೆರವಿನ ಮೇಲೆ ಮಾತ್ರ ಅವಲಂಬಿತವಾಗದೇ ಶಿಕ್ಷಣ, ಉದ್ಯಮಶೀಲತೆ ಮತ್ತು ಪರಿಶ್ರಮದ ಮೂಲಕ ಸ್ವಂತ ಪ್ರಗತಿಗೆ ಪ್ರಯತ್ನಿಸುವುದು ಅಗತ್ಯವಾಗಿದೆ. ಯುವಕರು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಂಡು ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಸ್ವಾಭಿಮಾನದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಾರಿದರು. ಅದೇ ರೀತಿ ಗೌತಮ ಬುದ್ಧ ಅವರು ಆತ್ಮಶಿಸ್ತಿನ ಮಹತ್ವವನ್ನು ಬೋಧಿಸಿದರು. ಅವರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸಿ ಸಮಾಜದ ಎಲ್ಲಾ ವರ್ಗಗಳು ಪ್ರಗತಿ ಸಾಧಿಸಬೇಕುʼ ಎಂದು ಸಲಹೆ ನೀಡಿದರು.

ʼದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಅವರಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಾವಕಾಶಗಳನ್ನು ಒದಗಿಸುವುದರ ಜೊತೆಗೆ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಸುವ ಕೆಲಸವೂ ಸಮಾನವಾಗಿ ಆಗಬೇಕಾಗಿದೆ. ಸರ್ಕಾರ, ಸಮಾಜದ ನಾಯಕರು, ಶಿಕ್ಷಕರು ಮತ್ತು ಪೋಷಕರು ಎಲ್ಲರೂ ಸೇರಿ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಮಾತ್ರ ಸಮಾನತೆ, ಅಭಿವೃದ್ಧಿ ಮತ್ತು ನ್ಯಾಯಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ಬೌದ್ಧ ಸಾಹಿತಿ ಗಂಗಾಧರ ಸೋಸಲೆ ಅವರು ಮಾತನಾಡಿ, ʼರಮಾಬಾಯಿ ಅಂಬೇಡ್ಕರ್ ಅವರ ತ್ಯಾಗ, ಆತ್ಮಬಲ ಹಾಗೂ ಸಾಮಾಜಿಕ ಮೌಲ್ಯಗಳ ಕುರಿತು ಸಮಾಜದಲ್ಲಿ ಅರಿವು ಮೂಡಿಸಬೇಕುʼ ಎಂದು ಕರೆ ನೀಡಿದರು.
ನ್ಯಾಯವಾದಿ ಕೇಶವ ಶ್ರೀಮಾಳೆ ಮಾತನಾಡಿ, ʼಭಾರತೀಯ ಸಂವಿಧಾನ ಸಮಾಜದ ಎಲ್ಲರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಿದೆ. ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರ್ಥೈಸಿಕೊಂಡರೆ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಜಾರಿಯಾಗಲು ಸಾಧ್ಯʼ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ʼಎಲ್ಲ ವರ್ಗದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಭಿಯಾನ ಸಮಿತಿ ಅಧ್ಯಕ್ಷ ಕಾಶಿನಾಥ ಚೆಲ್ವಾ ಮಾತನಾಡಿ, ʼಮುಂದಿನ ದಿನಗಳಲ್ಲಿ ಸ್ಫರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕಾರ್ಯಗಳನ್ನು ಹೆಚ್ಚಾಗಿ ಮಾಡಲಾಗುವುದು. ಜಿಲ್ಲಾದ್ಯಂತ 50ಕ್ಕೂ ಹೆಚ್ಚು ಕಡೆ ಸಂವಿಧಾನ ಜಾಗೃತಿ ಅಭಿಯಾನ ನಡೆಸಲಾಗುವುದುʼ ಎಂದು ತಿಳಿಸಿದರು.
ಸಂತೋಷ ಪೂಜಾರಿ ನೇತೃತ್ವದ ಬೋಧಿ ವೃಕ್ಷ ಯುವಕ ಸಂಘ ಭಜನಾ ಮಂಡಳಿ, ಸುಭಾಷ ನೇತೃತ್ವದ ಭಜನೆ ತಂಡ ಹಾಗೂ ಸಂಗೀತಾ ಕಾಂಬಳೆ ನೇತೃತ್ವದ ಕಲಾ ತಂಡ ಸೇರಿದಂತೆ ಹಲವು ತಂಡಗಳು ರಮಾಬಾಯಿ ಅಂಬೇಡ್ಕರ್ ಮತ್ತು ಬುದ್ಧ ಭೀಮರ ಗಾಯನ ಗಮನ ಸೆಳೆದವು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕೇಜ್ರೀವಾಲ್ ಖುಲಾಸೆ, ಒಂದೊಂದಾಗಿ ಕುಸಿಯುತ್ತಿರುವ ಬಿಜೆಪಿ ಹುನ್ನಾರಗಳು
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷೆ ನಂದಮ್ಮಾ ಕುಂದೆ ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷೆ ಉಷಾಬಾಯಿ ಬನ್ಸುಡೆ, ಕಾರ್ಯಾಧ್ಯಕ್ಷೆ ಕಲ್ಪನಾ ಗೋರನಾಳಕರ್, ಸಮಿತಿಯ ಪ್ರಮುಖರಾದ ಶರಣು ಫುಲೆ, ಶೆಶಿಕಲಾ ಶರ್ಮಾ, ಸೊನಮ್ಮಾ ಕಸ್ತೂರೆ, ಕಮಳಮ್ಮಾ ಸಂತಪೂರೆ, ಜಗದೀಶ್ವರ ಬಿರಾದರ್, ಪಂಚಫುಲಾ ಗಾಯಕವಾಡ, ಕಲಾವತಿ ಕಾಳೆಕರ್, ಶಾರದಾ ಆಳಂದಕರ್, ಇಂದುಮತಿ ಸಾಗರ, ವೀಣಾ ಗುಪ್ತಾ, ಉಜ್ವಲಾ ಪಡಸಾಲೆ, ಶ್ರೀದೇವಿ ಸಿಂಗೆ, ಕಾವೇರಿ ಕಾಳೆಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





