ವಸತಿ ಶಾಲೆಯ ಆಡಳಿತಾತ್ಮಕ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಕೇಂದ್ರ ಕಚೇರಿಯಿಂದ
ರೂಪಿಸಲಾಗಿರುವ ಕಾರ್ಯ-ಅಂಶಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾದ ಆರೋಪದ ಮೇಲೆ ಭಾಲ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಶಂಕರ ಅವರನ್ನು ಅಮಾನತು ಮಾಡಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೇಲಾಧಿಕಾರಿಗಳ ತಂಡ ನೀಡಿದ ವರದಿ ಆಧರಿಸಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್ ಅವರು ಜ.14ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಾಂಶುಪಾಲ ಶಂಕರ ಅವರು ನಿಯಮಿತವಾಗಿ ವಸತಿ ಶಾಲೆಯ ತರಗತಿಗಳು ನಡೆಯುತ್ತಿರುವ ಕುರಿತು ಮೇಲುಸ್ತುವಾರಿಯನ್ನು ಸಮರ್ಪಕವಾಗಿ ಮಾಡದಿರುವುದು. ವಿದ್ಯಾರ್ಥಿಗಳ ದೈನಂದಿನ ಕಾರ್ಯಗಳ ಪಾಲನೆಯ ನಿರ್ವಹಣೆಯ ಮೇಲುಸ್ತುವಾರಿ ನೋಡದಿರುವುದು. 2024-25ನೇ ಶೈಕ್ಷಣಿಕ ಸಾಲಿನಲ್ಲಿ 21 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಶೇ 43.24ರಷ್ಟು ಫಲಿತಾಂಶಕ್ಕೆ ಕುಸಿದಿದೆ. ಈ ಶಾಲೆಯು ಬೀದರ್ ಜಿಲ್ಲೆ ಹಾಗೂ ರಾಜ್ಯದ ಸಂಘದ ವಸತಿ ಶಾಲೆಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವುದು ಸೇರಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕರ್ತವ್ಯಲೋಪ ಎಸಗಿರುವ ಒಟ್ಟು 12 ಅಂಶಗಳ ಪಟ್ಟಿಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿತನ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ-1957 ರ ನಿಯಮ 10(1) (ಡಿ) ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ತಿದ್ದುಪಡಿ ವಿನಿಯಮಗಳು-2025ರಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ಆಗಸದಲ್ಲಿ ಚಿತ್ತಾರ ಮೂಡಿಸಿದ ‘ಏರ್ ಶೋ’





