ಬೀದರ್ನ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಿಂದ ಜನವರಿ 22 ರಿಂದ 23 ರವರೆಗೆ ಕುರಿ, ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ರೈತರು ಮುಂಚಿತವಾಗಿ ವಾಟ್ಸಾಪ್ ಸಂಖ್ಯೆ- 9902561957 ಇದಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡು ಆಧಾರ ಕಾರ್ಡ್ ಪ್ರತಿ ಹಾಗೂ ಇತ್ತೀಚಿನ ಎರಡು ಭಾವಚಿತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ತರಬೇತಿಗೆ ಹಾಜರಾಗಬಹುದಾಗಿದೆ. 40 ರೈತರಿಗೆ ತರಬೇತಿ ಅವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ.ಜಾ-ಪ.ಪಂ.ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2024ನೇ ಕ್ಯಾಲೆಂಡರ್ ವರ್ಷದಲ್ಲಿ 2024ರ ಜ.1ರಿಂದ 2024ರ ಡಿಸೆಂಬರ್ ವರೆಗೆ) ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಪರಿಶಿಷ್ಟ ಜಾತಿ ಪರಿಶಿಷ್ಟ ಮತ್ತು ಪಂಗಡದ ಕ್ರೀಡಾಪಟುಗಳುಗೆ ಅರ್ಜಿಗಳನ್ನು ಅಧಿಕೃತ ಜಾಲತಾಣ https://sevasindhu.karnataka.gov.in ಮೂಲಕ 2026ರ ಜನವರಿ 31ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ
ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ನಡೆದ ಬಸ್ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದ ರಹಮತ್ ಬೀ ಅವರ ಕುಟುಂಬಕ್ಕೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು 5 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು.
ಭಾನುವಾರ ಬೀದರ್ನಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ (ಕೆಎಸ್ಎಚ್ಸಿ) ಅಧ್ಯಕ್ಷ ಎಸ್. ಜುಲ್ಫಿಕರ್ ಅಹಮದ್ ಖಾನ್ ಮತ್ತು ಇತರ ಹಿರಿಯ ಜಿಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಿದರು.

ಬೀದರ್ನ ಮೈಲೂರಿನ ನಿವಾಸಿ 80 ವರ್ಷದ ರಹಮತ್ ಬೀ, ನವೆಂಬರ್ 17, 2025 ರಂದು ಮೆಕ್ಕಾ ಮತ್ತು ಮದೀನಾ ನಡುವಿನ ಹೆದ್ದಾರಿಯಲ್ಲಿ ಡೀಸೆಲ್ ಟ್ಯಾಂಕರ್ಗೆ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ 45 ಭಾರತೀಯ ಯಾತ್ರಿಕರಲ್ಲಿ ಒಬ್ಬರು. ಈ ಅಪಘಾತವು ಭೀಕರ ಬೆಂಕಿಗೆ ಕಾರಣವಾಯಿತು, ಇದು ಸಮುದಾಯವನ್ನು ತೀವ್ರ ಶೋಕದಲ್ಲಿ ಮುಳುಗಿಸಿತು.ಘಟನೆಯ ನಂತರ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಹತ್ತಿರದ ಸಂಬಂಧಿಕರಿಗೆ ರೂ. 5 ಲಕ್ಷ ಪರಿಹಾರವನ್ನು ಘೋಷಿಸಿತು.
ʼಪ್ರೀತಿಪಾತ್ರರ ನಷ್ಟಕ್ಕೆ ವಿಶೇಷವಾಗಿ ಪವಿತ್ರ ತೀರ್ಥಯಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ಆರ್ಥಿಕ ನೆರವು ನಿಜವಾಗಿಯೂ ಸರಿದೂಗಿಸಲು ಸಾಧ್ಯವಿಲ್ಲ. ಆದಾಗ್ಯೂ, ಬಲಿಪಶುಗಳ ಕುಟುಂಬಗಳು ಈ ಕಷ್ಟಗಳನ್ನು ಮಾತ್ರ ಎದುರಿಸಲು ಬಿಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ರಹಮತ್ ಬೀ ಅವರ ಕುಟುಂಬದೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆʼ ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಚನ್ನಬಸವೇಶ್ವರ ಗುರುಕುಲದಲ್ಲಿ 4ನೇ ಹಂತದ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆ
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ನಡೆದ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆಯಲ್ಲಿ 2425 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಚನ್ನಬಸವೇಶ್ವರ ಗುರುಕುಲದಲ್ಲಿ ಭಾನುವಾರ 4ನೇ ಹಂತದ ಗುರುಕುಲ ಗೋಲ್ಡನ್ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆ ನಡೆದವು.
ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆ ಸೇರಿ ನೆರೆಯ ತೆಲಂಗಾಣ, ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗದಲ್ಲಿ ಪ್ರಸ್ತುತ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

4ನೇ ಹಂತದ ಪರೀಕ್ಷೆಯಲ್ಲಿ ಬೆಂಗಳೂರು ಸೇರಿ ಸುತ್ತಮುತ್ತಲಿನ ಭಾಗದ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದು ವಿಶೇಷವೆನಿಸಿತು. ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ 100 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಪಿಯುಸಿ ವಿಜ್ಞಾನ ಶಿಕ್ಷಣ, ಕೋಚಿಂಗ್ ಮತ್ತು ಫೀನಲ್ಲಿ ರಿಯಾಯಿತಿ ಸಿಗಲಿದೆ. ಮೊದಲ 25 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಎರಡು ವರ್ಷ ಉಚಿತ ಪಿಯುಸಿ ಶಿಕ್ಷಣ ಮತ್ತು ಕೋಚಿಂಗ್, ವಸತಿ ಸೌಲಭ್ಯ ಪಡೆಯಲಿದ್ದಾರೆ. ನಂತರ 75 ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕೋಚಿಂಗ್, ವಸತಿಯಲ್ಲಿ ಶೇ.50ರಷ್ಟು ರಿಯಾಯಿತಿ ಪಡೆಯಲಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದರು.
ವಿವಿಧ ಪರೀಕ್ಷೆ ಕೇಂದ್ರಗಳಿಗೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ಭೇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಶೀರ್ವದಿಸಿ ಶುಭ ಕೋರಿದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಸೇರಿದಂತೆ ಹಲವರು ಇದ್ದರು.
ಶಾರ್ಟ್ ಸರ್ಕೀಟ್ : 2 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ನಾಶ
ಭಾಲ್ಕಿ ತಾಲ್ಲೂಕಿನ ಬಾಳೂರ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಭಾನುವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಬೆಂಕಿ ತಗುಲಿ ಕಬ್ಬಿನ ಬೆಳೆ ಸುಟ್ಟುಹೋಗಿದೆ.

ಬಾಳೂರ ಗ್ರಾಮದ ಮಂಗಲಾ ಗಣಪತಿ ಎಂಬುವರಿಗೆ ಸೇರಿದ ಸರ್ವೇ ನಂ-41ರಲ್ಲಿ ಬೆಳೆದಿದ್ದ ಒಟ್ಟು 3 ಎಕರೆಯಲ್ಲಿ ಅಂದಾಜು 2ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು, ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇದನ್ನೂ ಓದಿ : ಬೀದರ್ | ಎಟಿಎಂ ದರೋಡೆ ಪ್ರಕರಣ : ಮೃತ ಗಿರಿ ವೆಂಕಟೇಶ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಧಾವಿಸಿ ನಂದಿಸಿದ್ದಾರೆ. ಸಾಲಸೂಲ ಮಾಡಿ ಕಬ್ಬು ಬೆಳೆದು, ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದೆ. ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಬೆಳೆ ನಾಶವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
–ನಿಮ್ಮ ಸಮುದಾಯ, ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಜಾಹಿರಾತು ಮಾಹಿತಿಗಾಗಿ ʼಈದಿನ.ಕಾಮ್ ನ್ಯೂಸ್ ಬೀದರ್ʼ ಸಹಾಯವಾಣಿ 9035053805 ವಾಟ್ಸಪ್ ಸಂಖ್ಯೆಗೆ ಸಂಪರ್ಕಿಸಿ





